ಸಾಹಸ ಸಿಂಹ ವಿಷ್ಣುವರ್ಧನ್ ನೆನಪಿಗಾಗಿ ಏನೆಲ್ಲ ಕೆಲಸಗಳು ನಡೆಯುತ್ತಿವೆ. ಇಲ್ಲೊಬ್ಬ ಅಭಿಮಾನ ವಿಷ್ಣುಗಾಗಿ ಸಿನಿಮಾವೊಂದನ್ನು ಮಾಡಿದ್ದಾರೆ. ಅದರಲ್ಲೂ ವಿಷ್ಣುವರ್ಧನ್ ಅವರ ದತ್ತು ಪುತ್ರನ ಕತೆಯನ್ನು ಹೇಳಲು ಹೊರಟಿದ್ದಾರೆ. ವಿಷ್ಣು ಅಪ್ಪಟ ಅಭಿಮಾನಿ ಎಂ.ಡಿ.ಪಾರ್ಥಸಾರಥಿ ನಿರ್ಮಾಣದಲ್ಲಿ ಸಿನಿಮಾ ಮೂಡಿ ಬಂದಿದ್ದು, ಇಬ್ಬರು ಹೊಸ ಹುಡುಗರು ಈ ಸಿನಿಮಾದ ಮೂಲಕ ಸ್ಯಾಂಡಲ್ವುಡ್ ಪ್ರವೇಶ ಮಾಡುತ್ತಿದ್ದಾರೆ. 'ಚಿತ್ರದಲ್ಲಿ ವಿಷ್ಣುರವರಿಗೆ ದತ್ತು ಪುತ್ರನಿರುತ್ತಾನೆ. ಆತ ವಿದೇಶದಿಂದ ತಾಯ್ನಾಡಿಗೆ ಬಂದಾಗ ಸಾಹಸಸಿಂಹನ ಕತೆ ತೆರೆದುಕೊಳ್ಳುತ್ತದೆ. ವಿಷ್ಣು ಜೀವನದ ಅನೇಕ ಘಟನೆಗಳನ್ನು ಸಿನಿಮಾದಲ್ಲಿ ಹೇಳಲು ಹೊರಟಿದ್ದೇವೆ. ವಿಷ್ಣುವರ್ಧನ್ ಪತ್ನಿ ಭಾರತಿ ಮೇಡಮ್ರಿಂದ ಅನುಮತಿ ಪಡದೇ ಸಿನಿಮಾ ಮಾಡಿದ್ದೇವೆ' ಅಂತಾರೆ ನಿರ್ದೇಶಕ ವಿಕ್ರಮ್. ಜೂ.ವಿಷ್ಣುವರ್ಧನ್ ಖ್ಯಾತಿ ಜಯಶ್ರೀರಾಜ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಪ್ರೀತಮ್ ನಾಯಕನಾಗಿದ್ದು, ಮೈಸೂರಿನ ಹುಡುಗಿ ಅಮೃತಾ ಅಯ್ಯಂಗಾರ್ ನಾಯಕಿ. ಅಮೃತಾ ಸಿನಿಮಾದಲ್ಲಿ ಪತ್ರಕರ್ತೆಯಾಗಿ ಕಾಣಿಸಿಕೊಂಡಿದ್ದಾರೆ. 'ವಿಷ್ಣುವರ್ಧನ್ ಅವರ ಮೇಲಿನ ಗೌರವದಿಂದಾಗಿ ಈ ಸಿನಿಮಾ ಮಾಡಿದ್ದೇವೆ. 18 ನಿಮಿಷಗಳ ಗ್ರಾಫಿಕ್ಸ್ ಕೆಲಸ ಚಿತ್ರಕ್ಕಾಗಿ ಮಾಡಿದ್ದು, ವಿಷ್ಣು ಸಾರ್ ಮತ್ತೆ ತೆರೆಯ ಮೇಲೆ ಬರಲಿದ್ದಾರೆ. ಯಾವ ರೀತಿಯಲ್ಲಿ ಅವರು ಕಾಣಲಿದ್ದಾರೆ ಅನ್ನುವುದನ್ನು ಸಿನಿಮಾದಲ್ಲೇ ನೋಡಿ' ಅನ್ನುವುದು ನಿರ್ದೇಶಕರ ಮಾತು. ಹರಿಬಾಬು ಚಿತ್ರಕ್ಕಾಗಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಮಂಜುರವಿ ಸಾಹಿತ್ಯದಲ್ಲಿ ಹಾಡುಗಳು ಮೂಡಿ ಬಂದಿವೆ. ನಿರ್ದೇಶಕರ ಈ ಚೊಚ್ಚಲು ಚಿತ್ರಕ್ಕೆ ಶಿವಕುಮಾರ್ರ ಸಿನಿಮಾಟೋಗ್ರಫಿ ಇದೆ. ಶೋಭರಾಜ್, ಶರತ್ಲೋಹಿತಾಶ್ವ, ಮಜಾ ಟಾಕೀಸ್ ಖ್ಯಾತಿ ಪವನ್ ಕುಮಾರ್ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದು, ಸಿನಿಮಾದ ಮತ್ತೊಂದು ವಿಶೇಷ.
↧
ಸಿಂಹದ ನೆನಪಿನ ಚಿತ್ರ
↧