Quantcast
Channel: VijayKarnataka
Viewing all articles
Browse latest Browse all 6795

1944 ಚಿತ್ರ ವಿಮರ್ಶೆ: ತೆರೆಯ ಮೇಲೊಂದು ನಾಟಕ

$
0
0

ಕನ್ನಡ ಸಿನಿಮಾ


* ಪದ್ಮಾ ಶಿವಮೊಗ್ಗ

ನಾಟಕಗಳನ್ನಾಧರಿಸಿ ಹಲವು ಚಿತ್ರಗಳು ಕನ್ನಡದಲ್ಲಿ ಬರುತ್ತಿವೆ. ರಂಗ ಪ್ರಯೋಗಕ್ಕೂ, ಸಿನಿಮಾ ಶೈಲಿಗೂ ಇರುವ ವ್ಯತ್ಯಾಸವನ್ನು ತಿಳಿಯದೆ ಹೋದರೆ ಸಿನಿಮಾ ಯಶಸ್ವಿಯಾಗೋದು ಕನಸಿನ ಮಾತೇ ಸರಿ. ಈ ವಾರ ತೆರೆಕಂಡ '1944' ಚಿತ್ರ ಕೂಡ ಎನ್.ಎಸ್. ರಾವ್ ಅವರ ರೊಟ್ಟಿ ಋಣ ಎಂಬ ನಾಟಕವನ್ನಾಧರಿಸಿ ಮಾಡಿದ ಚಿತ್ರ. ಸ್ವಾತಂತ್ರ್ಯಕ್ಕಾಗಿ ಹೋರಾಡುವ ಸಾಮಾನ್ಯನೊಬ್ಬನ ಕತೆ ಇದ್ದು, 2 ಗಂಟೆಗಳ ಸಿನಿಮಾಗೆ ಬೇಕಾದ ಸತ್ವಪೂರ್ಣ ದೃಶ್ಯಗಳ ಕೊರತೆಯಿಂದ ಸೊರಗಿದೆ.

ಉತ್ತರ ಕರ್ನಾಟಕದಲ್ಲಿ ನಡೆಯುವ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ ಯುವಕ ದುಗ್ಗಯ್ಯ (ನವೀನ್ ಕೃಷ್ಣ)ನ ಕತೆ ಚಿತ್ರದಲ್ಲಿದೆ. ಗಿರಿಜಮ್ಮನ (ಶ್ರುತಿ) ಗಂಡ ವಿಷಕಂಠಯ್ಯ (ಸುಚೇಂದ್ರ ಪ್ರಸಾದ್) ಬ್ರಿಟಿಷ್‌ರ ಆಡಳಿತದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್. ತನ್ನ ಅಂತಸ್ತು, ಸ್ಥಾನಮಾನಕ್ಕಾಗಿ ಬ್ರಿಟಿಷರು ಹೇಳಿದಂತೆ ಕೇಳುವವ. ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕುವುದು ಇವನ ಕೆಲಸ. ಆದರೆ, ಗಿರಿಜಮ್ಮ ಅಪ್ಪಟ ದೇಶಭಕ್ತೆ. ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಅಪಾರ ಪ್ರೀತಿ, ಗೌರವ. ಕಂದಾಯ ವಸೂಲಿಗಾರರನ್ನು ಲೂಟಿ ಮಾಡಿ ಬಡವರಿಗೆ ಧಾನ್ಯಗಳನ್ನು ಹಂಚುವ ದುಗ್ಗಯ್ಯನನ್ನು ಹಿಡಿಯಲು ಹೋದ ವಿಷಕಂಠಯ್ಯ, ಅವನ ಅಮ್ಮನನ್ನು (ಭವ್ಯ) ಸಾಯಿಸುತ್ತಾನೆ. ಜೈಲು ಸೇರಿದ ದುಗ್ಗಯ್ಯ ಅಲ್ಲಿಂದ ತಪ್ಪಿಸಿಕೊಂಡು ಓಡುವಾಗ ಗಿರಿಜಮ್ಮನ ಮನೆಯೊಳಗೆ ಸೇರಿಕೊಳ್ಳುತ್ತಾನೆ. ಗಿರಿಜಮ್ಮ ಅವನಿಗೆ ಅಕ್ಕರೆ ತೋರಿ, ರೊಟ್ಟಿ ಕೊಟ್ಟು ಆಶ್ರಯ ನೀಡುತ್ತಾಳೆ. ಅವಳ ಗಂಡ ಇನ್ಸ್‌ಪೆಕ್ಟರ್ ಎನ್ನುವುದನ್ನು ಅರಿಯದ ಅವನು ತಾಯಿಯನ್ನು ಕೊಂದಿದ್ದಕ್ಕೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಶಪಥ ಮಾಡುತ್ತಾನೆ. ವಿಷಕಂಠನ ಪೊಲೀಸ್ ಬುದ್ಧಿಗೆ ವಾಸನೆ ಬಡಿಯುತ್ತದೆ. ಕೊನೆಗೆ ಯಾರು ಸಾಯುತ್ತಾರೆ ಎನ್ನುವುದನ್ನು ಚಿತ್ರದಲ್ಲಿ ನೋಡಿ.

ಸ್ವಾತಂತ್ರ್ಯದ ಕೂಗು ಎಲ್ಲೆಡೆ ಜೋರಾಗಿದ್ದ ದಿನಗಳು 1944 ವರ್ಷ. ಆದರೆ, ಸಿನಿಮಾದಲ್ಲಿ ಆ ತೀವ್ರತೆ ಕಾಣುವುದೇ ಇಲ್ಲ. ಚಿತ್ರದಲ್ಲಿ ಒಂದೆರಡು ಬಾರಿ ಗುಂಪಿನಲ್ಲಿ ಮಾತನಾಡುವುದು, ಕಂದಾಯ ವಸೂಲಿಗಾರರನ್ನು ಲೂಟಿ ಮಾಡುವುದನ್ನು ಯಾಂತ್ರಿಕವಾಗಿ ತೋರಿಸಿರೋದ್ರಿಂದ ನಾಯಕನ ಹೋರಾಟ ಮನೋಭಾವ ನೋಡುಗರ ಹೃದಯವನ್ನು ತಟ್ಟುವುದಿಲ್ಲ. ಎಲ್ಲ ವಿಭಾಗದಲ್ಲೂ ಕುಶಲತೆಯ ಕೊರತೆ ಕಾಣುತ್ತದೆ. ಅತ್ಯುತ್ತಮ ಕಲಾವಿದರಿದ್ದರೂ ನಟನೆಯ ರಸಾನುಭವ ಆಗುವುದಿಲ್ಲ. ನವೀನ್ ಕೃಷ್ಣ ಅಸಹಾಯಕತೆಯಿಂದ ನಟಿಸಿರುವಂತೆ ಕಾಣುತ್ತದೆ. ಶ್ರುತಿ ಅಭಿನಯ ಪರವಾಗಿಲ್ಲ. ಕೆಲವು ದೃಶ್ಯಗಳಲ್ಲಿ ಛಾಯಾಗ್ರಹಣ ಚೆನ್ನಾಗಿದ್ದರೆ, ಇನ್ನು ಕೆಲವು ದೃಶ್ಯಗಳಲ್ಲಿ ದುರ್ಬಲವಾಗಿ ಮೂಡಿಬಂದಿದೆ. ಹಿನ್ನೆಲೆ ಸಂಗೀತ ತಕ್ಕಮಟ್ಟಿಗೆ ಇದೆ. ಹಾಡುಗಳು ಗಮನ ಸೆಳೆಯುವುದಿಲ್ಲ. ಕಮರ್ಷಿಯಲ್ ಚಿತ್ರಗಳ ಮಧ್ಯೆ ಸ್ವಾತಂತ್ರ್ಯ ಹೋರಾಟದ ಕತೆಯನ್ನು ಆಯ್ಕೆ ಮಾಡಿರುವುದಕ್ಕೆ ನಿರ್ದೇಶಕ ಬದ್ರಿನಾಥ್‌ರನ್ನು ಪ್ರಶಂಸಿಸಬಹುದಾದರೂ, ಅದನ್ನು ಜನರಿಗೆ ಪರಿಣಾಮಕಾರಿಯಾಗಿ ತಲುಪಿಸುವಲ್ಲಿ ಸೋತಿರುವುದು ವಿಷಾದನೀಯ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>