Quantcast
Channel: VijayKarnataka
Viewing all articles
Browse latest Browse all 6795

ರಾಜ್ಯಕ್ಕೆ ಸುಪ್ರೀಂ ಜಲಾಘಾತ: 3000 ಬದಲು 6000 ಕ್ಯೂಸೆಕ್ ನೀರು

$
0
0

-ತಮಿಳುನಾಡಿಗೆ 7 ದಿನ 6 ಸಾವಿರ ಕ್ಯೂಸೆಕ್ ನೀರು ಹರಿಸಲು ಆದೇಶ-

-ನಾಲ್ಕು ವಾರದೊಳಗೆ ಕಾವೇರಿ ಜಲ ನಿರ್ವಹಣಾ ಮಂಡಳಿ ರಚಿಸಲು ಕೇಂದ್ರಕ್ಕೆ ಸೂಚನೆ-

-ಕೋರ್ಟ್ ಆದೇಶ ಧಿಕ್ಕರಿಸಿ ನಾಡಿನ ಹಿತ ಕಾಯುವಂತೆ ರಾಜ್ಯ ಸರಕಾರದ ಮೇಲೆ ಒತ್ತಡ-

-ಇಂದಿನ ಮಂತ್ರಿಪರಿಷತ್ ಸಭೆಯಲ್ಲಿ ನಿರ್ಣಾಯಕ ನಿರ್ಧಾರ, ಸರ್ವಪಕ್ಷ ಸಭೆಗೆ ಬಿಜೆಪಿ ಬಹಿಷ್ಕಾರ-


* ಸುಭಾಷ್ ಹೂಗಾರ ಹೊಸದಿಲ್ಲಿ

ಕಾವೇರಿ ಉಸ್ತುವಾರಿ ಸಮಿತಿಯ ಆದೇಶ ತುಸು ನಿರಾಳತೆ ಮೂಡಿಸಿದೆ ಎನ್ನುವಷ್ಟರಲ್ಲಿ, ಸುಪ್ರೀಂಕೋರ್ಟ್ ತೀರ್ಪು ಕರ್ನಾಟಕಕ್ಕೆ ಮಂಗಳವಾರ 'ಜಲಾಘಾತ' ನೀಡಿದೆ. ತಮಿಳುನಾಡಿಗೆ ನಿತ್ಯ 3 ಸಾವಿರದ ಬದಲು 6 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಸೂಚಿಸಿದೆ. ಸುಪ್ರೀಂ ಕೋರ್ಟ್ ಆದೇಶ ಧಿಕ್ಕರಿಸುವ ಮೂಲಕ ನಾಡಿನ ಹಿತ ಕಾಪಾಡುವಂತೆ ಸಿದ್ದರಾಮಯ್ಯ ಸರಕಾರದ ಮೇಲೆ ಒತ್ತಡ ಹೆಚ್ಚುತ್ತಿದೆ. 'ಕೋರ್ಟ್ ಆದೇಶ ಪಾಲಿಸಬೇಡಿ, ತ.ನಾಡಿಗೆ ನೀರು ಹರಿಸಬೇಡಿ' ಎಂದು ಕೆಲವು ನ್ಯಾಯಾಂಗ ತಜ್ಞರೂ ಸಲಹೆ ನೀಡಿದ್ದಾರೆ.

ಬುಧವಾರದಿಂದ 10 ದಿನಗಳ ಕಾಲ 3 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡಬೇಕೆಂಬ ಕಾವೇರಿ ಮೇಲುಸ್ತುವಾರಿ ಸಮಿತಿಯ ಆದೇಶವನ್ನು ರದ್ದುಗೊಳಿಸಿರುವ ಸುಪ್ರೀಂ ಕೋರ್ಟ್, ಸೆ.21ರಿಂದ ಏಳು ದಿನಗಳವರೆಗೆ ಪ್ರತಿದಿನ 6 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ ಆದೇಶಿಸಿದೆ. ಅಷ್ಟೇ ಅಲ್ಲ, ಕಾವೇರಿ ಕೊಳ್ಳದ ರಾಜ್ಯಗಳ ನಡುವಿನ ನೀರು ಹಂಚಿಕೆ ವಿವಾದ ಬಗೆಹರಿಸಲು ನಾಲ್ಕು ವಾರಗಳಲ್ಲಿ ಕಾವೇರಿ ಜಲ ನಿರ್ವಹಣಾ ಮಂಡಳಿ ರಚಿಸುವಂತೆಯೂ ಕೇಂದ್ರ ಸರಕಾರಕ್ಕೆ ಸೂಚಿಸಿದೆ.

ನ್ಯಾ. ದೀಪಕ್ ಮಿಶ್ರಾ ಮತ್ತು ನ್ಯಾ. ಉದಯ್ ಲಲಿತ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಈ ಆದೇಶ ನೀಡಿದೆ. ಇದರ ಪರಿಣಾಮವಾಗಿ ಈ ತಿಂಗಳ ಅಂತ್ಯದವರೆಗೆ ಸುಮಾರು 3.8 ಟಿಎಂಸಿ ನೀರನ್ನು ತಮಿಳುನಾಡಿಗೆ ರಾಜ್ಯದ ಜಲಾಶಯಗಳಿಂದ ಹರಿಸಬೇಕಿದೆ.

ಕೋರ್ಟ್‌ನ ಕಲಾಪ ಮಂಗಳವಾರ ಆರಂಭವಾಗುತ್ತಿದ್ದಂತೆಯೇ ಕೇಂದ್ರ ಸರಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿಂಕಿ ಆನಂದ್, ಮೇಲುಸ್ತುವಾರಿ ಸಮಿತಿಯ ಸಭೆಯ ವಿವರ ಮತ್ತು ಆದೇಶವನ್ನು ನ್ಯಾಯಪೀಠದ ಗಮನಕ್ಕೆ ತಂದರು. ಇದಾದ ಮೇಲೆ ಮೊದಲು ವಾದ ಮಂಡಿಸಿದ ರಾಜ್ಯದ ಪರ ವಕೀಲ ಫಾಲಿ ನಾರಿಮನ್ ಮತ್ತು ನಂತರ ವಾದ ಮಂಡಿಸಿದ ತಮಿಳುನಾಡು ಪರ ವಕೀಲ ಶೇಖರ್ ನಾಫಡೆ, ಸೋಮವಾರದ ಮೇಲುಸ್ತುವಾರಿ ಸಮಿತಿಯ ಆದೇಶಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಅದನ್ನು ಒಪ್ಪಿಕೊಳ್ಳಲಾಗದು ಎಂದು ವಾದಿಸಿದರು.

ಕುಡಿಯಲಷ್ಟೇ ನೀರಿದೆ

''ಕುಡಿಯಲು ಅಗತ್ಯವಿರುವಷ್ಟು ನೀರು ಮಾತ್ರ ಈಗ ನಮ್ಮ ಜಲಾಶಯಗಳಲ್ಲಿ ಉಳಿದಿದೆ. ಹೀಗಾಗಿ, ನಿತ್ಯ ಮೂರು ಸಾವಿರ ಕ್ಯೂಸೆಕ್ ನೀರು ಹರಿಸುವ ಸ್ಥಿತಿಯಲ್ಲಿ ಕರ್ನಾಟಕ ಇಲ್ಲ, ಮೇಲುಸ್ತುವಾರಿ ಸಮಿತಿಯ ಈ ಆದೇಶ ಅವೈಜ್ಞಾನಿಕವಾಗಿದೆ, ಯಾವ ಆಧಾರದ ಮೇಲೆ ಈ ನಿರ್ಧಾರಕ್ಕೆ ಸಮಿತಿ ಬಂದಿದೆ ಎಂಬುದೂ ಸ್ಪಷ್ಟವಾಗಿಲ್ಲ. ಮಳೆಯ ಕೊರತೆಯ ಪ್ರಮಾಣವನ್ನು ಮಳೆವರ್ಷದ ಕೊನೆಗೆ ಲೆಕ್ಕ ಹಾಕಬೇಕೇ ಹೊರತು ಈಗಲ್ಲ, ಈಶಾನ್ಯ ಮಾರುತಗಳ ಮಳೆ ಇನ್ನೂ ಆರಂಭವಾಗಿಲ್ಲ,'' ಎಂದು ನಾರಿಮನ್ ಬಲವಾಗಿ ಪ್ರತಿಪಾದಿಸಿದರು.

ತಮಿಳುನಾಡು ಪರ ವಾದಿಸಿದ ಶೇಖರ್ ನಾಫಡೆ ''ನಮ್ಮ ವಾದ ಬಹಳ ಸರಳವಾಗಿದೆ. ಈ ಬಾರಿ ಶೇ.48ರಷ್ಟು ಮಳೆ ಕೊರತೆಯಾಗಿದ್ದರೆ ನಮ್ಮ ರಾಜ್ಯಕ್ಕೆ ಮಂಜೂರಾದ ನೀರಿನ ಪ್ರಮಾಣದಲ್ಲಿ ಶೇ.48ರಷ್ಟನ್ನು ಕಡಿಮೆ ಮಾಡಿ ಉಳಿದ ನೀರನ್ನು ಕರ್ನಾಟಕ ನಮಗೆ ಕೊಡಬೇಕು. ಈ ಆದೇಶ ನೀಡುವಾಗ ಮೇಲುಸ್ತುವಾರಿ ಸಮಿತಿ ಎಲ್ಲ ಅಂಶಗಳನ್ನೂ ಗಮನಕ್ಕೆ ತೆಗೆದುಕೊಂಡಿಲ್ಲ ಮತ್ತು ತನ್ನ ವ್ಯಾಪ್ತಿ ಮೀರಿ ಈ ಆದೇಶ ನೀಡಿದೆ. ನ್ಯಾಯಮಂಡಳಿಯ ಅಂತಿಮ ಆದೇಶದ ವ್ಯಾಪ್ತಿಯೊಳಗೇ ಮೇಲುಸ್ತುವಾರಿ ಸಮಿತಿ ಕೆಲಸ ಮಾಡಬೇಕು. ಆದರೆ, ನ್ಯಾಯಮಂಡಳಿ ತೀರ್ಪಿನ ವ್ಯಾಪ್ತಿ ಮೀರಿ ಸಮಿತಿ ಕೆಲಸ ಮಾಡುತ್ತಿದೆ. ಈ ಸಮಿತಿ ನೀಡಿರುವ ಆದೇಶ ಒಪ್ಪಿಕೊಳ್ಳಲಾಗದು,'' ಎಂದರು.

ಸಮಿತಿ ಬಗ್ಗೆಯೇ ಸಂಶಯ

ಆಗ ನ್ಯಾ.ದೀಪಕ್ ಮಿಶ್ರಾ ಅವರು ''ಮೇಲುಸ್ತುವಾರಿ ಸಮಿತಿಯ ವ್ಯಾಪ್ತಿಯ ಬಗ್ಗೆಯೇ ಕೆಲ ಮೂಲಭೂತ ಸಂಶಯಗಳಿವೆ. ನ್ಯಾಯಮಂಡಳಿಯ ಅಂತಿಮ ಆದೇಶ ಪಾಲನೆಯಾಗುವಂತೆ ನೋಡಿಕೊಳ್ಳುವುದು ಈ ಸಮಿತಿಯ ಜವಾಬ್ದಾರಿ. ವಾಸ್ತವಾಂಶಗಳನ್ನು ಆಧರಿಸಿ ನ್ಯಾಯಮಂಡಳಿ ಆದೇಶವನ್ನು ಎಷ್ಟರ ಮಟ್ಟಿಗೆ ಜಾರಿಗೊಳಿಸಬಹುದು ಮತ್ತು ಎಷ್ಟು ಪ್ರಮಾಣದ ನೀರು ಹರಿಸಬೇಕು ಎಂಬ ಬಗ್ಗೆ ಅದು ಕೋರ್ಟ್‌ಗೆ ಶಿಫಾರಸು ಮಾಡಬಹುದೇ ಹೊರತು, ನೀರು ಹರಿಸುವ ಪ್ರಮಾಣವನ್ನು ನಿರ್ಧರಿಸುವ ಹಕ್ಕು ಈ ಸಮಿತಿಗಿಲ್ಲ,'' ಎಂದರು.

''ಈ ರೀತಿ ನೀರು ಹಂಚಿಕೆಯ ವಿವಾದ ಬಗೆಹರಿಸುವುದಕ್ಕಾಗಿ ನ್ಯಾಯಮಂಡಳಿಯ ಅಂತಿಮ ಆದೇಶದಲ್ಲಿ ಹೇಳಿರುವಂತೆ, ಕಾವೇರಿ ಜಲ ನಿರ್ವಹಣಾ ಮಂಡಳಿ ರಚಿಸುವ ಅಗತ್ಯವಿದೆ. ಮುಂದಿನ ನಾಲ್ಕು ವಾರಗಳೊಳಗೆ ಕೇಂದ್ರ ಸರಕಾರ ಈ ಮಂಡಳಿಯನ್ನು ರಚಿಸಬೇಕು. ಅಲ್ಲಿಯವರೆಗೆ ತಾತ್ಕಾಲಿಕವಾಗಿ ಮೇಲುಸ್ತುವಾರಿ ಸಮಿತಿಯು ನ್ಯಾಯಮಂಡಳಿಯ ಆದೇಶದ ವ್ಯಾಪ್ತಿಯೊಳಗೇ ಕೆಲಸ ನಿರ್ವಹಿಸಬೇಕು,'' ಎಂದು ಸೂಚಿಸಿದರು.

ನಿರ್ವಹಣಾ ಮಂಡಳಿ ರಚಿಸಿ

ಮುಂದಿನ ವಿಚಾರಣೆ (ಸೆ.27) ವೇಳೆಗೆ ಕಾವೇರಿ ಜಲ ನಿರ್ವಹಣಾ ಮಂಡಳಿ ರಚನೆಗೆ ಸಂಬಂಧಿಸಿದ ಅಧಿಸೂಚನೆಯನ್ನು ಹೊರಡಿಸಿ, ಮಂಡಳಿಯ ಸಭೆಯ ದಿನಾಂಕವನ್ನೂ ನಿಗದಿ ಮಾಡಬೇಕು ಎಂದು ಕೇಂದ್ರ ಸರಕಾರದ ಪ್ರತಿನಿಧಿ ಪಿಂಕಿ ಆನಂದ್ ಅವರಿಗೆ ಸೂಚಿಸಿದ ನ್ಯಾಯಪೀಠ, ''1894ರಿಂದಲೂ ಎರಡೂ ರಾಜ್ಯಗಳ ನಡುವೆ ಈ ವಿವಾದ ಇದೆ. ಇನ್ನೂ ಎಲ್ಲಿಯವರೆಗೆ ಹೀಗೇ ಕಾದಾಡುವುದು, ಭವಿಷ್ಯದಲ್ಲೂ ಈ ರೀತಿಯ ಸಮಸ್ಯೆ ಉದ್ಭವಿಸುವ ಸಾಧ್ಯತೆ ಇರುವುದರಿಂದ ಕಾವೇರಿ ಜಲ ನಿರ್ವಹಣಾ ಮಂಡಳಿ ರಚನೆಗೆ ಕ್ರಮ ಕೈಗೊಳ್ಳಬೇಕು,'' ಎಂದು ಸೂಚಿಸಿತು.

ಸರ್ವಪಕ್ಷ ಸಭೆಗೆ ಬಿಜೆಪಿ ಬಹಿಷ್ಕಾರ

ಸಿಎಂ ಸಿದ್ದರಾಮಯ್ಯ ಬುಧವಾರ ಸಂಜೆ ಕರೆದಿರುವ ಸರ್ವಪಕ್ಷಗಳ ಸಭೆಯನ್ನು ಬಿಜೆಪಿ ಬಹಿಷ್ಕರಿಸಲಿದೆ. ಕಳೆದ ಬಾರಿಯ ಸಭೆಯಲ್ಲಿ, ತಮಿಳುನಾಡಿಗೆ ನೀರು ಬಿಡಬಾರದೆಂದು ಬಿಜೆಪಿ ಹೇಳಿತ್ತು. ಆದರೂ ರಾಜ್ಯ ಸರಕಾರ ನೀರು ಹರಿಸಿದೆ. ಈ ಮಧ್ಯೆ ಪ್ರಧಾನಿ ಮಧ್ಯಪ್ರವೇಶಿಸಬೇಕೆಂದು ರಾಜ್ಯ ಸರಕಾರ ಪದೇಪದೆ ಹೇಳುತ್ತಿದೆ. ಕಾವೇರಿ ವಿಷಯದಲ್ಲಿ ರಾಜ್ಯ ಸರಕಾರ ರಾಜಕಾರಣ ಮಾಡುತ್ತಿದೆ ಎಂಬ ಆಕ್ರೋಶವೇ ಬಿಜೆಪಿ ಬಹಿಷ್ಕಾರಕ್ಕೆ ಕಾರಣ.

-----

ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಆವೇಶ, ಉದ್ವೇಗ ಬೇಡ, ಶಾಂತಿ ಕಾಯ್ದುಕೊಳ್ಳಿ. ನಾಡಿನ ಹಿತ, ಜನರ ಕುಡಿಯುವ ನೀರಿನ ಅಗತ್ಯ ಹಾಗೂ ರೈತರ ಹಿತಾಸಕ್ತಿ ಕಾಯಲು ರಾಜ್ಯ ಸರಕಾರ ಬದ್ಧ. ಸರಕಾರಕ್ಕೆ ಇಡೀ ನಾಡು ಸಹಕಾರ ಕೊಡಬೇಕು.

-ಸಿದ್ದರಾಮಯ್ಯ, ಮುಖ್ಯಮಂತ್ರಿ

ರಾಜ್ಯ ಸರಕಾರ ನ್ಯಾಯಾಲಯದ ಆದೇಶವನ್ನು ತಿರಸ್ಕರಿಸುವ ಮೂಲಕ ತೀಕ್ಷ್ಣ ಸಂದೇಶ ರವಾನಿಸಬೇಕು.

-ಬಿ.ವಿ.ಆಚಾರ್ಯ, ಹಿರಿಯ ನ್ಯಾಯವಾದಿ

**

ಜೈಲಿಗೆ ಹೋಗಲೂ ಸಿದ್ಧ: ಪಾಟೀಲ್

ಹೊಸದಿಲ್ಲಿ: ''ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸಲಾಗದ ಸ್ಥಿತಿಯಲ್ಲಿ ನಾವಿದ್ದೇವೆ. ನಮ್ಮ ಕುಡಿಯುವ ನೀರಿನ ಅಗತ್ಯತೆ ಕಡೆಗಣಿಸಿ ಇನ್ಮುಂದೆ ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಸಾಧ್ಯವೇ ಇಲ್ಲ. ಇದರಿಂದಾಗುವ ಪರಿಣಾಮಗಳನ್ನು ಎದುರಿಸಲು ನಾವು ಸಿದ್ಧ,''

ಬುಧವಾರದಿಂದ ಏಳು ದಿನಗಳ ಕಾಲ ನಿತ್ಯ 6 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸಬೇಕೆಂದು ನ್ಯಾ. ದೀಪಕ್ ಮಿಶ್ರಾ ಮತ್ತು ನ್ಯಾ. ಉದಯ್ ಲಲಿತ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಆದೇಶ ಪ್ರಕಟಿಸುವಾಗ ಕೋರ್ಟ್ ಹಾಲ್‌ನಲ್ಲೇ ಉಪಸ್ಥಿತರಿದ್ದ ರಾಜ್ಯದ ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ತಕ್ಷಣ ಹೊರಗೆ ಬಂದು ರಾಜ್ಯದ ವಕೀಲರು ಮತ್ತು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡುವಾಗ ನೀಡಿದ ಮೊದಲ ಪ್ರತಿಕ್ರಿಯೆ ಇದು.

ತುರ್ತು ಅಧಿವೇಶನ?

ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಉಂಟಾಗಿರುವ ಪರಿಸ್ಥಿತಿ ಕುರಿತು ಚರ್ಚಿಸಲು ಒಂದು ದಿನದ ವಿಶೇಷ ತುರ್ತು ಅಧಿವೇಶನ ಕರೆಯುವ ಬಗ್ಗೆ ರಾಜ್ಯ ಸರಕಾರ ಚಿಂತನೆ ನಡೆಸಿದ್ದು, ಬುಧವಾರ ನಡೆಯಲಿರುವ ಸಂಪುಟ ಸಭೆಯ ನಂತರ ಅಧಿವೇಶನ ಕುರಿತು ತೀರ್ಮಾನ ಹೊರಬೀಳುವ ನಿರೀಕ್ಷೆ ಇದೆ.

ಕಾವೇರಿ: ಅನ್ಯಾಯದ ದಾರಿ

ಸೆ.5: ಸೆ.7ರಿಂದ 10 ದಿನ ನಿತ್ಯ 15 ಸಾವಿರ ಕ್ಯೂಸೆಕ್ ನೀರು ಬಿಡಲು ಸುಪ್ರೀಂ ಆದೇಶ

ಸೆ. 10: ಆದೇಶ ಮಾರ್ಪಾಡು ಕೋರಿ ರಾಜ್ಯ ಸರಕಾರ ಅರ್ಜಿ

ಸೆ. 12: ನ್ಯಾಯದ ಬದಲಿಗೆ ಶಿಕ್ಷೆ ಕೊಟ್ಟ ಸುಪ್ರೀಂ. ಮತ್ತೆ 10 ದಿನಗಳ ಕಾಲ ನಿತ್ಯ 12 ಸಾವಿರ ಕ್ಯೂಸೆಕ್ ಬಿಡಲು ಸೂಚನೆ.

ಸೆ. 19: ನಿತ್ಯ 3 ಸಾವಿರ ಕ್ಯೂಸೆಕ್ ನೀರನ್ನು 10 ದಿನ ಹರಿಸಲು ಕಾವೇರಿ ಮೇಲುಸ್ತುವಾರಿ ಸಮಿತಿ ಸೂಚನೆ.

ಸೆ. 20: ಏಳು ದಿನ 6000 ಕ್ಯೂಸೆಕ್ ನೀರು ಬಿಡುಗಡೆಗೆ ಸು.ಕೋರ್ಟ್ ಆದೇಶ

**

ಇಂದು ಸಂಜೆ ಸರ್ವಪಕ್ಷ ಸಭೆ

ಬೆಂಗಳೂರು: ಬುಧವಾರ ಸಂಜೆ ವಿಧಾನಮಂಡಲದ ಉಭಯ ಸದನ ನಾಯಕರು, ರಾಜ್ಯದ ಎಲ್ಲ ಸಂಸದರು, ರಾಜಕೀಯ ಪಕ್ಷಗಳ ನಾಯಕರು, ಕಾವೇರಿ ನದಿ ಪಾತ್ರದ ಜನಪ್ರತಿನಿಧಿಗಳ ಸಭೆ ಕರೆಯಲಾಗಿದೆ. ಈ ಎರಡು ಸಭೆಗಳ ಬಳಿಕ ರಾಜ್ಯ ಸರಕಾರ ತನ್ನ ತೀರ್ಮಾನ ಪ್ರಕಟಿಸಲಿದೆ.

ಕೋರ್ಟ್ ತೀರ್ಪು ಪ್ರಕಟವಾಗುತ್ತಿದ್ದಂತೆ ಮುಖ್ಯಮಂತ್ರಿಯವರು ಜಿ. ಪರಮೇಶ್ವರ್, ಟಿ.ಬಿ. ಜಯಚಂದ್ರ, ದಿನೇಶ್ ಗುಂಡೂರಾವ್ ಸೇರಿದಂತೆ ಸಂಪುಟ ಹಾಗೂ ಪಕ್ಷದ ಹಿರಿಯ ಸಹೋದ್ಯೋಗಿಗಳೊಂದಿಗೆ ಸಮಾಲೋಚನೆ ನಡೆಸಿದರು. ಬಳಿಕ, ದೂರವಾಣಿ ಮೂಲಕ ಎಐಸಿಸಿ ವರಿಷ್ಠರನ್ನೂ ಸಂಪರ್ಕಿಸಿ ಬಿಕ್ಕಟ್ಟಿನ ಸಂದರ್ಭ ವಿವರಿಸಿದರು. ಮತ್ತೊಂದೆಡೆ, ದಿಲ್ಲಿಯಲ್ಲಿ ನಾರಿಮನ್ ಅವರನ್ನು ಭೇಟಿ ಮಾಡಿ ಚರ್ಚಿಸಿದ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಅವರಿಂದಲೂ ಮಾಹಿತಿ ಪಡೆದುಕೊಂಡರು. ಪರಿಸ್ಥಿತಿ ಅವಲೋಕಿಸಿ ಸೂಕ್ತ ತೀರ್ಮಾನಕ್ಕೆ ಬರಲು ವರಿಷ್ಠರ ಸಲಹೆ ಪಡೆದುಕೊಂಡರು.

ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ''ರಾಜ್ಯದ ಜಲಾಶಯಗಳಲ್ಲಿ ನೀರಿಲ್ಲ. ಸದ್ಯ ಇರುವ ನೀರು ಕುಡಿಯುವ ಉದ್ದೇಶಕ್ಕೂ ಸಾಲದು ಎಂಬ ಅಂಶವನ್ನು ರಾಜ್ಯ ಮುಖ್ಯ ಕಾರ್ಯದರ್ಶಿಯವರು ಕಾವೇರಿ ಮೇಲುಸ್ತುವಾರಿ ಸಮಿತಿಯ ಗಮನಕ್ಕೆ ತಂದಿದ್ದರು. ಇದೇ ವಾಸ್ತವ ಸಂಗತಿಯನ್ನು ರಾಜ್ಯದ ವಕೀಲರು ಸುಪ್ರೀಂಕೋರ್ಟ್ ಗಮನಕ್ಕೂ ತಂದರು. ಇಷ್ಟಾದರೂ ಕೋರ್ಟ್ ಈ ರೀತಿಯ ಆದೇಶ ನೀಡಿದೆ. ಕೋರ್ಟ್ ಆದೇಶ ಬುಧವಾರದಿಂದ ಜಾರಿಯಾಗಬೇಕಿದ್ದು, ಸಾಧಕ-ಬಾಧಕಗಳೆಲ್ಲದರ ಚರ್ಚೆ ಬಳಿಕ ಸೂಕ್ತ ತೀರ್ಮಾನಕ್ಕೆ ಬರಲಾಗುತ್ತದೆ,'' ಎಂದು ಹೇಳಿದರು.

**

ರಾಜೀನಾಮೆಗೆ ಮುಂದಾದ ಮಂಡ್ಯ ಸಂಸದ, ಶಾಸಕರು

ಮಂಡ್ಯ: ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಸಂಸದ ಸಿ.ಎಸ್. ಪುಟ್ಟರಾಜು ಹಾಗೂ ಶಾಸಕ ಕೆ.ಎಸ್. ಪುಟ್ಟಣ್ಣಯ್ಯ, ವಿಧಾನ ಪರಿಷತ್ ಸದಸ್ಯ ಎನ್.ಅಪ್ಪಾಜಿಗೌಡ ಅವರು ರಾಜೀನಾಮೆ ಘೋಷಿಸಿ ಸರಕಾರದ ಮೇಲೆ ಒತ್ತಡ ಹೇರುವ ಪ್ರಯತ್ನವನ್ನೂ ಮಾಡಿದ್ದಾರೆ.

ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ಘೋಷಿಸಿದ ಸಂಸದ ಸಿ.ಎಸ್. ಪುಟ್ಟರಾಜು ಅವರು ಮಂಗಳವಾರ ರಾತ್ರಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಜಿಲ್ಲಾಧಿಕಾರಿ ಎಸ್.ಜಿಯಾವುಲ್ಲಾ ಅವರಿಗೆ ಸರಕಾರಿ ಸವಲತ್ತುಗಳನ್ನು ಹಿಂದಿರುಗಿಸಿ ಕೋರ್ಟ್ ತೀರ್ಪನ್ನು ಖಂಡಿಸಿದರು. ಬುಧವಾರ ಹೊಸದಿಲ್ಲಿಗೆ ತೆರಳಿ ಸ್ಪೀಕರ್ ಅವರಿಗೆ ಖುದ್ದಾಗಿ ರಾಜೀನಾಮೆ ಪತ್ರ ಸಲ್ಲಿಸುವುದಾಗಿ ಮಾಧ್ಯಮದವರಿಗೆ ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಅಪ್ಪಾಜಿಗೌಡ ಅವರು ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ ರಾಜೀನಾಮೆ ಸಲ್ಲಿಸುವ ದಿನಾಂಕವನ್ನು ಘೋಷಿಸುವುದಾಗಿ 'ವಿಜಯ ಕರ್ನಾಟಕ'ಕ್ಕೆ ತಿಳಿಸಿದರು. ಕಾಲಿನ ಚಿಕಿತ್ಸೆಗಾಗಿ ಹೈದರಾಬಾದ್‌ಗೆ ತೆರಳಲಿರುವ ಮೇಲುಕೋಟೆ ಕ್ಷೇತ್ರದ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅವರೂ ರಾಜೀನಾಮೆ ನೀಡಲು ನಿರ್ಧರಿದ್ದಾರೆ. ಇದಕ್ಕೆ ಪೂರಕವಾಗಿ ರಾಜೀನಾಮೆ ಪತ್ರ ಸಿದ್ಧಪಡಿಸುವಂತೆ ಆಪ್ತ ಸಹಾಯಕರಿಗೆ ಸೂಚನೆ ನೀಡಿದ್ದಾರೆಂದು ಮೂಲಗಳು ತಿಳಿಸಿವೆ.


Viewing all articles
Browse latest Browse all 6795

Trending Articles


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ಮಲಗಿದ್ದ ಮಹಿಳೆ ಬೆದರಿಸಿ ಬೆತ್ತಲೆ ಫೋಟೋ ತೆಗೆದ ಕಳ್ಳ


ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


 ಕೌಟುಂಬಿಕ ಕಲಹ ಹಿನ್ನೆಲೆ; ಬುದ್ದಿವಾದ ಹೇಳಿದ ತಂಗಿಯನ್ನೇ ಕೊಂದ ಅಣ್ಣ…


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ವಚನಗಳಿಂದ ಸಂಗೀತ ಲೋಕ ಶ್ರೀಮಂತ


Final chapter from Krishnamacharya's Yogasanagalu Part II Pranayam. Plus the...


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಆಲೋಚನೆಗೂ ಕ್ರಿಯೆಯಷ್ಟೇ ಮಹತ್ವವಿದೆ


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್