* ಶರಣು ಹುಲ್ಲೂರು
ಈವರೆಗೂ ಸೆಂಟಿಮೆಂಟ್ ಕತೆಗಳ ಮೂಲಕ ಗುರುತಿಸಿಕೊಂಡಿದ್ದ ನಿರ್ದೇಶಕ ಆರ್.ಚಂದ್ರು, ಇದೀಗ 'ಲಕ್ಷ್ಮಣ' ಚಿತ್ರದ ಮೂಲಕ ಔಟ್ ಅಂಡ್ ಔಟ್ ಮಾಸ್ ಸಿನಿಮಾ ಮಾಡಿದ್ದಾರೆ. ಕೆಲವು ಸಣ್ಣಪುಟ್ಟ ನ್ಯೂನ್ಯತೆಗಳಿದ್ದರೂ, ಮಾಸ್ ಪ್ರೇಕ್ಷಕರಿಗೆ ಈ ಸಿನಿಮಾ ಇಷ್ಟವಾಗಲಿದೆ.
ರಾಮಾಯಣದಲ್ಲಿ ಬರುವ ಆ ಲಕ್ಷ್ಮಣನಿಗೂ, ಈ ಲಕ್ಷ್ಮಣನಿಗೂ ಸಂಬಂಧವಿಲ್ಲ. ಆದರೂ, ಕುಟುಂಬವನ್ನು ಕಾಪಾಡುವುದೇ ಇಬ್ಬರ ಗುರಿ. ಹೀಗಾಗಿ ಶೀರ್ಷಿಕೆಗೆ ತಕ್ಕಂತೆ ಲಕ್ಷ್ಮಣ (ಅನೂಪ್ ರೇವಣ್ಣ) ತನ್ನ ಕುಟುಂಬವನ್ನು ಕಾಪಾಡಲು ಗೆರೆ ಎಳೆಯುತ್ತಾನೆ. ತನ್ನ ಕುಟುಂಬಕ್ಕೆ ತೊಂದರೆ ಕೊಡಲು ಬರುವ ಖಳನಾಯಕರನ್ನು ಚಚ್ಚಿ ಕೊಲ್ಲುತ್ತಾನೆ.
ಇದು ಪಕ್ಕಾ ಮಾಸ್ ಸಿನಿಮಾ ಆಗಿದ್ದರಿಂದ, ಕತೆಯ ಬಗ್ಗೆ ಕೇಳುವ ಹಾಗಿಲ್ಲ. ರೌಡಿಗಳನ್ನು ಮಟ್ಟ ಹಾಕುವುದೇ ನಾಯಕನ ಕೆಲಸವಾಗಿದ್ದರಿಂದ, ಅನೂಪ್ ಅದನ್ನು ಸಮರ್ಥವಾಗಿ ಮಾಡಿದ್ದಾರೆ. ಡಾನ್ಸ್ ಮತ್ತು ಸಾಹಸ ಸನ್ನಿವೇಶಗಳಲ್ಲಿ ಆಸಕ್ತಿ ತೋರಿಸಿದಂತೆ ನಟನೆಯಲ್ಲೂ ಅವರು ಶ್ರಮ ವಹಿಸಬೇಕಿತ್ತು. ಅಂಜಲಿ ಪಾತ್ರವನ್ನು ಮೇಘನಾ ರಾಜ್ ಚೆನ್ನಾಗಿ ನಿಭಾಯಿಸಿದ್ದಾರೆ. ಅದರಲ್ಲೂ 'ರಾಧಾ...' ಹಾಡಿನಲ್ಲಿ ಇವರನ್ನು ನೋಡುವುದೇ ಸೊಗಸು. ರವಿಚಂದ್ರನ್ ಕೈಯಲ್ಲಿ ಗನ್ ಇದ್ದರೂ, ಅದು ಹೂವಿನಂತೆ ಕಂಡರೆ ಅಚ್ಚರಿ ಇಲ್ಲ. ಆ ರೀತಿ ಮುದ್ದು ಮುದ್ದಾಗಿ ಕಂಡಿದ್ದಾರೆ ಕ್ರೇಜಿಸ್ಟಾರ್.
ಇದು ಪಕ್ಕಾ ರಿವೇಂಜ್ ಸ್ಟೋರಿ ಆಗಿರುವುದರಿಂದ, ಖಳನಟರ ಪಾತ್ರಗಳೇ ತುಂಬಿವೆ. ಹೀಗಾಗಿ ಲಾಂಗ್ನ ಹೊಳೆಪಿನ ಜತೆ ಗುಂಡಿನ ಸದ್ದೇ ಹೆಚ್ಚಾಗಿದೆ. ಅದಕ್ಕೆ ತಕ್ಕಂತೆ ಹಿನ್ನೆಲೆ ಸಂಗೀತ ಬೆರೆತಿಲ್ಲವಾದ್ದರಿಂದ ಪ್ರೇಕ್ಷಕನ ಕಣ್ಣಿಗೆ ಹಿಂಸೆಯೇ ಕಾಣುತ್ತದೆ. ಅರ್ಜುನ್ ಜನ್ಯ ಸಂಗೀತದಲ್ಲಿ ಬಂದಿರುವ 'ನೆನ್ನೆ ಮೊನ್ನೆ..' ಮತ್ತು 'ರಾವೆ ರಾವೆ..' ಹಾಡು ಹಿತವೆನಿಸುತ್ತವೆ. ಹಿನ್ನೆಲೆ ಸಂಗೀತ ಚಿತ್ರಕ್ಕೆ ಮೈನಸ್ ಪಾಯಿಂಟ್. ನಿರ್ದೇಶಕರು ತೆಲುಗಿನ ಮಾಸ್ ಸಿನಿಮಾದ ಮಾದರಿಯನ್ನೇ ಈ ಚಿತ್ರಕ್ಕೂ ಫಿಕ್ಸ್ ಮಾಡಿದ್ದರಿಂದ, ಸಾಹಸ ಸನ್ನಿವೇಶಗಳು ಅದ್ಧೂರಿಯಾಗಿ ಮೂಡಿ ಬಂದಿವೆ.
ಕನ್ನಡ ಚಿತ್ರ