* ಪದ್ಮಾ ಶಿವಮೊಗ್ಗ
ಗ್ರಾಮೀಣ ಮತ್ತು ನಗರಗಳ ಕತೆ ಹೇಳುವ ಸಿನಿಮಾಗಳ ನಡುವೆ ಅಪರೂಪಕ್ಕೆ ಕಾಡು ಜನರ ಬದುಕು ತೋರಿಸುವ ಚಿತ್ರ ತೆರೆ ಕಂಡಿದೆ. ಅದು ಶಿವು ಹೊಳಲು ನಿರ್ದೇಶನದ ಬರ್ತ್ ಚಿತ್ರ. ಈ ಹಿಂದೆ ಭೂಮಿ ಗೀತ, ಒಂದು ಮುತ್ತಿನ ಕತೆ ಚಿತ್ರಗಳು ಬಂದಿದ್ದವು. ಆದರೆ, ಬರ್ತ್ ಮಾಮೂಲಿ ಕಮರ್ಷಿಯಲ್ ಚಿತ್ರಕ್ಕಿಂತ ಭಿನ್ನವಾಗಿದ್ದರೂ ಸಮರ್ಥವಾಗಿ ತೆರೆಯ ಮೇಲೆ ತರುವಲ್ಲಿ ನಿರ್ದೇಶಕರು ಸೋತಿದ್ದಾರೆ. ಅತಿಯಾದ ಹಿಂಸೆಯ ದೃಶ್ಯಗಳಿಂದ ಎ ಸರ್ಟಿಫಿಕೇಟ್ ಪಡೆದಿದೆ.
ಸ್ವಗತದಲ್ಲೇ ಪೂರ್ಣ ಸಂಭಾಷಣೆ ಇರುವ ಮೊದಲ ಚಿತ್ರ ಇದು ಎನ್ನಬಹುದಾಗಿದೆ. ಇದು ವಿಶೇಷವಾದರೂ ಚಿತ್ರದ ಮೈನಸ್ ಪಾಯಿಂಟ್ ಅದೇ ಆಗಿದೆ. ಬಾಯಿ ಬಿಡದ ನಟರು ಕಣ್ಣು, ಹುಬ್ಬು ಆಡಿಸುತ್ತಾ ಭಾವನೆಗಳನ್ನು ವ್ಯಕ್ತಪಡಿಸಲು ಪ್ರಯಾಸಪಟ್ಟಿದ್ದಾರೆ. ಮೂಕ ಜನರ ಮನದ ಮಾತನ್ನು ಜನರಿಗೆ ತಲುಪಿಸಲು ನಟರಿಂದಲೇ ಹಿನ್ನೆಲೆಯಲ್ಲಿ ಡೈಲಾಗ್ ಹೇಳಿಸಲಾಗಿದೆ.
ತಾಂಡಾದ ಮುಖ್ಯಸ್ಥ ಶ್ರೀಕಿ ಮತ್ತು ಆತನ ಹೆಂಡತಿ ದುನಿಯಾ ರಶ್ಮಿ, ಒಂದಷ್ಟು ಜನ. ಜತೆಗೆ ಶ್ರೀಕಿಗೆ ಕಣ್ಣಿಲ್ಲದ ಒಬ್ಬ ತಮ್ಮ. ಹಿಡಿದ ಒಂದೇ ಒಂದು ಮೀನನ್ನು ಕಿತ್ತುಕೊಳ್ಳಲು ಬಿಲ್ಲು, ಈಟಿಗಳೊಂದಿಗೆ ಬೆನ್ನತ್ತಿದ ಇನ್ನೊಂದು ತಾಂಡಾದವರಲ್ಲಿ ಒಬ್ಬನನ್ನು ಶ್ರೀಕಿ ಸಾಯಿಸುತ್ತಾನೆ. ಅವನು ಇನ್ನೊಂದು ತಾಂಡಾದ ನಾಯಕನ ತಮ್ಮ. ಶ್ರೀಕಿ ಮೇಲೆ ಸೇಡು ತೀರಿಸಿಕೊಳ್ಳಲು ವಲಸೆ ಹೋಗುತ್ತಿದ್ದ ಶ್ರೀಕಿ ತಂಡದ ಕೆಲವರನ್ನು ಕಿಡ್ನಾಪ್ ಮಾಡುತ್ತಾನೆ. ಅವರಲ್ಲಿ ದುನಿಯಾ ರಶ್ಮಿ ಮತ್ತು ಕುರುಡನೂ ಸೇರಿರುತ್ತಾರೆ. ಇವರನ್ನು ಹುಡುಕಿಕೊಂಡು ಹೋಗುವ ಶ್ರೀಕಿ ತನ್ನವರನ್ನು ರಕ್ಷಿಸುತ್ತಾನಾ? ಇಲ್ಲವಾ? ಎನ್ನುವುದೇ ಸಿನಿಮಾ.
ಒಂದು ದೃಶ್ಯದಲ್ಲಿ ಚಿಕ್ಕ ಹುಡುಗನೊಬ್ಬ ಬೊಂಬಿನ ತುಂಡನ್ನು ಎದುರಾಳಿಯ ಹೊಟ್ಟೆಗೆ ತಿವಿದು, ತುಂಬಿಕೊಟ್ಟ ರಕ್ತವನ್ನು ನಾಯಕ ತಮ್ಮನ ಸಮಾಧಿಯ ಮೇಲೆ ಸುರಿಯುತ್ತಾನೆ. ಇನ್ನೊಂದು ದೃಶ್ಯದಲ್ಲಿ ಶ್ರೀಕಿ ಕಾಡು ಕೋಣದ ಕೊಂಬಿನಿಂದ (ಹಾಗಂದುಕೊಳ್ಳಬೇಕು) ಎದುರಾಳಿಯ ಕತ್ತನ್ನು ಕತ್ತರಿಸಿದ ತಕ್ಷಣ ರುಂಡ ಹಾರಿ ಗಾಳಿಯಲ್ಲಿ ತೇಲಿಕೊಂಡು ನೆಲಕ್ಕೆ ನೆಟ್ಟ ಕೋಲಿನ ಮೇಲೆ ಕೂರುತ್ತದೆ. ಇಂಥ ದೃಶ್ಯಗಳು ಸಿಲ್ಲಿ ಅನಿಸುತ್ತವೆ.
ಚಿತ್ರಕ್ಕೆ ಬರ್ತ್ ಅಂತ ಇಂಗ್ಲಿಷ್ ಹೆಸರು ಇಟ್ಟು ಹಾಲಿವುಡ್ನ ಅಪೊಕಾಲಿಪ್ಟ್ ಸಿನಿಮಾದಂತೆ ಕಾಡಿನಲ್ಲಿ ವಾಸಿಸುವ ತಾಂಡಾಗಳ ನಡುವಿನ ಸಂಘರ್ಷ ತೋರಿಸಲು ಮಾಡಿರುವ ವಿಫಲ ಪ್ರಯತ್ನ ಇದು. ಇಂಗ್ಲಿಷ್ ಚಿತ್ರದ ಕೆಲವೊಂದು ಶಾಟ್ಗಳನ್ನು ಯಥಾವತ್ ನಕಲು ಮಾಡಲಾಗಿದ್ದರೂ ಕಿ.ಮೀ. ದೂರದಲ್ಲೇ ಚಿತ್ರ ನಿಲ್ಲುತ್ತದೆ. ತಂತ್ರಜ್ಞರ ಉತ್ತಮ ಕೆಲಸ ದುರ್ಬಲ ನಿರ್ದೇಶನದಿಂದ ವ್ಯರ್ಥವಾಗಿದೆ.
ಕನ್ನಡ ಚಿತ್ರ