-ಶಶಿಧರ
ಜುಬ್ಬಾದ ಜೇಬಿನಲ್ಲಿ ತುಂಬಿಕೊಂಡ ಕಡಲೇಕಾಯಿ ಮೆಲ್ಲುತ್ತಾ, ಎದುರಿಗೆ ಬಂದವರಿಗೂ ಹಂಚುತ್ತಾ ಪ್ರೀತಿಯಿಂದ ಮಾತನಾಡಿಸುವ ಬುಡೇನ್ ಸಾಬ್, ಜೀವನ ಪ್ರೀತಿಯ ಸಂಕೇತವಾಗಿ ಕಾಣಿಸುತ್ತಾರೆ. ಪಟ್ಟಣದಿಂದ ದಿನನಿತ್ಯದ ಅಗತ್ಯ ವಸ್ತುಗಳನ್ನು ಕತ್ತೆಗಳ ಮೇಲೆ ಹೊರಿಸಿ ತಂದು ಹಳ್ಳಿಗಳಲ್ಲಿ ಮಾರಾಟ ಮಾಡುವುದು ಬುಡೇನ್ ಸಾಹೇಬರ ಕಸುಬು. ಕಾಯಿಲೆಯಿಂದ ನರಳುವವರಿಗೆ ಔಷಧವನ್ನೂ ತಂದುಕೊಡುವ ಅವರೆಂದರೆ ಹಳ್ಳಿಗರಿಗೂ ಪ್ರೀತಿ. ಹೀಗೆ, ಎಲ್ಲರಲ್ಲಿಯೂ ಒಳ್ಳೆಯತನ ಹುಡುಕುವ ಬುಡೇನ್ ಸಾಬ್ ತನ್ನದಲ್ಲದ ತಪ್ಪಿಗೆ ಸುಳಿಗೆ ಸಿಲುಕುವ ಸಂದರ್ಭ ಎದುರಾಗುತ್ತದೆ.
ಅನಾಥ ಯುವಕನೊಬ್ಬನಿಗೆ ಮಾತು ಬಾರದ ತಮ್ಮ ಪುತ್ರಿಯನ್ನು ಮದುವೆ ಮಾಡಿಕೊಡುವ ಬುಡೇನ್ ಸಂಕಷ್ಟಕ್ಕೆ ಸಿಲುಕುತ್ತಾರೆ. ವೈಯಕ್ತಿಕ ನೆಲೆಯ ಸಮಸ್ಯೆ ನಿಧಾನವಾಗಿ ಕೋಮುವಾದದ ರೂಪ ಪಡೆಯುತ್ತದೆ. ಈ ಹಂತದಲ್ಲಿ ಕುಟುಂಬವೊಂದರ ಸಮಸ್ಯೆ ಹೇಗೆ ಹಳ್ಳಿ, ಸಮಾಜದ ಸಮಸ್ಯೆಯಾಗಿ ಕಾಡುತ್ತದೆ ಎನ್ನುವುದನ್ನೂ ನೋಡಬಹುದು. ಸಹಜೀವನ, ಬದುಕಿನ ನೀತಿ ಸಾರುವ ಅವರಿಗೆ ತನ್ನ ಒಳ್ಳೆಯತನ, ಅಮಾಯಕತೆಯೇ ಮುಳುವಾಗುತ್ತದೆ. ಅಂತಿಮವಾಗಿ ಕುಟುಂಬಕ್ಕಿಂತ ಸಮಾಜದ ಹಿತವೇ ಮುಖ್ಯ ಎನ್ನುವ ಸಂದೇಶ ದಾಟಿಸುತ್ತಾರೆ ಬುಡೇನ್ಸಾಬ್.
ಅಪಾರ ಜೀವನ ಪ್ರೀತಿಯ ಬುಡೇನ್ಸಾಬ್ ಪಾತ್ರದಲ್ಲಿ ಶ್ರೀನಾಥ್ರದ್ದು ಆಪ್ತ ಅಭಿನಯ. ಇಡೀ ಚಿತ್ರವನ್ನು ಹೆಗಲ ಮೇಲೆ ಹೊತ್ತೊಯ್ಯುವ ಅವರಿಗೆ ಹಿರಿಯ ಪುತ್ರಿಯಾಗಿ ಪ್ರಗತಿ ಉತ್ತಮ ಸಾಥ್ ಕೊಟ್ಟಿದ್ದಾರೆ. ನಟನೆಗೆ ಹೆಚ್ಚು ಅವಕಾಶವಿರುವ ಪಾತ್ರವನ್ನು ಸೊಗಸಾಗಿ ನಿಭಾಯಿಸಿರುವ ಅವರು ಭರವಸೆ ಮೂಡಿಸುತ್ತಾರೆ. ಮಠದಯ್ಯನ ಪಾತ್ರದಲ್ಲಿ ಚನ್ನಕೇಶವ ಅವರದ್ದು ಸಹಜ ಅಭಿವ್ಯಕ್ತಿ. ಹಿನ್ನೆಲೆಯಲ್ಲಿ ಕೇಳಿಸುವ 'ಮೂರು ದಿನದ ಬದುಕಲಿ ಯಾಕೆ ಇಂಥ ಗಲಿಬಿಲಿ..' ಎನ್ನುವಂತಹ ಸರಳ ಹಾಡುಗಳು ಕತೆಗೆ ಅಗತ್ಯ ಭೂಮಿಕೆ ಒದಗಿಸುತ್ತವೆ. ಆರ್.ಮಂಜುನಾಥ್ ಕ್ಯಾಮೆರಾ ಕಣ್ಣಿನಲ್ಲಿ ಚಿಕ್ಕಮಗಳೂರು ಆಸುಪಾಸಿನ ಸುಂದರ ಪರಿಸರ ಸೊಗಸಾಗಿ ಕಾಣಿಸುತ್ತದೆ. ಅಪರೂಪದ ವಸ್ತುವನ್ನು ತೆರೆಗೆ ಅಳವಡಿಸುವಲ್ಲಿ ನಿರ್ದೇಶಕ ಪಿ.ಎಚ್.ವಿಶ್ವನಾಥ್ ಯಶಸ್ವಿಯಾಗಿದ್ದಾರೆ. ಸದಭಿರುಚಿಯ ಸಿನಿಮಾ ಅಪೇಕ್ಷಿಸುವವರು ನೋಡಬೇಕಾದ ಪ್ರಯೋಗವಿದು.
ಕನ್ನಡ ಚಿತ್ರ: ಸುಳಿ