ಹೊಸದಿಲ್ಲಿ: ಉತ್ತರ ಪ್ರದೇಶದ ಸಮಾಜವಾದಿ ಪಕ್ಷದಲ್ಲಿ ನಡೆಯುತ್ತಿರುವ ಯಾದವೀಕಲಹದ ರಾಜಕೀಯ ಬೆಳವಣಿಗೆ ಯಾರ ಪಾಲಿಗೆ ಲಾಭಕರವಾಗಿ ಪರಿಣಮಿಸಿದೆ? ಸಿ-ವೋಟರ್ ಶುಕ್ರವಾರ ಪ್ರಕಟಿಸಿರುವ ಸಮೀಕ್ಷೆಯ ಪ್ರಕಾರ, ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಪಾಲಿಗೆ ಇತ್ತೀಚಿನ ಬೆಳವಣಿಗೆಗಳೆಲ್ಲವೂ ವರವಾಗಿ, ಅವರ ಜನಪ್ರಿಯತೆ ಹಿಂದೆಂದಿಗಿಂತಲೂ ಹೆಚ್ಚಾಗುತ್ತಿದೆ. ಅವರೀಗ ಹಿಂದಿಗಿಂತಲೂ ಬಲಿಷ್ಠ. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಸಾಂಪ್ರದಾಯಿಕ ನೆಲೆಗಳಲ್ಲಿ ಅಖಿಲೇಶ್ ಜನಪ್ರಿಯತೆ ಹಲವು ಪಟ್ಟು ಬಲಗೊಂಡಿದೆ. ಸೆಪ್ಟೆಂಬರ್ ಮತ್ತು ಅಕ್ಟೋಬರ್ನಲ್ಲಿ ನಡೆಸಿರುವ 2 ಸಮೀಕ್ಷೆಗಳಲ್ಲೂ ಅಖಿಲೇಶ್, ಜನನಾಯಕನಾಗಿ ಹೆಚ್ಚು ಜನಪ್ರಿಯರಾಗುತ್ತಿದ್ದಾರೆ. ಅಪ್ಪ ಮುಲಾಯಂ, ಚಿಕ್ಕಪ್ಪ ಶಿವಪಾಲ್ ಯಾದವ್ ಅವರಿಗೆ ಹೋಲಿಸಿದರೆ ಜನರ ಹೆಚ್ಚಿನ ಒಲವು ಅಖಿಲೇಶ್ ಪರವೇ ಇದೆ ಎನ್ನುತ್ತಿದೆ ಸಮೀಕ್ಷಾ ವರದಿ. 403 ವಿಧಾನಸಭಾ ಕ್ಷೇತ್ರಗಳ 12,221 ಜನರನ್ನು ಸಮೀಕ್ಷೆಗೆ ಒಳಪಡಿಸಿ, ವರದಿ ಪ್ರಕಟಿಸಲಾಗಿದೆ. ಮುಂದಿನ ಚುನಾವಣೆಯಲ್ಲಿ ಮುಲಾಯಂಗಿಂತ ಅಖಿಲೇಶ್ ಅವರೇ ಮುಖ್ಯಮಂತ್ರಿ ಆಗಬೇಕು ಎಂದು 75.7% ಜನರು ಇಚ್ಛೆ ಹೊರಹಾಕಿದ್ದಾರೆ. ರಾಜ್ಯದ ಮುಸ್ಲಿಮರು ಮತ್ತು ಯಾದವರ ಮತಬ್ಯಾಂಕ್ಗಳಲ್ಲಿ ಅಖಿಲೇಶ್ ಅಪ್ಪನಿಗಿಂತ ಹೆಚ್ಚಿನ ಪ್ರಚಾರ ಗಳಿಸಿದ್ದಾರೆ. ಶಿವಪಾಲ್ ಯಾದವ್ಗಿಂತ ಅಖಿಲೇಶ್ಗೆ ಜನಪ್ರಿಯತೆ ಜಾಸ್ತಿ ಇದೆ ಎಂದು 83.1% ಜನರು ಅಭಿಪ್ರಾಯ ತಿಳಿಸಿದ್ದಾರೆ. ಗೂಂಡಾ ರಾಜ್ನಂತಿದ್ದ ಸಮಾಜವಾದಿ ಪಕ್ಷದಲ್ಲಿ ಅಖಿಲೇಶ್ ಕ್ಲೀನ್ ಇಮೇಜ್ ಗಳಿಸಿರುವವುದೇ ಅವರ ಜನಪ್ರಿಯತೆಗೆ ಕಾರಣ ಎಂದು ವರದಿ ತಿಳಿಸಿದೆ.
↧
ಯಾದವೀಕಲಹದಲ್ಲಿ ಅಖಿಲೇಶ್ ಪಾಪ್ಯುಲರ್
↧