Quantcast
Channel: VijayKarnataka
Viewing all articles
Browse latest Browse all 6795

ಮುಂಗಾರು ಮಳೆ-2 ಚಿತ್ರ ವಿಮರ್ಶೆ: ಮಳೆಯ ಉನ್ಮಾದದ ಲೀಲೆ

$
0
0

ಚಿತ್ರ: ಮುಂಗಾರು ಮಳೆ-2

- ಶರಣು ಹುಲ್ಲೂರು

ಕೃತಿಯೊಂದರ ಮರುಸೃಷ್ಟಿ ತೀರಾ ಅಪಾಯ. ಆದಾಗ್ಯೂ ಅಂತಹ ಸಾಹಸ ಕೆಲಸಗಳು ನಡೆಯುತ್ತಲೇ ಇವೆ. ಅಂಥ ಮರು ಸೃಷ್ಟಿಯ ಮತ್ತೊಂದು ಮಾದರಿಯೇ 'ಮುಂಗಾರು ಮಳೆ-2'. ಸಿನಿಮಾವೊಂದು ರೀಮೇಕ್‌ ಆದಾಗ, ಮೂಲ ಚಿತ್ರದೊಂದಿಗೆ ಹೋಲಿಕೆ ನಡೆಯುವುದು ಸಹಜ. ಸಿಕ್ವಲ್‌ ಸಿನಿಮಾ ಆದಾಗಲೂ ತುಲನೆಯಿಂದ ತಪ್ಪಿಸಿಕೊಳ್ಳುವಂತಿಲ್ಲ. ಇಂಥದ್ದೊಂದು ಸಂದಿಗ್ಧಕ್ಕೆ ಎದುರಾಗಿದ್ದಾರೆ ನಿರ್ದೇಶಕ ಶಶಾಂಕ್‌. ಮುಂಗಾರು ಮಳೆ ಮತ್ತು ಮುಂಗಾರು ಮಳೆ-2 ಸಿನಿಮಾ ನಡುವೆ ಕೊಡುಕೊಳ್ಳುವಿಕೆ ಸಾಧ್ಯವಾಗಿದ್ದರೂ, ಮೊದಲ ಮಳೆಗೆ ಹೋಲಿಸಿದರೆ ಎರಡನೆ ಮಳೆಯ ಆರ್ಭಟ ಕೊಂಚ ಕಡಿಮೆ.

ಯೋಗರಾಜ್‌ ಭಟ್ಟರ '...ಮಳೆ'ಯಲ್ಲಿ ಪ್ರೀತಿಯಿತ್ತು, ದೇವದಾಸನಿದ್ದ, ಪ್ರೀತಮ್‌ ಮತ್ತು ನಂದಿನಿಯ ಪ್ರೇಮವಿತ್ತು. ಜತೆಗೆ ಪ್ರೀತಮ್‌ನ ಗಾಢ ವಿರಹವೂ ಪ್ರೇಮಿಗಳನ್ನು ಸೆಳೆದಿತ್ತು. ಇಂತಹ ಆದ್ರ್ರಗೊಳ್ಳುವ ದೃಶ್ಯಗಳು ಎರಡನೇ ಮಳೆಯಲ್ಲಿ ಕಡಿಮೆ. ಶಶಾಂಕ್‌ ಚಿತ್ರಕಥೆಗೆ ಪ್ರಾಮುಖ್ಯತೆ ಕೊಡುವ ನಿರ್ದೇಶಕ. ಕತೆಯನ್ನೇ ನಂಬಿಕೊಂಡವರು. ಆದರೆ, ಈ ಬಾರಿ ಸಿನಿಮಾ ಕಟ್ಟುವಿಕೆಯಲ್ಲಿ ಹೆಚ್ಚು ಶ್ರಮ ತೋರಿದ್ದಾರೆ. ಹೀಗಾಗಿ ಇಡೀ ಸಿನಿಮಾ ಕಲರ್‌ಫುಲ್‌ ಆಗಿದೆ. ಈ ಸೊಗಸಿನಲ್ಲಿ ಕತೆ ಮಂಜಾಗಿದೆ.

ಸಿನಿಮಾದ ಮೊದಲರ್ಧ ಪಾತ್ರಗಳ ಪರಿಚಯ ಮತ್ತು ಅವುಗಳ ಹಿನ್ನೆಲೆಯನ್ನು ಹೇಳುತ್ತಲೇ, ರಾಜಸ್ತಾನವನ್ನು ಸುತ್ತಿಸುತ್ತದೆ. ಅಸಲಿ ಕತೆ ತೆರೆದುಕೊಳ್ಳುವುದೇ ಆ ನಂತರ. ಅವನು ಶ್ರೀಮಂತ ಕುಟುಂಬದ ಪ್ರೀತಂ (ಗಣೇಶ್‌). ಎಕ್ಸೈಟ್‌ಮೆಂಟ್‌ ಹುಡುಕಿಕೊಂಡು ಹೋಗುವುದೇ ಈತನ ಖಯಾಲಿ. ಸಲೀಸಾಗಿ ಹುಡುಗಿಯರ ಹಾರ್ಟ್‌ಗೆ ಇಳಿಯುವ ಈತ, ಬೋರ್‌ ಅನಿಸಿದಾಗ ಅಷ್ಟೇ ಸಲೀಸಾಗಿ ಬಿಟ್ಟು ಹೋಗುವಾತ. ಸೌಂದರ‍್ಯದ ಬೇಟೆಗೆಂದೇ ರಾಜಸ್ತಾನಕ್ಕೆ ಹೊರಟಾಗ ದಾರಿ ಮಧ್ಯೆ ನಂದಿನಿ (ನೇಹಾ ಶೆಟ್ಟಿ) ಸಿಗುತ್ತಾಳೆ. ಅವಳದ್ದು ಮತ್ತೊಂದು ಇಂಟ್ರೆಸ್ಟಿಂಗ್‌ ಕ್ಯಾರೆಕ್ಟರ್‌. ಪರಿಚಯ ಸ್ನೇಹಕ್ಕೆ ತಿರುಗುತ್ತದೆ. ಪ್ರೀತಂ ಎಂಥವನೂ ಅಂತ ಗೊತ್ತಾಗುತ್ತದೆ. ಇವರಿಬ್ಬರೂ ರಾಜಸ್ತಾನವನ್ನು ಒಟ್ಟಾಗಿ ಸುತ್ತುತ್ತಾರೆ. ಪ್ರೀತಮ್‌ಗೆ ಹೇಳದೇ ಕೇಳದೇ ನಂದಿನಿ ರಾತ್ರೋರಾತ್ರಿ ಎಸ್ಕೇಪ್‌ ಆಗುತ್ತಾಳೆ. ಆಗ ಪ್ರೀತಮ್‌ನಲ್ಲಿ ನಿಜವಾದ ಪ್ರೀತಿ ಮೊಳೆತಿರುತ್ತದೆ. ನಂದಿನಿಯೇ ತನ್ನ ಬಾಳಸಂಗಾತಿ ಆಗಬೇಕೆಂಬ ಉತ್ಕಟ ಬಯಕೆ ಕೂಡ. ಆದರೆ, ಅವಳ ಊರು ಯಾವುದು? ಅವರ ಮನೆತನ ಹೇಗೆ? ಯಾವ ವಿಷಯವೂ ಗೊತ್ತಿಲ್ಲದ ಪ್ರೀತಮ್‌, ಅವಳಿಗಾಗಿ ಹಂಬಲಿಸುತ್ತಾನೆ. ಹುಡುಕುತ್ತಾನೆ. ಈ ಹುಡುಕಾಟದ ಕತೆಯೇ ಸಿನಿಮಾದ ದ್ವಿತೀಯಾರ್ಧ. ಇಲ್ಲಿಂದ ಮತ್ತೆ ಮುಂಗಾರು ಮಳೆ ನೆನಪಾಗುತ್ತದೆ. ಪಾತ್ರಗಳು ಮತ್ತೊಂದು ಮುಖವಾಡ ಧರಿಸಿ ಮುಂದೆ ನಿಲ್ಲುತ್ತವೆ.

ಪ್ರೀತಮ್‌ನಾಗಿ ಗಣೇಶ್‌ ಸಮರ್ಥವಾಗಿ ಪಾತ್ರ ನಿಭಾಯಿಸಿದ್ದಾರೆ. ನಗಿಸುತ್ತಲೇ ಭಾವುಕ ದಂಡೆಯಲ್ಲಿ ತಂದು ಕೂರಿಸುತ್ತಾರೆ. ನಾಯಕನ ತಂದೆಯ ನಟನೆಯಲ್ಲಿ ರವಿಚಂದ್ರನ್‌ ಸೂಪರ್‌. ಇವರ ಹಿಂದಿನ ಸಿನಿಮಾದ ಯಾವ ಛಾಯೆಯೂ ಕಾಣಿಸದಂತೆ ಎಚ್ಚರಿಕೆ ವಹಿಸಿದ್ದಾರೆ. ಗ್ಲಾಮ್‌ ಪಾತ್ರಕ್ಕೆ ಮಾತ್ರ ಐಂದ್ರಿತಾ ಸೀಮಿತವಾಗಿದ್ದರೆ, ನಾಯಕಿಯ ತಂದೆಯಾಗಿ ರವಿಶಂಕರ್‌ ಸೈಲೆಂಟ್‌ ಆಗಿ ಗಮನ ಸೆಳೆಯುತ್ತಾರೆ. ಮೊದಲ ಸಿನಿಮಾದಲ್ಲೇ ನಾಯಕಿ ನೇಹಾ ಶೆಟ್ಟಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಹಾಡುಗಳಲ್ಲಿ ಇಂಪಾಗಿರುವ ಸಂಗೀತ ಹಿನ್ನೆಲೆಯಲ್ಲಿ ನೋಡಿದರೆ ಇಷ್ಟವಾಗುವುದಿಲ್ಲ. 'ಸರಿಯಾಗಿ ನೆನಪಿದೆ..' ಮತ್ತು 'ಒಮ್ಮೆ ನೀ..' ಹಾಡುಗಳಂತೆ ಮಿಕ್ಕ ಗೀತೆಗಳು ಕೇಳುವಂತೆ ಪೀಡಿಸುವುದಿಲ್ಲ.

ಶಶಾಂಕ್‌ ದೃಶ್ಯ ಕಟ್ಟುವಲ್ಲಿ ಇಷ್ಟವಾಗುತ್ತಾರೆ. ಅದಕ್ಕೆ ಸಿನಿಮಾಟೋಗ್ರಾಫರ್‌ ಶೇಖರ್‌ ಚಂದ್ರ ಸಾಥ್‌ ನೀಡಿದ್ದಾರೆ. ಮುಂಗಾರು ಮಳೆ-2 ಹೊಸ ರೀತಿಯಲ್ಲೇ ಹೇಳುವುದಕ್ಕೆ ಹೊರಟಿರುವ ಸಿನಿಮಾ. ಆದರೆ, ಮಳೆ ಯಾವಾಗ, ಹೇಗೆ ಕಾಡುತ್ತದೆಯೋ ಹೇಳುವುದಕ್ಕೆ ಆಗದು. ಆ ಮಳೆ ಅನುಭವ ನಿಮ್ಮದಾಗಬೇಕಿದ್ದರೆ, ಮಳೆಯಲ್ಲಿ ನೀವೇ ನೆನೆಯಬೇಕು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>