Quantcast
Channel: VijayKarnataka
Viewing all articles
Browse latest Browse all 6795

ಗುಮ್ನಾಮಿ ಬಾಬಾ ಭೇಟಿ ಮಾಡಿದ್ದ ಪ್ರಣಬ್‌ ಮುಖರ್ಜಿ

$
0
0

ಫೈಜಾಬಾದ್‌: ವಿಮಾನ ಅಪಘಾತದಲ್ಲಿ 1945ರಲ್ಲಿ ಮೃತಪಟ್ಟರು ಎಂದು ನಂಬಲಾಗಿದ್ದ ನೇತಾಜಿ ಸುಭಾಶ್ಚಂದ್ರ ಬೋಸ್‌ ಅವರು ಗುಮ್ನಾಮಿ ಬಾಬಾ ಹೆಸರಿನಲ್ಲಿ ಬಹುಕಾಲ ಬದುಕಿದ್ದರು ಎಂಬ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರು 1981ರಲ್ಲಿ ಗುಮ್ನಾಮಿ ಬಾಬಾ ಅವರನ್ನು ಭೇಟಿ ಮಾಡಿದ್ದರು ಎಂದು ಬಾಬಾ ಅವರ ಆಪ್ತರಲ್ಲಿ ಒಬ್ಬರಾಗಿದ್ದ ರವೀಂದ್ರ ಶುಕ್ಲಾ ಹೇಳಿದ್ದಾರೆ.

ನೇತಾಜಿ ಸುಭಾಶ್ಚಂದ್ರ ಬೋಸ್‌ ಅವರು ಗುಮ್ನಾಮಿ ಬಾಬಾ ಹೆಸರಿನಲ್ಲಿ ತಲೆಮರೆಸಿಕೊಂಡಿದ್ದರೇ ಎಂಬುದರ ತನಿಖೆ ನಡೆಸುತ್ತಿರುವ ನ್ಯಾಯಮೂರ್ತಿ ವಿಷ್ಣು ಸಹಾಯ್‌ ಆಯೋಗಕ್ಕೆ ಶುಕ್ಲಾ ಈ ವಿಷಯ ತಿಳಿಸಿದ್ದಾರೆ. ಗುಮ್ನಾಮಿ ಬಾಬಾ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ 13 ಮಂದಿಯ ಪೈಕಿ ಶುಕ್ಲಾ ಕೂಡ ಒಬ್ಬರು ಎಂಬುದು ಗಮನಾರ್ಹ.

ಉತ್ತರ ಪ್ರದೇಶ ಸರಕಾರ ರಚಿಸಿರುವ ತನಿಖಾ ಆಯೋಗಕ್ಕೆ ಸಲ್ಲಿಸಿರುವ ಲಿಖಿತ ಹೇಳಿಕೆಯಲ್ಲಿ 'ಗಮ್ನಾಮಿ ಬಾಬಾ ಅವರೇ ನೇತಾಜಿ ಸುಭಾಶ್ಚಂದ್ರ ಬೋಸ್‌ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಅವರ ವಿಶ್ವಾಸ ಗಳಿಸಿ, ಹಲವು ಕಾಲ ಸಂಪರ್ಕದಲ್ಲಿದ್ದು ಸೇವೆ ಮಾಡಿದ್ದರೂ, ಬಾಬಾ ಮುಖದರ್ಶನ ಮಾಡಿದ್ದು ಮಾತ್ರ ಇಹಲೋಕ ತ್ಯಜಿಸಿದ ಬಳಿಕ. ಬಾಬಾ ಅವರ ಮುಖ ನನಗೆ ಈಗಲೂ ಚೆನ್ನಾಗಿ ನೆನಪಿದೆ. ಅವರ ಮುಖ ನೇತಾಜಿ ಸುಭಾಶ್ಚಂದ್ರ ಬೋಸ್‌ ಮುಖವನ್ನೇ ಹೋಲುತ್ತಿತ್ತು,' ಎಂದು ತಿಳಿಸಿದ್ದಾರೆ. ಶುಕ್ಲಾ ಲಿಖಿತ ಹೇಳಿಕೆಯ ಸಾರಾಂಶವಿದು.

'1981-82ನೇ ಇಸವಿ ಅಕ್ಟೋಬರ್‌ ತಿಂಗಳು. ನವರಾತ್ರಿ ಹಬ್ಬದ ದಿನಗಳಲ್ಲಿ ಒಂದು ದಿನ ನನಗೆ ಕರೆ ಕಳಿಸಿದ ಬಾಬಾ, ಅಯೋಧ್ಯೆಯ ಬಿರ್ಲಾ ಧರ್ಮಶಾಲೆಯಲ್ಲಿ ತಂಗಿರುವ ಪಶ್ಚಿಮ ಬಂಗಾಳದ ಗಣ್ಯರೊಬ್ಬರನ್ನು ಸ್ಥಳೀಯ ಮಾರುಕಟ್ಟೆಗೆ ಕರೆದುಕೊಂಡು ಹೋಗಿ, ಶಾಪಿಂಗ್‌ ಮಾಡಲು ಸಹಕರಿಸುವಂತೆ ಸೂಚಿಸಿದರು. ಅದರಂತೆ ನನ್ನ ಬಳಿಯಿದ್ದ ಯೆಜ್ಡಿ ಬೈಕ್‌ನಲ್ಲಿ ಬಂಗಾಳಿ ಗಣ್ಯರನ್ನು ಫೈಜಾಬಾದ್‌ನ ಮಾರುಕಟ್ಟೆಗೆ ಕರೆದುಕೊಂಡು ಹೋದೆ. ಅಲ್ಲಿ ಅವರು ಕೆಲವು ಬಟ್ಟೆ ಮತ್ತು ಒಣಹಣ್ಣುಗಳನ್ನು ಖರೀದಿಸಿದರು. ಬಳಿಕ ಅವರನ್ನು ಬಿರ್ಲಾ ಧರ್ಮಶಾಲೆಗೆ ಬಿಟ್ಟೆ. ಒಂದು ದಿನಪೂರ್ತಿ ಬಂಗಾಳಿ ಗಣ್ಯರೊಂದಿಗೆ ನಾನು ಕಳೆದಿರುವುದರಿಂದ ಅವರ ಮುಖ ಪರಿಚಯ ನನಗೆ ಚೆನ್ನಾಗಿದೆ. ಮಾಜಿ ಕೇಂದ್ರ ಸಚಿವ, ಹಾಲಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರೇ ಆ ವ್ಯಕ್ತಿ,' ಎಂದು ಶುಕ್ಲಾ ಹೇಳಿದ್ದಾರೆ.

ಪ್ರಣಬ್‌ ಮುಖರ್ಜಿ 1980 ಜನವರಿಯಿಂದ 1982 ಜನವರಿ ವರೆಗೆ ಕೇಂದ್ರ ವಾಣಿಜ್ಯ, ಉಕ್ಕು ಮತ್ತು ಗಣಿ ಸಚಿವರಾಗಿ ಸೇವೆ ಸಲ್ಲಿಸಿದ್ದರು, ಬಳಿಕ 1984ರವರೆಗೆ ವಿತ್ತ ಸಚಿವರಾಗಿದ್ದರು.


Viewing all articles
Browse latest Browse all 6795

Trending Articles



<script src="https://jsc.adskeeper.com/r/s/rssing.com.1596347.js" async> </script>