- ಶರಣು ಹುಲ್ಲೂರು
ಸದಭಿರುಚಿಯ ಕಥೆಯೊಂದಿಗೆ ನಿರ್ಮಾಣವಾಗಿತ್ತು ಈ ಹಿಂದೆ ತೆರೆಕಂಡ 'ಅನಂತನ ಆವಾಂತರ' ಚಿತ್ರ. ಹೀಗಾಗಿ ಸುಶೀಲ್ ಮೊಕಾಶಿ ನಟನೆಯ 'ಅನಂತನ ಚೆಲ್ಲಾಟ' ಸಿನಿಮಾದ ಬಗ್ಗೆಯೂ ನಿರೀಕ್ಷೆ ಮೂಡಿತ್ತು. ಲವ್ ಮತ್ತು ಸೆಂಟಿಮೆಂಟ್ ಕತೆಯನ್ನು ಆಧರಿಸಿದ ಚಿತ್ರ ಇದಾಗಿದ್ದರಿಂದ, ಒಳ್ಳೆಯ ಮಾತೂ ಕೇಳಿ ಬಂದಿತ್ತು. ಆದರೆ, ಚಿತ್ರದ ನಿರ್ದೇಶಕ ಎಸ್.ಚಂದ್ರು ಜನಪ್ರಿಯ ಸೂತ್ರಗಳಿಗೆ ಜೋತು ಬಿದ್ದು, ಒಂದೊಳ್ಳೆ ಕತೆಗೆ ಹಾದಿ ತಪ್ಪಿಸಿದ್ದಾರೆ. ಇದರ ಪರಿಣಾಮವಾಗಿ ಚಿತ್ರಕತೆಯ ಮೊದಲರ್ಧದಲ್ಲಿ ಪೆದ್ದಾಗಿ ಕಾಣಿಸುವ ಅನಂತ, ಆನಂತರ ಪೋಲಿತನಕ್ಕೆ ಬೀಳುತ್ತಾನೆ. ಆತನ ತುಂಟಾಟ ಜಾಸ್ತಿ ಆಯಿತು ಅನ್ನುವ ಹೊತ್ತಿಗೆ ಸಡನ್ನಾಗಿ ತನಗೆ ಎಚ್ಐವಿ ಸೋಂಕಿದೆ ಎಂದು ಪ್ರೇಕ್ಷಕರನ್ನು ಬೆಚ್ಚಿಸುತ್ತಾನೆ. ಈತನ ಚೆಲ್ಲಾಟ ಸಹಿಸಿಕೊಳ್ಳುವ ಹೊತ್ತಿಗೆ ಮತ್ತಿನ್ನೇನೋ ಘಟನೆಗಳು ಜರುಗುತ್ತವೆ. ಹೀಗಾಗಿ ಸೂತ್ರವೇ ಇಲ್ಲದ ಗಾಳಿಪಟದಂತೆ ಸಿನಿಮಾ ಮೂಡಿ ಬಂದಿದೆ.
ನಿರ್ದೇಶಕರು ಆಯ್ದುಕೊಂಡ ಕತೆ ವಿಶೇಷವಾಗಿದೆ. ಅದನ್ನು ಕಟ್ಟುವ ಕ್ರಮದಲ್ಲಿ ಎಡವಿದ್ದಾರೆ. ಪೋಲಿತನ ಮತ್ತು ಡಬಲ್ ಮೀನಿಂಗ್ ಡೈಲಾಗ್ಗಳೇ ಪ್ರೇಕ್ಷಕರನ್ನು ಆಕರ್ಷಿಸುವ ಅಂಶಗಳು ಅಂದುಕೊಂಡಂತಿದೆ. ಹಾಗಾಗಿ ಕತೆ ಸಪ್ಪೆ ಅನಿಸುತ್ತದೆ.
ಆತ ಸೋಡಾಬುಡ್ಡಿ ಅನಂತ್ (ಸುಶೀಲ್ ಮೊಕಾಶಿ). ಜತೆಗೆ ಮಹಾನ್ ರಸಿಕ. ಅವನಲ್ಲಿ ಪೆದ್ದುತನವೂ ಬೆರೆತಿರುವುದರಿಂದ ಅವನನ್ನು ಮದುವೆ ಆಗಲು ಯಾರೂ ಮುಂದೆ ಬರುವುದಿಲ್ಲ. ಹುಡುಗಿ ಹೇಗಿದ್ದರೂ ಸರಿ, ತಾನು ಮದುವೆ ಆಗಲೇಬೇಕೆಂದು ಹಠಕ್ಕೆ ಬೀಳುತ್ತಾನೆ ಅನಂತ. ಬ್ರೋಕರ್ ಬೆನ್ನು ಹತ್ತುತ್ತಾನೆ. ಕಮಿಷನ್ ಆಸೆಗೆ ಶ್ರೀಮಂತ ಕುಟುಂಬದ ಹಳ್ಳಿ ಹುಡುಗಿಯನ್ನು ಪರಿಚಯಿಸುತ್ತಾನೆ ಆ ಬ್ರೋಕರ್. ಹುಡುಗಿಯ ಅಣ್ಣಂದಿರಿಗೆ ಅನಂತ್ ಬಗ್ಗೆ ಸುಳ್ಳು ಹೇಳಿ ಮದುವೆಯನ್ನೂ ಮಾಡಿಸುತ್ತಾನೆ. ತಂಗಿಯ ವಿಚಾರದಲ್ಲಿ ಎಂಥ ಕೆಲಸಕ್ಕೂ ಸಿದ್ಧರಿರುವ ಅಣ್ಣಂದಿರಿಗೆ, ತಾವು ಮೋಸ ಹೋದೆವು ಅನ್ನುವ ಅರಿವಾಗುತ್ತದೆ. ಎಚ್ಐವಿ ಕಾಯಿಲೆ ಇರುವ ಹುಡುಗನ ಜತೆ ತಂಗಿಯ ಮದುವೆ ಮಾಡಿದೆವು ಅನ್ನುವುದು ಗೊತ್ತಾಗುತ್ತದೆ. ಅಲ್ಲಿಂದ ಅನಂತ್ ಏನಾಗುತ್ತಾನೆ? ಸಂಕಷ್ಟದಿಂದ ಪಾರಾಗುತ್ತಾನಾ? ಮದುವೆಯಾಗುವ ಹುಡುಗಿ ಏನಾಗುತ್ತಾಳೆ.. ಇವೆಲ್ಲವೂ ಸಿನಿಮಾದಲ್ಲಿವೆ.
ಅನಂತನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸುಶೀಲ್ ಮೊಕಾಶಿ, ಈವರೆಗೂ ನಿರ್ದೇಶಕರಾಗಿ ಗಮನ ಸೆಳೆದವರು. ಈ ಸಿನಿಮಾದಲ್ಲಿ ನಾಯಕರಾಗಿದ್ದಾರೆ. ನಟನೆಯಲ್ಲಿ ಬಹುತೇಕವಾಗಿ ಜಗ್ಗೇಶ್ ಅವರನ್ನು ಅನುಕರಿಸಲು ಹೋಗಿದ್ದಾರೆ. ಅಮೃತಾ ಪಾತ್ರಧಾರಿ ಮಮತಾ ರಾಹುತ್, ಗ್ಲಾಮ್ಗೂ ಜೈ ನಟನೆಗೂ ಸೈ ಅಂದಿದ್ದಾರೆ. ಬುಲೆಟ್ ಪ್ರಕಾಶ್ ಮತ್ತು ಪುಟಾಣಿ ಪಂಟ್ರು ಮಧು ಜುಗಲ್ಬಂದಿ ಒಂದಷ್ಟು ಹೊತ್ತು ನಗಿಸುತ್ತದೆ. ಕೆಲವೇ ದೃಶ್ಯಗಳಲ್ಲಿ ಬಂದು ಹೋಗುವ ಸಂಭಾಷಣೆಕಾರ ಕೇಶವಚಂದ್ರ ಗಮನ ಸೆಳೆದರೆ, ಎಂ.ಎಸ್.ಮೀರಜ್ಕರ್ ಸಂಗೀತದ ಎರಡು ಹಾಡುಗಳು ಇಷ್ಟವಾಗುತ್ತವೆ.
ಚಿತ್ರ : ಅನಂತನ ಚಲ್ಲಾಟ