* ಪದ್ಮಾ ಶಿವಮೊಗ್ಗ
ಇದು ಕ್ರೈಮ್ ಕತೆಯ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ 'ಅಸ್ತಿತ್ವ' ನೂತನ್ ಉಮೇಶ್ ನಿರ್ದೇಶನದಲ್ಲಿ ತೆರೆಕಂಡಿದೆ. ಬಿಗಿಯಾದ ನಿರೂಪಣೆ, ಸಸ್ಪೆನ್ಸ್ನಿಂದ ಪ್ರೇಕ್ಷಕನನ್ನು ಹಿಡಿದಿಡುವುದಲ್ಲದೆ ನೈಜವಾಗಿ ಮೂಡಿಬಂದಿದೆ. ಆದರೆ ನೋಡುಗರಿಗೆ ತಪ್ಪು ಮೆಸೇಜ್ ನೀಡುವಂತಿದೆಯಾ ಸಿನಿಮಾ ಎಂಬ ಪ್ರಶ್ನೆಯೂ ಕಾಡುತ್ತದೆ.
ಚಿತ್ರದ ನಾಯಕ ರಾಮ್/ರಹೀಮ್ (ಯುವರಾಜ್) ಅತ್ಯಂತ ಬುದ್ಧಿವಂತ ಹುಡುಗ. ಜತೆಯಲ್ಲೇ ಅನಿರೀಕ್ಷಿತ ಘಟನೆಗಳನ್ನು ನಿಭಾಯಿಸಲು ಕ್ಷಣಮಾತ್ರದಲ್ಲಿ ಮಾಸ್ಟರ್ ಪ್ಲಾನ್ ಮಾಡುವ ಚಾಣಾಕ್ಷ. ಇನ್ನೊಬ್ಬರ ಭಾವನೆಗಳಿಗೆ ಸ್ಪಂದಿಸುವವನು. ಆದರೆ, ಅವನೊಳಗೊಬ್ಬ ಕ್ರೂರಿ ಇರುತ್ತಾನೆ. ಹೀಗೆ ತದ್ವಿರುದ್ಧ ಸ್ವಭಾವದ ರಾಮ್ ಚಿಕ್ಕವನಿದ್ದಾಗ ತಾಯಿಗೆ ವಿವಾಹೇತರ ಸಂಬಂಧ ಇರುವುದನ್ನು ನೋಡಿ ವಿಚಲಿತಗೊಳ್ಳುತ್ತಾನೆ. ಆಮೇಲೆ ತಂದೆಯನ್ನು ಕಳೆದುಕೊಳ್ಳುತ್ತಾನೆ. ಕೋಪಗೊಂಡು ಅವನು ಮನೆಗೆ ಬೆಂಕಿ ಹಚ್ಚುತ್ತಾನೆ. ಹೀಗೆ ಸಿನಿಮಾ ಪ್ರಾರಂಭವಾಗುತ್ತಿದ್ದಂತೆ ಕತೆ ಪ್ರೇಕ್ಷಕನನ್ನು ಬೆಚ್ಚಿ ಬೀಳಿಸುತ್ತದೆ. ಇಲ್ಲಿಂದ ರಿಮ್ಯಾಂಡ್ ಹೋಮ್ನಲ್ಲಿ ಬೆಳೆಯುವ ಅವನು ಅಲ್ಲಿಂದ ಹೊರಬಂದ ಮೇಲೆ ಅಪಘಾತದಲ್ಲಿ ಸತ್ತ ರಹೀಮ್ ಹೆಸರಿನಲ್ಲಿ ಜೀವನ ಆರಂಭಿಸುತ್ತಾನೆ.
ಇವನಿಗೆ ಕಾಲೇಜಿನಲ್ಲಿ ಜಾಲಿ ಬಾಯ್, ಶ್ರೀಮಂತ ಹುಡುಗ ಕ್ರಿಶ್ (ಮಧುಸೂಧನ್) ಜತೆಗೆ ಸ್ನೇಹವಾಗುತ್ತದೆ. ಅವನ ಮನೆಯಲ್ಲೇ ಮನೆ ಕೆಲಸ ಮಾಡಿಕೊಂಡಿರುತ್ತಾನೆ ರಹೀಮ್. ಇಲ್ಲಿಂದ ಕತೆಗೆ ತಿರುವು ಬರುತ್ತದೆ. ಹುಡುಗಿಯರ ಜತೆ ಸದಾ ಜಾಲಿಯಾಗಿರುವ ಕ್ರಿಶ್, ಅವನ ಗೆಳೆಯ ವಿಕ್ಕಿ (ಶೈನ್ ಶೆಟ್ಟಿ), ಗೆಳತಿ ಖುಷಿ.(ಪ್ರಜ್ಜು ಪೂವಯ್ಯ) ಇವರ ನಡುವಿನ ಭಿನ್ನಾಭಿಪ್ರಾಯ. ಇಷ್ಟೆಲ್ಲಾ ನಡೆಯುವಾಗ ರಹೀಮ್ ತಾನು ಯಾರೆಂಬುದು ಬಯಲಾಗುವ ಸಂದರ್ಭ ಎದುರಾದಾಗ ಅನಿರೀಕ್ಷಿತ ಸಾವೊಂದು ಸಂಭವಿಸುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ರಹೀಮ್ ಮತ್ತೆ ಮತ್ತೆ ತಪ್ಪುಗಳನ್ನು ಮಾಡುತ್ತಾನೆ. ಕೊನೆಗೆ ಏನಾಗುತ್ತೆ ಎನ್ನುವುದನ್ನು ಚಿತ್ರದಲ್ಲಿಯೇ ನೋಡಬೇಕು.
ಅತ್ಯಂತ ಬುದ್ಧಿವಂತಿಕೆಯಿಂದ ಹೆಣೆದ ಕತೆ, ದೃಶ್ಯಗಳು, ಸಣ್ಣಪುಟ್ಟ ಅಂಶಗಳಿಗೂ ಕೊಡುವ ಮಹತ್ವ, ಬಿಗಿಯಾದ ನಿರೂಪಣೆ... ಹೀಗೆ ಒಟ್ಟಾರೆ ವಿಭಿನ್ನ ಸಿನಿಮಾವನ್ನು ನೋಡಿದ ಥ್ರಿಲ್ ಕೊಡುವ ಅಸ್ತಿತ್ವ ತಮಿಳಿನಲ್ಲಿ ತೆರೆಕಂಡ 'ನಾನ್' ಚಿತ್ರದ ಯಥಾವತ್ ರಿಮೇಕ್ ಅನ್ನೋದು ವೀಕ್ ಪಾಯಿಂಟ್. ತಮಿಳು ಚಿತ್ರಕ್ಕೆ ಚಿತ್ರಕಥೆ ಬರೆದಿದ್ದ ಜೀವ ಮತ್ತು ಸಂಗೀತ ನೀಡಿದ್ದ ವಿಜಯ್ ಆಂಟೋನಿ ಇಲ್ಲೂ ಕೆಲಸ ಮಾಡಿದ್ದಾರೆ. ಆದರೆ, ಚಿತ್ರದ ಮೂಲಕ ಏನು ಹೇಳಹೊರಟಿದ್ದಾರೆ ಎನ್ನುವುದು ಮಾತ್ರ ಆತಂಕದ ಸಂಗತಿ. ಎಲ್ಲರ ಜತೆ ತುಂಬಾ ಒಳ್ಳೆಯವನಾಗಿ ನಡೆದುಕೊಳ್ಳುವ ನಾಯಕ ತನ್ನ ಅಸ್ತಿತ್ವಕ್ಕೆ ಧಕ್ಕೆ ಬರುತ್ತದೆ ಎಂದಾಕ್ಷಣ ಯಾವ ಅಪರಾಧವನ್ನು ಬೇಕಾದರೂ ಮಾಡಬಹುದಾ? ಕೊಲೆಗಳನ್ನು ಮಾಡಿದ ಮೇಲೆ ಹಾಸಿಗೆ ಹಿಡಿದ ತಾಯಿಯೊಬ್ಬಳನ್ನು ನೋಡಿಕೊಳ್ಳುವೆನೆಂದಾಕ್ಷಣ ಎಲ್ಲಾ ಅಪರಾಧಗಳಿಗೂ ರಿಯಾಯಿತಿ ಕೊಡಬೇಕಾ? ಹೀಗೆಲ್ಲಾ ನಡೆದುಕೊಳ್ಳುವ ನಾಯಕ ಸೈಕೋ ಅನ್ನೋದನ್ನು ಇನ್ನಷ್ಟು ಗಟ್ಟಿಯಾಗಿ ನಿರೂಪಿಸುವ ಅಗತ್ಯ ಬಹಳವಿತ್ತು ಎನ್ನಿಸುತ್ತದೆ. ಹಾಗೆ ಮಾಡದೆ ಸನ್ನಿವೇಶದ ಕೈಗೊಂಬೆ ಎಂಬಂತೆ ನಾಯಕನನ್ನು ತೋರಿಸಲಾಗಿದ್ದು, ಪರೋಕ್ಷವಾಗಿ ಅಪರಾಧ ಮನೋಭಾವವನ್ನು ಬೆಂಬಲಿಸಿದಂತೆ ಕಾಣುತ್ತದೆ. ಹೀರೊಯಿಸಂ ಇರುವ ಚಿತ್ರಗಳಿಗಿಂತ ಇಂಥ ನೈಜ ಸಿನಿಮಾಗಳು ಬೀರುವ ಪ್ರಭಾವ ಜಾಸ್ತಿ. ಹಾಗಾಗಿ ಮೆಸೇಜ್ ತುಂಬಾ ಮುಖ್ಯವಾಗುತ್ತದೆ. ಕೆಲವರನ್ನು ಹೊರತುಪಡಿಸಿದರೆ ಬಹುತೇಕ ನಟರ ಅಭಿನಯ ಸಾಧಾರಣ. ಶೈನ್ ಶೆಟ್ಟಿ ನಟನೆ ಗಮನ ಸೆಳೆಯುತ್ತದೆ. ಉಳಿದಂತೆ ತಾಂತ್ರಿಕವಾಗಿ ಅತ್ಯುತ್ತಮವಾಗಿದೆ.
ಕನ್ನಡ ಚಿತ್ರ