ಬೆಂಗಳೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್ಒಯು)ದಲ್ಲಿ ಕಂಪ್ಯೂಟರ್ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಮಾಜಿ ಕುಲಪತಿ ಪ್ರೊ.ಎಂ.ಜಿ.ಕೃಷ್ಣನ್ ಮತ್ತಿತರರ ವಿರುದ್ಧದ ಎಫ್ಐಆರ್ಗೆ ಹೈಕೋರ್ಟ್ ಶುಕ್ರವಾರ ಮಧ್ಯಾಂತರ ತಡೆ ನೀಡಿದೆ. ಹಲವು ಆರೋಪಿಗಳು ಸಲ್ಲಿಸಿದ್ದ ಅರ್ಜಿಗಳನ್ನು ಪ್ರತ್ಯೇಕವಾಗಿ ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾ. ಆನಂದ್ ಬೈರಾರೆಡ್ಡಿ ಅವರಿದ್ದ ಏಕ ಸದಸ್ಯಪೀಠ, ಎಂ.ಜಿ. ಕೃಷ್ಣನ್, ಪ್ರೊ.ಪಿ.ಎಸ್.ನಾಯಕ್, ಪ್ರೊ.ಟಿ.ಡಿ.ದೇವೇಗೌಡ, ಡಾ.ರಾಮನಾಥ ನಾಯ್ಡು ಮತ್ತು ಪ್ರೊ.ಬಿ.ಎಸ್.ವಿಶ್ವನಾಥ್ ಅವರುಗಳ ವಿರುದ್ಧದ ಎಫ್ಐಆರ್ಗೆ ತಡೆ ನೀಡಿ ವಿಚಾರಣೆಯನ್ನು ಸೆ.28ಕ್ಕೆ ಮುಂದೂಡಿತು. ಅಲ್ಲದೆ, ದಾಖಲಾದ ಎಲ್ಲ ಅರ್ಜಿಗಳಿಗೂ ಆಕ್ಷೇಪ ಸಲ್ಲಿಸುವಂತೆ ಸರಕಾರಿ ವಕೀಲ ಚೇತನ್ ದೇಸಾಯಿ ಅವರಿಗೆ ಸೂಚಿಸಿತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಪೀಠ ಕೆಎಸ್ಒಯು ಕುಲಪತಿಗಳಾಗಿದ್ದ ಪ್ರೊ.ಕೆ.ಎಸ್.ರಂಗಪ್ಪ ಅವರ ವಿರುದ್ಧದ ವಿಚಾರಣೆಗೆ ಸೆ.1 ರಂದು ತಡೆ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಕೃಷ್ಣನ್ ಪರ ವಕೀಲರಾದ ಎಚ್.ಎಸ್.ಚಂದ್ರಮೌಳಿ ''ಅರ್ಜಿದಾರರ ವಿರುದ್ಧ ಅನಗತ್ಯ ಆರೋಪ ಹೊರಿಸಲಾಗಿದೆ. ಹಿಂದಿನ ಕುಲಪತಿ ಕೈಗೊಂಡಿದ್ದ ನಿರ್ಧಾರಗಳನ್ವಯ ಕ್ರಮ ಕೈಗೊಂಡಿದ್ದಾರೆ ಅಷ್ಟೇ ''ಎಂದು ಪೀಠಕ್ಕೆ ತಿಳಿಸಿದರು. ರಂಗಪ್ಪ ಅವರು ಕೆಎಸ್ಒಯು ಕುಲಪತಿಗಳಾಗಿದ್ದಾಗ 2012-13 ಮತ್ತು 2013-14ರ ಅವಧಿಯಲ್ಲಿ ಕರ್ನಾಟಕ ಪಾರದರ್ಶಕ ಕಾಯ್ದೆ ಉಲ್ಲಂಘನೆ ಮಾಡಿ ಕಂಪ್ಯೂಟರ್ ಹಾಗೂ ಇನ್ನಿತರ ಉಪಕರಣಗಳನ್ನು ಖರೀದಿಸಿದ್ದರು. ಅದಕ್ಕಾಗಿ ಮುಂಬೈ ಮೂಲದ ಕಂಪನಿ ಜೊತೆ ಅಕ್ರಮ ಒಪ್ಪಂದ ಮಾಡಿಕೊಳ್ಳಲಾಗಿತ್ತು ಎಂಬ ಆರೋಪ ಇದೆ. ಈ ಬಗ್ಗೆ ಲೆಕ್ಕ ಪರಿಶೋಧನೆ ನಡೆಸಲಾಗಿತ್ತು,. ಅದರಲ್ಲಿ ಕೆಲವೊಂದು ಅಕ್ರಮಗಳು ನಡೆದಿವೆ ಎಂದು ತನಿಖಾ ವರದಿ ನೀಡಲಾಗಿತ್ತು. ಅದನ್ನು ಆಧರಿಸಿ ರಾಜ್ಯಪಾಲರು ಎಫ್ಐಅರ್ ದಾಖಲು ಮಾಡುವಂತೆ ಸೂಚನೆ ನೀಡಿದ್ದರು. ವಿ.ವಿ.ಯ ಹಣಕಾಸು ಅಧಿಕಾರಿ ಆ.19ರಂದು ಜಯಲಕ್ಷ್ಮೇಪುರಂ ಪೊಲೀಸ್ ಠಾಣೆಯಲ್ಲಿ ಕೆಎಸ್ಒಯು ಕುಲಪತಿಗಳಾಗಿದ್ದ ಪ್ರೊ.ಕೆ.ಎಸ್.ರಂಗಪ್ಪ, ಪ್ರೊ.ಎಂ.ಜಿ.ಕೃಷ್ಣನ್, ಡೀನ್ ಆಗಿದ್ದ ಟಿ.ಡಿ.ದೇವೇಗೌಡ, ಪ್ರೊ.ಬಿ.ಎಸ್.ವಿಶ್ವನಾಥ್, ಡಾ.ಕಮಲೇಶ್ ಮತ್ತು ಪಿ.ಎಸ್.ನಾಯಕ್ ಮತ್ತಿತರರ ವಿರುದ್ಧ ಐಪಿಸಿ 406, 409ರಡಿ ದೂರು ದಾಖಲಿಸಿದ್ದರು. ಅದನ್ನು ಆಧರಿಸಿ ಪೊಲೀಸರು ಎಫ್ಐಅರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
↧
ಕರ್ನಾಟಕ ಮುಕ್ತ ವಿವಿ ಹಗರಣ: ಎಫ್ಐಆರ್ಗೆ ತಡೆ
↧