ಸಿನಿಮಾ ನಟರ ಅಭಿಮಾನಿಯ ಕತೆಗಳು ಈವರೆಗೂ ಸಿನಿಮಾ ಆಗಿವೆ. ಇದೇ ಮೊಟ್ಟ ಮೊದಲ ಬಾರಿಗೆ ಸಾಹಿತಿಯೊಬ್ಬರ ಅಭಿಮಾನಿಯ ಕತೆಯನ್ನು ತೆರೆಯ ಮೇಲೆ ತರಲಾಗುತ್ತಿದೆ. ಯಶ್, ಪುನೀತ್ ಸೇರಿದಂತೆ ಅನೇಕ ನಟರು ತಮ್ಮ ಸಿನಿಮಾಗಳಲ್ಲಿ ನೆಚ್ಚಿನ ಅಭಿಮಾನಿ ಪಾತ್ರ ಮಾಡಿದ್ದಾರೆ. ಡಾ.ರಾಜ್ಕುಮಾರ್, ವಿಷ್ಣುವರ್ಧನ್, ಶಂಕರ್ನಾಗ್ ಹೀಗೆ ಅನೇಕ ಹೆಸರಾಂತ ನಟರ ಅಭಿಮಾನಿಯ ಪಾತ್ರದಲ್ಲಿ ಇವರು ಕಾಣಿಸಿಕೊಂಡಿದ್ದಾರೆ. ಆದರೆ, ಇದೇ ಮೊದಲ ಬಾರಿಗೆ ಸಾಹಿತಿಯೊಬ್ಬರ ಅಭಿಮಾನಿಯ ಕತೆಯು ಸಿನಿಮಾವಾಗಿ ಮೂಡಿ ಬರುತ್ತಿದೆ. ಈ ಚಿತ್ರಕ್ಕೆ ಹಳ್ಳಿ ಸೊಗಡು ಎಂದು ಹೆಸರಿಡಲಾಗಿದ್ದು, ಸಾಹಿತಿ. ಡಾ.ದೊಡ್ಡ ರಂಗೇಗೌಡರ ಅಭಿಮಾನಿಯೊಬ್ಬನ ಕತೆ ಇದಾಗಿದೆ. ಈವರೆಗೂ ನೃತ್ಯ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಕಪಿಲ್ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದು, ಪಕ್ಕಾ ಹಳ್ಳಿಯ ಸೊಗಡಿನಲ್ಲೇ ಚಿತ್ರ ತಯಾರಾಗುತ್ತಿದೆ. ಈ ಚಿತ್ರಕ್ಕಾಗಿ ಹಲವು ವಿಭಿನ್ನ ದೃಶ್ಯಗಳನ್ನು ಹೆಣೆದಿದ್ದಾರೆ ನಿರ್ದೇಶಕರು. ಮೊನ್ನೆಯಷ್ಟೇ ನೆಚ್ಚಿನ ಸಾಹಿತಿಗೆ ಸಾಹಿತ್ಯ ರತ್ನ ಬಿರುದು ನೀಡುವ ದೃಶ್ಯವನ್ನು ಮಧುಗಿರಿಯಲ್ಲಿ ಚಿತ್ರಿಸಿದ್ದಾರೆ. ಮಧುಗಿರಿ ಪಟ್ಟಣದ ದಂಡು ಬಾಗಿಲಿನಿಂದ ಪುರಭವನದವರೆಗೆ ದೊಡ್ಡರಂಗೇಗೌಡರನ್ನು ಅದ್ದೂರಿ ಮೆರವಣಿಗೆಯ ಮೂಲಕ ಕರೆತಂದು, ನಂತರ ಅವರಿಗೆ ಜನಮಾನಸದ ಸಾಹಿತ್ಯ ರತ್ನ ಎಂಬ ಬಿರುದನ್ನು ನೀಡಿ ಗೌರವಿಸು ದೃಶ್ಯವನ್ನು ಶೂಟ್ ಮಾಡಿದ್ದಾರೆ ನಿರ್ದೇಶಕರು. ಈ ಸನ್ನಿವೇಶದಲ್ಲಿ ಡಿಂಗ್ರಿ ನಾಗರಾಜ್, ರಮಾನಂದ್, ಅರವಿಂದ್, ಅರವ್ ಸೂರ್ಯ ಸೇರಿದಂತೆ ಮೊದಲಾದ ಕಲಾವಿದರು ಪಾಲ್ಗೊಂಡಿದ್ದರು. ನಿರ್ದೇಶಕರೇ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ರಚಿಸಿದ್ದಾರೆ. ರಾಗರಮಣ ಸಂಗೀತ ನಿರ್ದೇಶನದಲ್ಲಿ ಹಾಡುಗಳು ಮೂಡಿ ಬಂದಿದ್ದು, ಕೆ.ಬಿ.ಪಂಕಜ ಮಾತುಗಳನ್ನು ಬರೆದಿದ್ದಾರೆ. ಅರವ್ ಸೂರ್ಯ, ಅಕ್ಷ ರಾ, ಶಂಕರ್ ಭಟ್ ಮುಂತಾದ ತಾರಾಬಳಗ ಚಿತ್ರದಲ್ಲಿದೆ.
↧
ಹಳ್ಳಿ ಸೊಗಡಿನ ಅಭಿಮಾನಿ
↧