ನಂದ ಕಿಶೋರ್ ನಿರ್ದೇಶನದ ಮುಕುಂದ ಮುರಾರಿ ಚಿತ್ರ ಇನ್ನೇನು ಬಿಡುಗಡೆಯ ಹೊಸ್ತಿಲಲ್ಲಿದೆ. ಮೊದಲ ಬಾರಿಗೆ ಸುದೀಪ್ ಮತ್ತು ಉಪೇಂದ್ರ ಒಟ್ಟಾಗಿ ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ. ಸುದೀಪ್, ಇಲ್ಲಿ ಶ್ರೀ ಕೃಷ್ಣನ ಪಾತ್ರದಲ್ಲಿ ನಟಿಸಿದ್ದು, ಅವರಿಗೆ ಹೇಗೆ ದೇವರಂತೆ ಭಾವನೆಗಳನ್ನು ವ್ಯಕ್ತಪಡಿಸಬೇಕೆಂಬ ಗೊಂದಲವಿತ್ತಂತೆ. 'ದೇವರು ಹೇಗಿದ್ದಾನೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಜನ ತಮ್ಮ ಕಲ್ಪನೆಗೆ ಒಂದು ರೂಪ ಕೊಟ್ಟಿದ್ದಾರೆ. ದೇವರಂತೆ ನಟಿಸುವಾಗ ತಾಳ್ಮೆ ಕಲಿತಿದ್ದೇನೆ. ತಾಳ್ಮೆಯಿಂದ ಇರುವುದು ಎಷ್ಟು ಕಷ್ಟ ಎನ್ನುವುದೂ ಅರಿವಿಗೆ ಬಂತು' ಎಂದು ಸುದೀಪ್ ಹೇಳಿದ್ದಾರೆ. 'ಈ ಚಿತ್ರ ಒಪ್ಪಿಕೊಳ್ಳಲು ಕಂಟೆಂಟ್ ಮುಖ್ಯ ಕಾರಣ. ಇವತ್ತಿನ ದಿನ ಈ ಸ್ಟೋರಿಯನ್ನು ಹೇಳಲೇಬೇಕಾದ ಅನಿವಾರ್ಯತೆ ಇದೆ ಅನ್ನಿಸಿತು' ಎಂದಿದ್ದಾರೆ ಅವರು. 'ಉಪೇಂದ್ರ ಅವರ ಬಗ್ಗೆ ತುಂಬ ಗೌರವ ಇದೆ. ಒಂದು ದೃಶ್ಯದಲ್ಲಿ ದೇವರಾಗಿ ಕಾಣಿಸಿಕೊಂಡಿರುವ ನನಗೆ ಅವರು ಮಂಡಿಯೂರಿ ನಮಸ್ಕರಿಸಬೇಕಿತ್ತು. ಅವರ ಸ್ಟಾರ್ಡಮ್ ಇದಕ್ಕೆ ಅಡ್ಡಿ ಬರಲಿಲ್ಲ. ಒಬ್ಬ ಹಿರಿಯ ನಟನಿಗೆ ಇದು ಸುಲಭದ ಮಾತಲ್ಲ. ಅವರು ಸರಾಗವಾಗಿ ನಟಿಸಿದರು. ಉಪೇಂದ್ರ ಸೆಟ್ನಲ್ಲಿ ಕಂಪ್ಲೀಟ್ ಡೆಡಿಕೇಟೆಡ್ ಆಗಿರುತ್ತಾರೆ' ಎಂದು ಉಪ್ಪಿಯನ್ನು ಪ್ರಶಂಸಿಸುತ್ತಾರೆ ಸುದೀಪ್.
↧
ದೇವರ ಪಾತ್ರ ಮಾಡುವುದು ಕಷ್ಟ
↧