Quantcast
Channel: VijayKarnataka
Viewing all articles
Browse latest Browse all 6795

ಮತ್ತೆ ದೇಶ ಪ್ರೇಮದ ಮೆಲುಕು

$
0
0

ಸ್ವಾತಂತ್ರ್ಯ ಹೋರಾಟದ ದಟ್ಟ ಪ್ರಭಾವ ಹಾಗೇ ಉಳಿದುಕೊಂಡಿದ್ದ ದಶಕಗಳ ಹಿಂದೆ ಸಿನಿಮಾಗಳಲ್ಲೂ ದೇಶಪ್ರೇಮವನ್ನು ತೋರಿಸುವುದು ಸಾಮಾನ್ಯವಾಗಿತ್ತು. ಆದರೆ ಬರುಬರುತ್ತಾ ಇದು ಮಾಸಿಹೋಗಿತ್ತು ಎಂದೇ ಹೇಳಬಹುದು. ಈಗ ಮತ್ತೆ ಅಂಥದೊಂದು ಟ್ರೆಂಡ್‌ ಶುರುವಾಗಿದೆ. ಕನ್ನಡ ಚಿತ್ರರಂಗ ಪಿರಿಯಾಡಿಕಲ್‌ ಮೂವಿಯತ್ತ ನೋಡುತ್ತಿದೆ.

- ಪದ್ಮಾ ಶಿವಮೊಗ್ಗ

ಸೂತ್ರಬದ್ಧ ಸಿನಿಮಾಗಳು ಈಗ ಕಡಿಮೆಯಾಗುತ್ತಿವೆ. ಈ ಜಾಗದಲ್ಲಿ ಹೊಸ ರೀತಿಯ ಚಿತ್ರಗಳು ಬರುತ್ತಿವೆ. ಅದರಲ್ಲೂ ಪಿರಿಯಾಡಿಕಲ್‌ ಚಿತ್ರಗಳತ್ತ ನಿರ್ದೇಶಕರು ಗಮನ ಹರಿಸುತ್ತಿದ್ದಾರೆ. ಪಿರಿಯಾಡಿಕಲ್‌ ಚಿತ್ರಗಳಲ್ಲಿ ಸ್ವಾತಂತ್ರ್ಯ ಹೋರಾಟವನ್ನು ಸ್ಮರಿಸುವ ಪ್ರಯತ್ನ ನಡೆಯುತ್ತಿರುವುದು ವಿಶೇಷ.

ಕಳೆದ ಒಂದು ವರ್ಷದಲ್ಲಿ ಮೂರ್ನಾಲ್ಕು ಚಿತ್ರಗಳು ತೆರೆಗೆ ಬಂದಿವೆ. ಈಗಾಗಲೇ ಹಲವು ಚಿತ್ರಗಳು ಸೆಟ್ಟೇರಿವೆ. ವಿಶೇಷವೆಂದರೆ ಈ ಚಿತ್ರಗಳಲ್ಲಿ ಜನಪ್ರಿಯ ನಟರೂ ನಟಿಸಲು ಮುಂದಾಗಿರುವುದು.

ಮತ್ತೆ ಸತ್ಯಾಗ್ರಹ

ಸತ್ಯಾಗ್ರಹ ಕುರಿತ ನಿರ್ಮಾಣ ಮಾಡಿದ ಚಿತ್ರ ಮತ್ತೆ ಸತ್ಯಾಗ್ರಹ. ಚಿತ್ರದಲ್ಲಿ ನಟ ಯೋಗೀಶ್‌ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಶಿವಾನಂದ ನಿರ್ದೇಶನದಲ್ಲಿ ಬಂದ ಚಿತ್ರ ಇದು. ದತ್ತಣ್ಣ, ಶರತ್‌ ಲೋಹಿತಾಶ್ವ ಮತ್ತಿತರರು ನಟಿಸಿದ್ದರು. ಕಳೆದ ವರ್ಷ ತೆರೆಕಂಡ ಚಿತ್ರ ಅಷ್ಟೇನೂ ಸುದ್ದಿ ಮಾಡಲಿಲ್ಲ.

1944

ಎನ್‌ ಎಸ್‌ ರಾವ್‌ ಬರೆದ ರೊಟ್ಟಿ ಋುಣ ಎಂಬ ನಾಟಕವನ್ನಾಧರಿಸಿ ತೆರೆಗೆ ಬಂದ ಚಿತ್ರ 1944. ಬದ್ರಿನಾಥ್‌ ನಿರ್ದೇಶನದ ಚೊಚ್ಚಲ ಚಿತ್ರ ಇದು. ನವೀನ್‌ ಕೃಷ್ಣ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಬ್ರಿಟಿಷರ ವಿರುದ್ಧ ಹೋರಾಡುವ, ಧ್ವಜವನ್ನು ಹಾರಿಸಲು ಹೋಗಿ ಗುಂಡಿಗೆ ಬಲಿಯಾದ ತಂದೆಯನ್ನೇ ಸೂಧಿರ್ತಿಯಾಗಿಟ್ಟುಕೊಂಡು ಬೆಳೆದ ಯುವಕನ ಪಾತ್ರದಲ್ಲಿ ನವೀನ್‌ ಕೃಷ್ಣ ನಟಿಸಿದ್ದರು. ಸ್ವಾತಂತ್ರ್ಯ ಹೊರಾಟದ ಸಂದರ್ಭದಲ್ಲಿ ಉನ್ನತ ಹುದ್ದೆಯ ಆಮಿಷಕ್ಕೆ ಒಳಗಾಗುವ ಪೋಲಿಸ್‌ ಅಧಿಕಾರಿ ಬ್ರಿಟಿಷರ ಪರವಾಗಿ ಸ್ವಾತಂತ್ರ್ಯ ಹೋರಾಟಗಾರರನ್ನು ಮಟ್ಟ ಹಾಕುತ್ತಿದ್ದವನು ಕೊನೆಗೆ ಬದಲಾಗಿ ದೇಶಪ್ರೇಮಿಯಾಗುತ್ತಾನೆ. ಚಿತ್ರದಲ್ಲಿ ಶ್ರುತಿ, ಭವ್ಯಾ, ಸುಚೇಂದ್ರಪ್ರಸಾದ್‌ ಮುಖ್ಯಪಾತ್ರಗಳಲ್ಲಿ ನಟಿಸಿದ್ದರು. ಚಿತ್ರ ಯಶಸ್ವಿಯಾಗದಿದ್ದರೂ ಇಂಥದ್ದೊಂದು ವಿಷಯವನ್ನು ಸಿನಿಮಾ ಮಾಡಲು ಮುಂದಾದ ತಂಡವನ್ನು ಪ್ರಶಂಸಿಸಬೇಕು.

ಯಶೋಗಾಥೆ

ಸ್ವಾತಂತ್ರ್ಯ ಹೋರಾಟದ ಕತೆಗಳು ನೂರಾರು ಇವೆ. ಈ ಹೋರಾಟದಲ್ಲಿ ಭಾಗಿಯಾದವರ ಕತೆಗಳನ್ನು ಮಾತ್ರ ಹೇಳಿದರೆ ಪೂರ್ಣ ಅನ್ನಿಸುವುದಿಲ್ಲ. ಈ ಸಂದರ್ಭದಲ್ಲಿ ಹೋರಾಟಗಾರರ ಮನೆಯವರು ಅನುಭವಿಸಿದ ಯಾತನೆ, ಆತಂಕದ ದಿನಗಳನ್ನು ಕೂಡಾ ಸಿನಿಮಾ ಮಾಡುವ ಪ್ರಯತ್ನ ಕನ್ನಡ ಚಿತ್ರರಂಗದಲ್ಲಿ ನಡೆದಿದೆ. ಯಶೋಗಾಥೆ ಅಂಥದ್ದೊಂದು ಚಿತ್ರ. ಸ್ವಾತಂತ್ರ್ಯ ಹೋರಾಟದಲ್ಲಿ ಕಾಣೆಯಾದ ಗಂಡನಿಗಾಗಿ ಕಾಯುವ ಮಹಿಳೆ ಮತ್ತು ಬ್ರಿಟಿಷರನ್ನು ದಿಟ್ಟತನದಿಂದ ಎದುರಿಸುವ ಹೆಣ್ಣಿನ ಕತೆ ಇದರಲ್ಲಿದೆ. ಒಂಟಿ ಮನೆಯಲ್ಲಿ ಅವಳು ನಡೆಸುವ ಆತಂಕದ ಕ್ಷಣಗಳನ್ನು ಸೆರೆಹಿಡಿಯಲಾಗಿದೆ. ಮಾನಸ ಜೋಷಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ವಿನೋದ್‌ ಜೆ. ರಾಜ್‌ ಚಿತ್ರ ನಿರ್ದೇಶನ ಮಾಡಿದ್ದರು. ಪವಿತ್ರ ಬೆಳ್ಳಿಯಪ್ಪ, ಲೋಹಿತ್‌ ಸೂರ್ಯ ಮತ್ತಿತರರು ನಟಿಸಿದ್ದರು. ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪ್ರಯತ್ನ ಇದಾಗಿತ್ತು.

22 ಜುಲೈ 1947

ಇದೂ ಕೂಡ ಕಳೆದ ವಾರ ತೆರೆಕಂಡ ಮತ್ತೊಂದು ದೇಶಪ್ರೇಮವನ್ನು ಕುರಿತ ಚಿತ್ರ. ಸ್ವಾತಂತ್ರಪೂರ್ವದ ಕತೆಯನ್ನು ಸಿನಿಮಾ ಮಾಡಲಾಗಿದೆ. ದೇಶ ಭಕ್ತಿಯನ್ನು ತೋರುವ ಸತ್ಯಪ್ಪ ಎಂಬಾತನ ಕತೆ ಇದು. ಇವನು ಬಹಳ ನಿಷ್ಠೆಯಿಂದ ರಾಷ್ಟ್ರ ಬಾವುಟವನ್ನು ಏರಿಸುವ ಮತ್ತು ಇಳಿಸುವ ಕೆಲಸ ಮಾಡುತ್ತಿರುತ್ತಾನೆ. ಬಾವುಟ ಏರಿಸುವ ಕರ್ತವ್ಯವನ್ನು ತಾಯಿ ಸತ್ತ ದಿನವೂ ಮರೆಯದೆ ಪಾಲಿಸುವವನು. ಗಾಂಧಿ ತನ್ನ ತಂದೆಗೆ ನೀಡಿದ ಬಾವುಟ ಅವನಲ್ಲಿ ರಾಷ್ಟ್ರ ಪ್ರೇಮವನ್ನು ಹೆಚ್ಚಿಸಿರುತ್ತದೆ. ಆದರೆ, ಮಗ ದುಶ್ಚಟಕ್ಕೆ ಬಲಿಯಾಗುತ್ತಾನೆ. ದುಷ್ಕರ್ಮಿಗಳಿಂದ ಬಾವುಟ ರಕ್ಷಿಸಲು ಸತ್ಯಪ್ಪ ತನ್ನ ಪ್ರಾಣವನ್ನೇ ಒತ್ತೆ ಇಡುತ್ತಾನೆ.

ವಿಶಾಲ್‌ ರಾಜ್‌ ನಿರ್ದೇಶನದ ಚಿತ್ರ ಇಂದು ಬಿಡುಗಡೆ. ಗಾಯಕಿ ಸಂಗೀತ ಕಟ್ಟಿ ಸಂಗೀತ ನಿರ್ದೇಶನ ಮಾಡಿ, ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಸುಚೇಂದ್ರ ಪ್ರಸಾದ್‌, ಸುಧಾರಾಣಿ, ಅಚ್ಯುತ್‌ ಕುಮಾರ್‌, ಶೋಭರಾಜ್‌, ಸತೀಶ್‌ ಮತ್ತಿತರರು ನಟಿಸಿದ್ದಾರೆ. ಮುನೇಶ್ವರ ಮೂವಿ ಮೇಕರ್ಸ್‌ ಬ್ಯಾನರ್‌ನಲ್ಲಿ ಕೆ.ಎಂ. ನಂಜೇಗೌಡ ಚಿತ್ರ ನಿರ್ಮಾಣ ಮಾಡಿದ್ದಾರೆ. ನಾಗರಾಜ್‌ ಅದವಾನಿ ಛಾಯಾಗ್ರಹಣವಿದೆ.

ಈಸೂರು ದಂಗೆ

ಶಿವರಾಜ್‌ ಕುಮಾರ್‌ ಅಭಿನಯದಲ್ಲಿ ಸೆಟ್ಟೇರಲಿರುವ ಚಿತ್ರ ಇದು. ಕರ್ನಾಟಕದಲ್ಲಿರುವ ಈಸೂರು ಎಂಬ ಪುಟ್ಟ ಹಳ್ಳಿ ಬ್ರಿಟಿಷರ ವಿರುದ್ಧ ದಂಗೆ ಎದ್ದಿದ್ದು ಜಗತ್ತಿನಲ್ಲೇ ದೊಡ್ಡ ಸುದ್ದಿಯಾಯಿತು. ಈ ಹಳ್ಳಿಯ ಜನರು ತಮ್ಮದೇ ಒಂದು ಸರ್ಕಾರವನ್ನು ರಚಿಸಿಕೊಂಡರು. ಭಾರತದ ಧ್ವಜವನ್ನು ಹಾರಿಸಿದರು. ಈ ಹೋರಾಟದಲ್ಲಿ ಹಳ್ಳಿಯ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಇಡಿ ಹಳ್ಳಿಯೇ ಪಾಲ್ಗೊಂಡಿತ್ತು. ಇವರಲ್ಲಿ 5 ಮಂದಿ ಯುವಕರು ಮುಂದಾಳತ್ವ ವಹಿಸಿಕೊಂಡಿದ್ದವರ ಕುರಿತ ಈಸೂರು ದಂಗೆ ಚಿತ್ರ ಈ ವರ್ಷ ಸೆಟ್ಟೇರುವ ಸಾಧ್ಯತೆಗಳಿವೆ. ಶಿವರಾಜ್‌ ಕುಮಾರ್‌ ಅಲ್ಲದೆ, ಇನ್ನೂ ಕೆಲ ಸ್ಟಾರ್‌ ನಟರು ಈ ಚಿತ್ರದಲ್ಲಿ ನಟಿಸುವ ಸಾಧ್ಯತೆಗಳು ಕಾಣುತ್ತಿವೆ. ಯೋಗೀಶ್‌ ಮತ್ತು ನಟ ಪ್ರೇಮ್‌ ಹೆಸರೂ ಕೇಳಿಬಂದಿದೆ. ನಟ ಪುನೀತ್‌ ಕೂಡ ನಟಿಸುವ ಆಸಕ್ತಿ ತೋರಿಸಿದ್ದಾರೆ. ಚಿತ್ರವನ್ನು ನಿರ್ದೇಶನ ಮಾಡಲಿರುವ ವೈಭವ್‌ಗೆ ಇದು ಮೊದಲ ಸಿನಿಮಾ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


 ಕೌಟುಂಬಿಕ ಕಲಹ ಹಿನ್ನೆಲೆ; ಬುದ್ದಿವಾದ ಹೇಳಿದ ತಂಗಿಯನ್ನೇ ಕೊಂದ ಅಣ್ಣ…


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


‘ಒಡಕು ಮೂಡಿಸಿದ ಸಿದ್ಧರಾಮಯ್ಯ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್