Quantcast
Channel: VijayKarnataka
Viewing all articles
Browse latest Browse all 6795

ತೆಂಗಿನಕಾಯಿ ಬೆಲೆ ಈಗ ಚೇತರಿಕೆ

$
0
0

-ಬೆಂಬಲ ಬೆಲೆ ನಂತರ ಮಾರುಕಟ್ಟೆಯಲ್ಲಿ ಸುಧಾರಣೆ

-ಟನ್‌ಗೆ 16 ಸಾವಿರ ರೂ. ಕೊಟ್ಟು ಖರೀದಿ

* ಫಾಲಲೋಚನ ಆರಾಧ್ಯ, ಚಾಮರಾಜನಗರ

ಮೂರು ತಿಂಗಳ ಹಿಂದೆಯಷ್ಟೇ ಕುಸಿತ ಕಂಡಿದ ತೆಂಗಿನಕಾಯಿ ಬೆಲೆ ಇದೀಗ ಮಾರುಕಟ್ಟೆಯಲ್ಲಿ ಚೇತರಿಸಿಕೊಂಡಿದ್ದು, ಬೆಳೆಗಾರರು ನಿಟ್ಟುಸಿರು ಬಿಡುವಂತಾಗಿದೆ.

ಜಿಲ್ಲೆಯ ತೋಟಗಾರಿಕೆ ಬೆಳೆ ಪೈಕಿ ತೆಂಗಿಗೆ ಹಿಂದೆ ಅಗ್ರಸ್ಥಾನವಿತ್ತು. ಆದರೆ ಕ್ರಮೇಣ ನುಸಿರೋಗ, ಅಂತರ್ಜಲ ಕುಸಿತದಿಂದ ಬೆಳೆ ಕ್ಷೀಣಿಸಿದೆ. ಪರಿಣಾಮ ಇಳುವರಿಯೂ ಕಡಿಮೆ. ಹಾಗಂತ ಬೇಡಿಕೆ ಹೆಚ್ಚಾಗಿದೆಯೇ? ಅದೂ ಇಲ್ಲ. ಮೂರು ತಿಂಗಳ ಹಿಂದೆಯಷ್ಟೇ ತೆಂಗಿನಕಾಯಿ ಟನ್‌ಗೆ 10 ರಿಂದ 11 ಸಾವಿರಕ್ಕೆ ಇಳಿದಿತ್ತು. ಇದರಿಂದ ತೆಂಗು ಬೆಳೆಗಾರರು ಕಂಗಾಲಾಗಿದ್ದರು. ಅಷ್ಟರಲ್ಲಿ ಸರಕಾರ ಬೆಂಬಲ ಬೆಲೆ ಘೋಷಿಸಿತು. ಉತ್ತಮ ತೆಂಗಿನಕಾಯಿಯನ್ನು ಟನ್‌ಗೆ 16 ಸಾವಿರ ರೂ. ಬೆಂಬಲ ಬೆಲೆಯಲ್ಲಿ ಖರೀದಿಸಲು ಆರಂಭಿಸಿತು. ಅದರ ಪರಿಣಾಮವೋ ಏನೋ, ಮಾರುಕಟ್ಟೆಯಲ್ಲೂ ತೆಂಗಿನಕಾಯಿ ಬೆಲೆ ಏರಿಕೆ ಕಂಡಿತು. ಇದೀಗ ಮಾರುಕಟ್ಟೆಯಲ್ಲಿ ಉತ್ತಮ ಗಾತ್ರ, ಗುಣಮಟ್ಟದ ತೆಂಗಿನಕಾಯಿ ಟನ್‌ಗೆ 17 ಸಾವಿರ ರೂ.ವರೆಗೂ ಮಾರಾಟವಾಗುತ್ತಿದೆ. ಸಾಮಾನ್ಯ ಕಾಯಿಗೆ 15ರಿಂದ 16 ಸಾವಿರ ರೂ.ಗೆ ಮೋಸವಿಲ್ಲ. ಈ ಬೆಳವಣಿಗೆಯಿಂದ ಬೆಳೆಗಾರರು ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದಾರೆ.

ಸರಕಾರಿ ಕೇಂದ್ರದತ್ತ ಬೆಳೆಗಾರ:

ಮಾರುಕಟ್ಟೆಯಲ್ಲಿ ತೆಂಗಿನಕಾಯಿ ದರ ಚೇತರಿಕೆ ಕಾಣಲು ಬೆಂಬಲ ಬೆಲೆ ಕಾರಣ ಎಂದೇ ವಿಶ್ಲೇಷಿಸಲಾಗುತ್ತಿದೆ. ಖಾಸಗಿ ಮಾರುಕಟ್ಟೆಗಳಲ್ಲಿ 10ರಿಂದ 11 ಸಾವಿರಕ್ಕೆ ಟನ್‌ ತೆಂಗಿನಕಾಯಿ ಕೇಳುವುದು ಕಷ್ಟವಿತ್ತು. ಇಂಥ ಸ್ಥಿತಿಯಲ್ಲಿ ಸರಕಾರದ ಖರೀದಿ ಕೇಂದ್ರಗಳಲ್ಲಿ 1 ಟನ್‌ಗೆ 16 ಸಾವಿರ ರೂ. ಕೊಟ್ಟು ಖರೀದಿಸಲಾಯಿತು.

ಆಗ ಸಹಜವಾಗಿಯೇ ಬೆಳೆಗಾರರು ಸರಕಾರದ ಖರೀದಿ ಕೇಂದ್ರಗಳತ್ತ ಮುಖ ಮಾಡಿದರು. ಆಗ ಖಾಸಗಿ ಮಾರುಕಟ್ಟೆಯಲ್ಲೂ ಕಾಯಿ ದರ ಚೇತರಿಸಿಕೊಳ್ಳುವಂತಾಯಿತು.

ಬೆಲೆ ಕುಸಿತದ ಸಂದರ್ಭದಲ್ಲಿ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದ್ದ ಬೆಳೆಗಾರ ಈಗಿನ ಬೆಲೆಯಿಂದ ಸ್ವಲ್ಪ ಸಮಾಧಾನಗೊಂಡಿದ್ದಾನೆ. ಅಂತರ್ಜಲ ಸಮಸ್ಯೆಯಿಂದಾಗಿ ನೀರು ಕೈಕೊಟ್ಟಿದೆ. ಈ ನಡುವೆಯೂ ಒಂದಷ್ಟು ಮರಗಳನ್ನು ಉಳಿಸಿಕೊಂಡಿರುವ ಕೆಲ ರೈತರಿಗೆ ಈ ಬೆಳವಣಿಗೆ ಹರ್ಷ ನೀಡಿದೆ.

ಪ್ರಮಾಣ:

ಕಳೆದ ಮೂರ್ನಾಲು ವರ್ಷಗಳಿಗೆ ಹೋಲಿಕೆ ಮಾಡಿದರೆ ಸುಮಾರು 4 ಲಕ್ಷ ಮರಗಳು ಜಿಲ್ಲೆಯಲ್ಲಿ ನೆಲಕ್ಕುರುಳಿವೆ. ನುಸಿ ರೋಗ, ಸುಳಿ ರೋಗ, ಎಲ್ಲಕ್ಕಿಂತ ಮಿಗಿಲಾಗಿ ಅಂತರ್ಜಲ ಕೊರತೆ ಪರಿಣಾಮ ಮರಗಳು ಸುಳಿ ಒಣಗಿದ್ದವು. ಇದೀಗ ಚಾ.ನಗರ ಭಾಗದಲ್ಲಿ ಒಂದಷ್ಟು ಕೆರೆಗಳಿಗೆ ನೀರು ತುಂಬಿದ ಹಿನ್ನೆಲೆಯಲ್ಲಿ ತೆಂಗಿನ ಮರಗಳು ಕಳೆಗಟ್ಟಿವೆ. ಆದರೂ ಈ ಹಿಂದಿನಷ್ಟು ಇಳುವರಿ ಇಲ್ಲ.

ಜಿಲ್ಲೆಯ ಅಳತೆಗೆ ಸ್ವಲ್ಪ ತೆಂಗು ಹೆಚ್ಚಾಗಿರುವುದು ಸುವರ್ಣಾವತಿ ಜಲಾಶಯದ ಅಚ್ಚುಕಟ್ಟು ವ್ಯಾಪ್ತಿಯಲ್ಲಿ. ಇದರ ವ್ಯಾಪ್ತಿ ಚಾ.ನಗರ ತಾಲೂಕಿನ ಒಂದು ಭಾಗ ಸೇರಿದಂತೆ ಯಳಂದೂರು, ಕೊಳ್ಳೇಗಾಲದವರೆಗೂ ಹರಡಿದೆ. ಈ ಭಾಗದಲ್ಲಷ್ಟೇ ತೆಂಗು ಉತ್ತಮವಾಗಿದೆ. ತೆಂಗಿನ ಕಾಯಿ ಬೆಲೆ ಸ್ವಲ್ಪ ಏರಿಕೆಯಾಗಲು ಉತ್ತರ ಭಾರತದಲ್ಲಿ ತೆಂಗಿನ ಎಣ್ಣೆಗೆ ಬೇಡಿಕೆ ಇರುವುದು, ತೆಂಗಿನಪುಡಿ ರಫ್ತಿನಲ್ಲಿ ಏರಿಕೆ ಕಂಡು ಬಂದಿರುವುದು ಸಹ ಕಾರಣ ಎನ್ನಲಾಗುತ್ತಿದೆ.

9,637 ಕ್ವಿಂಟಾಲ್‌ ಖರೀದಿ

ತೆಂಗಿನಕಾಯಿಯ ಬೆಲೆ ಕುಸಿತವಾಗಿದ್ದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಬೆಂಬಲ ಬೆಲೆಯಡಿ 9,637 ಕ್ವಿಂಟಾಲ್‌ ಕಾಯಿಯನ್ನು ಖರೀದಿಸಲಾಗಿದೆ. ಜಿಲ್ಲೆಯ ಖರೀದಿ ಕೇಂದ್ರಗಳಲ್ಲಿ ಜು. 4ರಿಂದ ಆ. 31ರವರೆಗೆ ಬೆಂಬಲ ಬೆಲೆಯಲ್ಲಿ ತೆಂಗಿನಕಾಯಿಯನ್ನು ಖರೀದಿಸಲು 1.54 ಕೋಟಿ ರೂ. ವ್ಯಯಿಸಲಾಗಿದೆ.

ಚಾ.ನಗರದ ಕೇಂದ್ರದಲ್ಲಿ 216 ಮಂದಿ ಬೆಳೆಗಾರರಿಂದ 5,713 ಕ್ವಿಂಟಾಲ್‌, ಗುಂಡ್ಲುಪೇಟೆಯಲ್ಲಿ 89 ಮಂದಿ ರೈತರಿಂದ 1,909 ಕ್ವಿಂಟಾಲ್‌, ಕೊಳ್ಳೇಗಾಲ ತಾಲೂಕಿನಲ್ಲಿ 75 ಮಂದಿ ರೈತರಿಂದ 2,014 ಕ್ವಿಂಟಾಲ್‌ ತೆಂಗಿನಕಾಯಿಯನ್ನು ಖರೀದಿಸಲಾಗಿದೆ. ಮಾರುಕಟ್ಟೆಯಲ್ಲಿ ಕಾಯಿ ಬೆಲೆ ಚೇತರಿಕೆ ಕಂಡ ನಂತರ ಖರೀದಿ ಕೇಂದ್ರಕ್ಕೆ ಕಾಯಿ ಬರಲಿಲ್ಲ.

-----

ತೆಂಗಿನಕಾಯಿ ಬೆಲೆಯಲ್ಲಿ ಏರಿಕೆ ಆಗಿರುವುದು ಖುಷಿ ವಿಚಾರ. ಆದರೆ, ಬೆಳೆಗಾರರಿಗೆ ಇಂಥ ಏರಿಳಿತದಿಂದ ಆತಂಕ ಉಂಟಾಗಲಿದೆ. ರೈತರ ಉತ್ಪನ್ನಗಳಿಗೆ ಒಂದು ವೈಜ್ಞಾನಿಕ ರೀತಿಯಲ್ಲಿ ಸ್ಥಿರ ಬೆಲೆ ಸಿಗುವಂತಾಗಬೇಕು. ಸರಕಾರ ಬೆಂಬಲ ಬೆಲೆ ಕೊಟ್ಟ ತಕ್ಷಣ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಆಗಲು ಸಾಧ್ಯ. ಈ ಸಂಗತಿಯನ್ನು ಸರಕಾರ ಅರಿಯಬೇಕು.

-ಸಿದ್ದರಾಜು, ರೈತ ಮುಖಂಡ


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಶಿವಸೇನೆ ಬಿಗಿಪಟ್ಟು: ದೇಶ ಗೆದ್ದ ಬಿಜೆಪಿ ವಿಲವಿಲ


ಶುಭ ಫಲಕ್ಕಾಗಿ ಮನೆಯಲ್ಲಿ ಗಾಳಿ ಗಂಟೆ ಹಾಕುವ ಮುನ್ನ ಈ ವಿಚಾರ ತಿಳಿಯಿರಿ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>