* ಶರಣು ಹುಲ್ಲೂರು
ಸಾಮಾನ್ಯವಾಗಿ ಐತಿಹಾಸಿಕ ಕತೆಗಳನ್ನು ತೆರೆಗೆ ತರುವುದು ಕಷ್ಟ. ಬಜೆಟ್, ಪೂರಕ ವಾತಾವರಣ ಸೇರಿ ಅನೇಕ ಸಂಗತಿಗಳು ಇಂತಹ ವಿಷಯ ಮುಟ್ಟಲು ಅಡ್ಡಿಪಡಿಸುತ್ತವೆ. ಆದರೆ, ಹೇಳಬೇಕಾದ ಕತೆಯನ್ನು ಯಾವ ಮಾರ್ಗದಲ್ಲಾದರೂ ಪ್ರೇಕ್ಷಕರಿಗೆ ತಲುಪಿಸಬಹುದು ಎಂಬುದಕ್ಕೆ 'ಬಬ್ಲುಷ' ಚಿತ್ರ ಮಾದರಿ ಆಗಬಹುದು.
ಬಬ್ಲುಷ ಐತಿಹಾಸಿಕ ಥ್ರಿಲ್ಲರ್ ಕಥಾನಕದ ಸಿನಿಮಾ. ಕ್ರಿ.ಸ 1515ರ ಶ್ರೀಕೃಷ್ಣದೇವರಾಯರ ಕಾಲದಲ್ಲಿ ನಡೆದ ನೈಜ ಘಟನೆಯನ್ನು ಸಿನಿಮಾ ಮಾಡಿದ್ದಾರೆ ನಿರ್ದೇಶಕ ವೆಂಕಟ್ ಭಾರದ್ವಾಜ್. ಹಾಗಂತ ವಿಜಯನಗರ ಸಾಮ್ರಾಜ್ಯದ ಆ ದೃಶ್ಯ ವೈಭವನ್ನು ಅವರು ಎಲ್ಲೂ ಹೇಳುವುದಕ್ಕೆ ಹೋಗುವುದಿಲ್ಲ. ತಾವು ಹಾಕಿಕೊಂಡಿದ್ದ ಪರಿಧಿಯಲ್ಲೇ ಚಿತ್ರಕತೆ ಹೆಣೆದು ಜಾಣ್ಮೆ ತೋರಿದ್ದಾರೆ ನಿರ್ದೇಶಕರು.
ಇಡೀ ಸಿನಿಮಾ ಸಾಗುವುದೇ ಆ ಕಾಲದ ಮಧ್ಯಮ ವರ್ಗದ ಕುಟುಂಬವೊಂದರ ಸುತ್ತ. ಅದು ಉಳುಮೆ ಮಾಡಿಕೊಂಡಿದ್ದ ರೈತ ಪಾಲಾಕ್ಷ (ಹರ್ಷಾರ್ಜುನ) ಕುಟುಂಬ. ಈತನ ಹೆಂಡತಿ ರತ್ನಾ (ಮೃದುಲಾ ಭಾಸ್ಕರ್). ಈ ದಂಪತಿಗಳಿಗೊಂದು ಮುದ್ದಾದ ಹೆಣ್ಣುಮಗು. ಮಗುವಿನ ಮೇಲೆ ಜೀವವನ್ನೇ ಇಟ್ಟುಕೊಂಡಿದ್ದ ದಂಪತಿಗಳವರು. ನೆಮ್ಮದಿಯಾಗಿದ್ದ ಕುಟುಂಬಕ್ಕೆ ದುರ್ಗಣ್ಣ ಅಲಿಯಾಸ್ ಬಬ್ಲುಷ (ಮಣಿ ಶೆಟ್ಟಿ) ಪರಿಚಯ ಆಗುತ್ತಾನೆ. ಕುಟುಂಬದ ಒಬ್ಬ ಸದಸ್ಯನಂತೆಯೇ ಅವರೊಂದಿಗೆ ಬಾಳುತ್ತಾನೆ. ಒಂದು ದಿನ ಏಕಾಏಕಿ ಮಗುವನ್ನು ಕದ್ದು ಪರಾರಿ ಆಗುವ ಬಬ್ಲುಷ, ಪಾಲಾಕ್ಷ ಕುಟುಂಬಕ್ಕೆ ಆಘಾತ ತರುತ್ತಾನೆ. ತನ್ನ ಮಗುವನ್ನು ಹುಡುಕಿಕೊಂಡು ಸಾಗುವ ಪಾಲಾಕ್ಷಗೆ, ಈ ಬಬ್ಲುಷ ಯಾರು ಎಂಬುದು ಗೊತ್ತಾಗುತ್ತದೆ. ಆಗ ಮತ್ತಷ್ಟು ಆತಂಕಕ್ಕೀಡಾಗುತ್ತಾನೆ. ಆತನಿಂದ ತನ್ನ ಮಗುವನ್ನು ರಕ್ಷಿಸಬೇಕೆಂದು ಪಣ ತೊಡುತ್ತಾನೆ. ಈ ಹೋರಾಟದಲ್ಲಿ ಪಾಲಾಕ್ಷ ಗೆಲ್ಲುತ್ತಾನಾ? ಇಲ್ಲವಾ ಅನ್ನುವುದೇ ಸಿನಿಮಾ.
ಕತೆಯಾಗಿ ಚಿತ್ರವು ಇಷ್ಟವಾದರೆ, ಕಟ್ಟುವಿಕೆಯ ಗುಣ ಇನ್ನಷ್ಟು ಗಟ್ಟಿಯಾಗಬೇಕಿತ್ತು ಅನಿಸುತ್ತದೆ. ಇಡೀ ಸಿನಿಮಾ ಮಗುವಿನ ಸುತ್ತಲೇ ಕೇಂದ್ರಿಕೃತ ಆಗಿರುವುದರಿಂದ, ಇದು ಮಕ್ಕಳ ಚಿತ್ರವಾ ಅನ್ನುವ ಅನುಮಾನವನ್ನು ಅಲ್ಲಲ್ಲಿ ಮೂಡಿಸುತ್ತದೆ. ಕುಸ್ತಿ ಪಂದ್ಯಾವಳಿಯಂಥ ದೃಶ್ಯಗಳಿಂದ ದೇಸಿತನ ತೋರಿಸುವ ನಿರ್ದೇಶಕರು, ವಿಜಯ ನಗರ ಸಾಮ್ರಾಜ್ಯವನ್ನು ತೋರಿಸುವಲ್ಲಿ ಜಿಪುಣತನ ತೋರಿಸಿದ್ದಾರೆ. ಹೀಗಾಗಿ ಇದು ಯಾವ ಕಾಲದಲ್ಲಿ ಬೇಕಾದರೂ ನಡೆಯಬಲ್ಲ ಕತೆ ಅನಿಸುತ್ತದೆ.
ಚಿತ್ರದಲ್ಲಿ ಬಹುತೇಕ ಕಲಾವಿದರು ಹೊಸಬರಾಗಿದ್ದರೂ, ತಮ್ಮ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಅದರಲ್ಲೂ ಬಬ್ಲುಷ ಪಾತ್ರಧಾರಿ ಮಣಿ ಶೆಟ್ಟಿ ಹೆಚ್ಚು ಸ್ಕೋರ್ ಮಾಡುತ್ತಾರೆ. ಕೆಂಪನಾಯಕನ ಪಾತ್ರದಲ್ಲಿ ಶೋಭರಾಜ್ ಕೂಡ ಮಿಂಚಿದ್ದಾರೆ. ಸಿನಿಮಾದಲ್ಲಿ ಹಲವು ನೂನ್ಯತೆಗಳು ಇದ್ದರೂ, ಇಂಥದ್ದೊಂದು ಪಾತ್ರವನ್ನು ಕೈಗೆತ್ತಿಕೊಂಡಿದ್ದಕ್ಕೆ ನಿರ್ದೇಶಕರನ್ನು ಅಭಿನಂದಿಸಲೇಬೇಕು.
ಕನ್ನಡ ಚಿತ್ರ