ಕಳೆದ ವಾರವಿಡೀ ವಿವಾದದ ಸುಳಿಯಲ್ಲಿ ಸಿಕ್ಕಿಕೊಂಡಿದ್ದ ಹಿಂದಿ ಚಿತ್ರ 'ಉಡ್ತಾ ಪಂಜಾಬ್' ಕೊನೆಗೂ ಉಡಾವಣೆಗೊಂಡಿದೆ. ಬಿಡುಗಡೆಗೆ ಕೆಲ ಗಂಟೆಗಳಿರುವಾಗಲೇ ಆನ್ಲೈನ್ನಲ್ಲಿ ಲೀಕ್ ಆಗಿ ಚಿತ್ರತಂಡವನ್ನು ಕಂಗೆಡಿಸಿದ್ದ ಚಿತ್ರವನ್ನು ಪ್ರತಿಯೊಬ್ಬರೂ ಚಿತ್ರಮಂದಿರಕ್ಕೆ ಹೋಗಿ ನೋಡಲೇಬೇಕು. ಯಾಕೆಂದರೆ, ನಮ್ಮಲ್ಲಿ ಯಾರ ಮಕ್ಕಳಾದರೂ ಈ ಅಫೀಮಿನ ಕರಾಳ ಕೂಪಕ್ಕೆ ಬೀಳಬಹುದು. ಪೋಷಕರನ್ನು ಮಾತ್ರವಲ್ಲ, ಅಫೀಮು ದಂಧೆಯಲ್ಲಿರುವವರನ್ನೂ ಬಡಿದೆಬ್ಬಿಸುವಂತೆ ಚಿತ್ರ ಮಾಡಿ ತೋರಿಸಿದ್ದಾರೆ ನಿರ್ದೇಶಕ ಅಭಿಷೇಕ್ ಚೌಬೆ.
'ಉಡ್ತಾ ಪಂಜಾಬ್' ಎಂದು ಹೆಸರಿಡುವ ಮೂಲಕ ಇಡೀ ಪಂಜಾಬ್ ಹೇಗೆ ಅಫೀಮಿನ ನಶೆಯಲ್ಲಿ ತೇಲುತ್ತಿದೆ ಎನ್ನುವುದನ್ನು ಮಾರ್ಮಿಕವಾಗಿ ಹೇಳಿದ್ದಾರೆ ನಿರ್ದೇಶಕರು. ರಾಜಕೀಯ ಮತ್ತು ಅಫೀಮು ದಂಧೆ ಕೈಜೋಡಿಸಿದಾಗ ಸಮಾಜದ ಮೇಲೆ ಆಗಬಹುದಾದ ಭೀಕರ ಪರಿಣಾಮವನ್ನು ಚಿತ್ರದಲ್ಲಿ ನೋಡಬಹುದು. ಅಫೀಮು, ರಾಜಕೀಯ ಮತ್ತು ವ್ಯವಸ್ಥೆಯ ವಿರುದ್ಧದ ಹೋರಾಟವಾಗಿ ಸಿನಿಮಾ ಮೂಡಿ ಬಂದಿದೆ.
ಚಿತ್ರದ ಪ್ರಾರಂಭದ ದೃಶ್ಯವೇ ರೂಪಕವಾಗಿ ಮೂಡಿ ಬಂದು ಗಮನ ಸೆಳೆಯುತ್ತದೆ. ಡ್ರಗ್ ಡೀಲರ್ ಪ್ಯಾಕೆಟ್ಗಳನ್ನು ದೂರದ ಗದ್ದೆಯೊಳಗೆ ಬೀಳುವಂತೆ ಬೀಸಿ ಒಗೆಯುತ್ತಾರೆ. ಅದು ಅಕಸ್ಮಾತ್ ಬಿಹಾರದಿಂದ ಗದ್ದೆ ಕೆಲಸಕ್ಕೆ ವಲಸೆ ಬಂದಿದ್ದ ಹಾಕಿ ಆಟಗಾರ್ತಿ ಪಿಂಕಿ (ಆಲಿಯಾ ಭಟ್) ಕೈಗೆ ಸಿಗುತ್ತದೆ. ಹೆರಾಯಿನ್ ಹೆಸರೂ ಗೊತ್ತಿರದ ಅವಳು ಹಣ ಮಾಡಲು ಮಾರಲು ಯತ್ನಿಸಿದಾಗ ಎಂಥ ನರಕಕ್ಕೆ ಕರೆದೊಯ್ಯುತ್ತದೆ ಎನ್ನುವುದು ಒಂದು ಟ್ರ್ಯಾಕ್. ಇನ್ನೊಂದೆಡೆ ಯುವಜನತೆಯ ಮಾಡೆಲ್ ಜನಪ್ರಿಯ ಪಾಪ್ ಗಾಯಕ ಟಾಮಿ ಸಿಂಗ್ಗೆ ಕೂಡಾ ಹಾಡಲು ಡ್ರಗ್ ಇರಬೇಕು. ಇಂದಿನ ಯುವಕರ ಲೈಫ್ಸ್ಟೈಲ್ನ ಪ್ರತಿರೂಪ ಇವನು. ಹಳ್ಳಿಯ ಹುಡುಗರೂ ಕೂಡಾ ಇವನ ಹಾಡಿನ ಮೋಡಿಗೆ ಸಿಕ್ಕಿ ಅನುಸರಿಸುತ್ತಾರೆ. ಕೆಲ ದಿನ ಜೈಲು ಸೇರುತ್ತಾನೆ. ಅಲ್ಲಿ ಅವನ ಬದುಕಿಗೆ ತಿರುವು ಸಿಗುತ್ತದೆ. ಡಾ. ಪ್ರೀತ್ (ಕರಿನಾ ಕಪೂರ್) ಹೆರಾಯಿನ್ಗೆ ಬಲಿಯಾದವರಿಗೆ ಚಿಕಿತ್ಸೆ ಕೊಡುತ್ತಾ ಅವರನ್ನು ಸಹಜ ಬದುಕಿಗೆ ತರಲೆತ್ನಿಸುವವರು. ಸರ್ತಾಜ್ (ದಿಲ್ಜಿತ್) ಪೋಲಿಸ್. ರಾಜಕಾರಣಿಗಳ ಕೃಪಾಕಟಾಕ್ಷದಲ್ಲಿ ಅಕ್ರಮ ಹೆರಾಯಿನ್ ಸಾಗಾಟಕ್ಕೆ ಸಹಕರಿಸುವ ಪೋಲಿಸ್ ತಂಡದಲ್ಲಿ ಒಬ್ಬ. ಇವನ ತಮ್ಮನೇ ಅಫೀಮಿಗೆ ಬಲಿಯಾದಾಗ ಬೆಚ್ಚಿ ಬೀಳುತ್ತಾನೆ. ಪ್ರೀತ್ ಮತ್ತು ಸರ್ತಾಜ್ ಅಫೀಮು ತಯಾರಿಕೆಯಿಂದ ಅದನ್ನು ಎಲೆಕ್ಷನ್ ಸಮಯದಲ್ಲಿ ಜನರಿಗೆ ಹಂಚುವವರೆಗೆ ಶಾಮೀಲಾಗಿರುವ ಎಲ್ಲರ ಬಗ್ಗೆ ದಾಖಲೆಗಳನ್ನು ಸಂಗ್ರಹಿಸಿ ಎಲೆಕ್ಷನ್ ಕಮಿಷನ್ಗೆ ಕೊಡಲು ಮುಂದಾಗುತ್ತಾರೆ. ಇನ್ನೊಂದೆಡೆ ಟಾಮಿ ಸಿಂಗ್ ತಾನು ನಾಲ್ಕು ವರ್ಷ ಸಂಗೀತದ ಮೋಡಿ ಮಾಡುತ್ತಾ ಜನರಲ್ಲಿ ಅಫೀಮಿನ ಚಟಕ್ಕೆ ತಾನು ಹೇಗೆ ಕಾರಣನಾದೆ ಎಂಬುದನ್ನು ಅರಿತು ಎಲ್ಲದರಿಂದ ದೂರ ಓಡಲು ಬಯಸುತ್ತಾನೆ. ಬಲವಂತದಿಂದ ಅಫೀಮು ಸೇವನೆ ಮತ್ತು ಅತ್ಯಾಚಾರಕ್ಕೆ ಒಳಗಾಗುವ ಪಿಂಕಿ ತಪ್ಪಿಸಿಕೊಳ್ಳಲು ಹರಸಾಹಸ ಮಾಡುತ್ತಾಳೆ. ಹೀಗೆ ತಪ್ಪಿಸಿಕೊಳ್ಳುವಾಗ ಟಾಮಿ ಮತ್ತು ಪಿಂಕಿ ಎದುರಾಗುತ್ತಾರೆ. ಪಿಂಕಿ ಮತ್ತೆ ಸೆರೆಯಾಗುತ್ತಾಳೆ. ಅರಿಯದ ಸೆಳೆತಕ್ಕೆ ಸಿಗುವ ಟಾಮಿ ಅವಳನ್ನು ಹುಡುಕಿಕೊಂಡು ಹೋಗುತ್ತಾನೆ. ಹೀಗೆ ನಾಲ್ಕು ಟ್ರ್ಯಾಕ್ಗಳಲ್ಲಿ ಸಾಗುವ ಸಿನಿಮಾ ಮೊದಲರ್ಧ ಉಸಿರು ಬಿಗಿಹಿಡಿದು ನೋಡುವಂತೆ ಇದೆ. ದ್ವಿತಿಯಾರ್ಧದಲ್ಲಿ ಚಿತ್ರ ಸ್ವಲ್ಪ ಹದ ತಪ್ಪಿದೆ ಎನಿಸುತ್ತದೆ. ಕೆಲವೆಡೆ ಹೀಗೂ ಇರುತ್ತಾ ಅನ್ನಿಸಿದರೂ ಕ್ಷಣ ಕ್ಷಣವೂ ಕುತೂಹಲ ಕೆರಳಿಸುತ್ತಾ, ಅನಿರೀಕ್ಷಿತ ಘಟನೆಗಳಿಂದ ಚಿತ್ರ ನೋಡುಗರನ್ನು ಸೆಳೆಯುತ್ತದೆ. ಟಫ್ ಸ್ಕ್ರಿಪ್ಟ್ ಬ್ರಿಲಿಯಂಟ್ ನರೇಷನ್ ಇದೆ. ಮಾರಕ ದಂಧೆಯ ಲೋಕದೊಳಗೊಂದು ಸುತ್ತು ಹಾಕಿದಂತೆ ಆಗುತ್ತದೆ.
ನಟಿ ಆಲಿಯಾ ಭಟ್ ಉಳಿದೆಲ್ಲಾ ನಟರನ್ನು ಮೀರಿಸುವಂತೆ ನಟಿಸಿದ್ದಾರೆ. ದಡ್ಡತನಕ್ಕೆ ಹೆಸರಾದ ಆಲಿಯಾ ಭಟ್ ತಮ್ಮ ನಟನೆಯಿಂದ ಅದೆಲ್ಲವನ್ನೂ ಮೀರಿ ಉತ್ಕೃಷ್ಟ ಮಟ್ಟದಲ್ಲಿ ನಿಲ್ಲುತ್ತಾರೆ. ಸಾಹಿದ್ ಕಪೂರ್ ಕೂಡಾ ತಮ್ಮ ಪಾತ್ರದಲ್ಲಿ ಮಿಂಚಿದ್ದಾರೆ. ಮುಗ್ಧ, ಮೃಧು ಸ್ವಭಾವದವನಾಗಿ ದಲ್ಜಿತ್ ನಟನೆಯ ಎದುರು ಕರಿನಾ ಸಪ್ಪೆ ಎನಿಸುತ್ತಾರೆ. ರಿಯಲಿಸ್ಟಿಕ್ ನಿರೂಪಣೆಯಲ್ಲಿ, ವ್ಯಂಗ್ಯವನ್ನೂ ಸೇರಿಸಲಾಗಿದೆ. ಚಿತ್ರದ ಸಂಗೀತ ಹೈಲೈಟ್. ಒಂದು ಚಿತ್ರವನ್ನು ಸಿನಿಮಾ ಆಗಿ ಮಾತ್ರ ನೋಡದೆ, ಬದುಕಿಗೆ ಮಾರಕವಾಗುವ ವಿಚಾರಗಳನ್ನು ಅರಿತು ಸುಧಾರಣೆಗೆ ಪ್ರಯತ್ನಿಸುವ ನಿಟ್ಟಿನಲ್ಲಿ ನೋಡಬೇಕಾದ ಚಿತ್ರ ಉಡ್ತಾ ಪಂಜಾಬ್.
-ಪದ್ಮಾ ಶಿವಮೊಗ್ಗ