* ಶಶಿಧರ ಆರ್.
ಸಿನಿಮಾವೊಂದಕ್ಕೆ ಕೊನೆಯ ಗಳಿಗೆಯವರೆಗೂ ನೋಡಿಸಿಕೊಳ್ಳುವ ಗುಣವಿರಬೇಕು ಎಂದು ಸಾಮಾನ್ಯವಾಗಿ ವೀಕ್ಷಕರು ಅಪೇಕ್ಷಿಸುತ್ತಾರೆ. ಇತ್ತೀಚೆಗೆ ತೆರೆಕಂಡು ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವ ಕೆಲವು ಸಿನಿಮಾಗಳು ಇದಕ್ಕೆ ಉದಾಹರಣೆಯಾಗಿ ನಿಲ್ಲುತ್ತವೆ. 'ಬ್ರಹ್ಮ ವಿಷ್ಣು ಮಹೇಶ್ವರ' ಸಿನಿಮಾ ಕೂಡ ಕೊನೆಯ ಹದಿನೈದು ನಿಮಿಷಗಳ ಕಾಲ ನೋಡುಗರನ್ನು ಹಿಡಿದಿಡುತ್ತದೆ. ಆದರೆ ಅದಕ್ಕೂ ಮುನ್ನ ನಿರ್ದೇಶಕರು ನಿರೂಪಿಸಿರುವ ಕತೆ ಮಾತ್ರ ಚೌಕಟ್ಟಿಲ್ಲದೆ ಅತ್ತಿಂದಿತ್ತ ಹರಿದಾಡುತ್ತದೆ. ಇಂಟರ್ವೆಲ್ ಮತ್ತು ಅದಾದ ನಂತರವೂ ಕತೆಗೇನೋ ತಿರುವು ಸಿಗಬಹುದೆನ್ನುವ ಪ್ರೇಕ್ಷಕರ ನಿರೀಕ್ಷೆಗೆ ಸೂಕ್ತ ಸ್ಪಂದನೆ ಸಿಗುವುದೇ ಇಲ್ಲ.
ಮೂವರು ಯುವಕರ ಸೂತ್ರ ಹರಿದ ಗಾಳಿಪಟದಂಥ ಬದುಕು, ಕಣ್ಣಾಮುಚ್ಚಾಲೆಯಾಡುವ ಪ್ರೀತಿ, ಗುರಿ ಮುಟ್ಟದ ಹತಾಶೆ, ಅಂತಿಮವಾಗಿ ಕೈಗೂಡುವ ಕನಸುಗಳ ದೊಡ್ಡ ಕ್ಯಾನ್ವಾಸ್ ಇಲ್ಲಿದೆ. ಈ ಮೂವರು ಯುವಕರ ಪೈಕಿ ಚಿತ್ರನಿರ್ದೇಶಕನಾಗಿ ಗುರುತಿಸಿಕೊಳ್ಳುವ ಉಮೇದು ಒಬ್ಬನಿಗೆ. 'ಬ್ರಹ್ಮ ವಿಷ್ಣು ಮಹೇಶ್ವರ' ನಿರ್ದೇಶಕ ಸ್ಪರೂಪ್ ತಾವು ಹೇಳಬೇಕೆಂದಿರುವುದನ್ನು ಈ ಪಾತ್ರದ ಮೂಲಕವೇ ದಾಟಿಸಲು ಯತ್ನಿಸಿದ್ದಾರೆ. ಚಿತ್ರವೊಂದನ್ನು ಮಾಡಬೇಕೆಂದು ಹೊರಟಾಗ ತಾವು ಪಟ್ಟ ಪಡಿಪಾಟಲನ್ನು ಹೇಳುತ್ತಾ ಹೋಗುತ್ತಾರೆ. ಹಾಗೆ ನೋಡಿದರೆ, ತೆರೆ ಮೇಲೆ ಇದೊಂದು ವಿಶಿಷ್ಟ ರೀತಿಯ ಕತೆ ಕಟ್ಟುವ ಶೈಲಿಯೂ ಹೌದು. ಆದರೆ ಈ ಪ್ರಯೋಗಕ್ಕೆ ಸೂಕ್ತ ಟ್ರೀಟ್ಮೆಂಟ್ ಕೊಡುವಲ್ಲಿ ನಿರ್ದೇಶಕರು ಸಂಪೂರ್ಣ ಯಶಸ್ಸು ಕಂಡಿಲ್ಲ ಎಂದೇ ಹೇಳಬಹುದು.
ದಶಕಗಳ ಹಿಂದಿನ ಯಶಸ್ವೀ ಸಿನಿಮಾ 'ಬ್ರಹ್ಮ ವಿಷ್ಣು ಮಹೇಶ್ವರ' ಶೀರ್ಷಿಕೆಯೊಂದಿಗೆ ತಯಾರಾಗಿರುವ ಚಿತ್ರವಿದು. ಹಾಗೆಂದು ಕತೆ ಮತ್ತಿತರ ವಿಷಯಗಳಲ್ಲಿ ಯಾವುದೇ ಸಾಮ್ಯತೆಯಂತೂ ಇಲ್ಲ. ಶೀರ್ಷಿಕೆ ಗೀತೆ ಸೇರಿದಂತೆ ಎರಡು ಮಧುರ ಹಾಡುಗಳಿಗೆ ಅನೂಪ್ ಸಿಳೀನ್ ಸಂಯೋಜಿಸಿರುವ ಸಂಗೀತ ಹಿತ ಎನಿಸುತ್ತದೆ. ಮುಖ್ಯಭೂಮಿಕೆಯ ನಟ-ನಟಿಯರ ಆಯ್ಕೆಯಲ್ಲಿ ಜಾಣ್ಮೆ ಮೆರೆದಿರುವ ನಿರ್ದೇಶಕರು ನಿರೂಪಣೆಯಲ್ಲಿ ಎಚ್ಚರಿಕೆ ವಹಿಸಬೇಕಿತ್ತು. ಬಿಡಿಬಿಡಿಯಾಗಿ ಕೆಲವು ದೃಶ್ಯಗಳು ಆಪ್ತವೆನಿಸಿದರೂ ಚಿತ್ರಕ್ಕೊಂದು ಚೆಂದದ ಚೌಕಟ್ಟಿಲ್ಲ ಎನ್ನುವುದು ವಿಪರ್ಯಾಸ.
ಕನ್ನಡ ಚಿತ್ರ