Quantcast
Channel: VijayKarnataka
Viewing all articles
Browse latest Browse all 6795

ಪ್ರತಿಭಟನೆ ಮೇಲೆ ಎಸ್ಮಾ ನೆರಳು; ಅಧಿಕಾರಿಗಳಿಂದ ಮನವೊಲಿಕೆ

$
0
0

ಪೊಲೀಸರ ಪ್ರತಿಭಟನೆ ಹತ್ತಿಕ್ಕಲು ಸರಕಾರ ಎಸ್ಮಾ ಕಾಯಿದೆಯನ್ನು ಪ್ರಯೋಗಿಸುವ ಎಚ್ಚರಿಕೆ ನೀಡುತ್ತಿದ್ದಂತೆ ರಾಜ್ಯಾದ್ಯಂತ ಪೊಲೀಸರು ತಾವು ನೀಡಿದ್ದ ರಜೆ ಚೀಟಿಗಳನ್ನು ವಾಪಸು ಪಡೆಯಲು ಆರಂಭಿಸಿದ್ದಾರೆ. ಕೆಲವು ಕಡೆ ಹಿರಿಯ ಅಧಿಕಾರಿಗಳು, ಪ್ರತಿಭಟನೆ ಮಾಡುವುದಿಲ್ಲ ಎಂಬ ಮುಚ್ಚಳಿಕೆಯನ್ನು ಬರೆಸಿಕೊಂಡಿದ್ದಾರೆ. ಈ ಮಧ್ಯೆ ಕಾಂಗ್ರೆಸ್‌ನ ಹಿರಿಯ ಮುಖಂಡ ಜನಾರ್ದನ ಪೂಜಾರಿ ಪೊಲೀಸರ ಬೇಡಿಕೆಯನ್ನು ಸಮರ್ಥಿಸಿದ್ದಾರೆ. ರಾಜ್ಯಾದ್ಯಂತ ಪೊಲೀಸರ ಪರವಾಗಿ ಬೆಂಬಲ ವ್ಯಕ್ತವಾಗುತ್ತಿದೆ.

-----


ಬೆಂಗಳೂರು:
ಬೇಡಿಕೆಗಳ ಈಡೇರಿಕೆಗಾಗಿ ಕೆಳ ಹಂತದ ಪೊಲೀಸ್ ಸಿಬ್ಬಂದಿ ಹಮ್ಮಿಕೊಂಡಿದ್ದ ಜೂನ್ 4ರ ಪ್ರತಿಭಟನೆ ಮೇಲೆ ಎಸ್ಮಾ ಕರಿನೆರಳು ಆವರಿಸಿದೆ.

ಈಗಾಗಲೇ ಹಲವು ಸಿಬ್ಬಂದಿ ನೀಡಿದ್ದ ರಜೆ ಚೀಟಿ ವಾಪಾಸ್ ಪಡೆಯಲಾರಂಭಿಸಿದ್ದಾರೆ. ಮತ್ತೊಂದು ಕಡೆ ಹಿರಿಯ ಅಧಿಕಾರಿಗಳು ತಮ್ಮ ಸಿಬ್ಬಂದಿಯ ಮನವೊಲಿಕೆ ಕಾರ್ಯ ಮುಂದುವರಿಸಿದ್ದು ಇಲಾಖೆಯ ಶಿಸ್ತು ಉಲ್ಲಂಘಿಸದಂತೆ ಟ್ವೀಟರ್ ಮತ್ತು ಸಾಮಾಜಿಕ ತಾಣಗಳ ಮೂಲಕವೂ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಸಾಮೂಹಿಕ ರಜೆ ಹಾಕಿ ಪ್ರತಿಭಟನೆಗೆ ಮುಂದಾಗಿದ್ದ ಪೊಲೀಸ್ ಸಿಬ್ಬಂದಿ ದೇಶದಲ್ಲೇ ಮೊದಲ ಬಾರಿಗೆ ತಮ್ಮ ಪ್ರತಿಭಟನೆ ಯಶಸ್ವಿ ಆಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದರು. ಆದರೆ ಹಿರಿಯ ಅಧಿಕಾರಿಗಳ ಜತೆ ಸಿಎಂ ಸಿದ್ದರಾಮಯ್ಯ ನಡೆಸಿದ ಸಭೆಯ ಬೆನ್ನಲ್ಲೇ ಪೊಲೀಸ್ ಕರ್ತವ್ಯವನ್ನು 'ಎಸ್ಮಾ' ಅಡಿಗೆ ತಂದಿದ್ದು ಸಿಬ್ಬಂದಿ ಮುಂದಿಟ್ಟ ಹೆಜ್ಜೆಯನ್ನು ಹಿಂದಿಡುವಂತೆ ಮಾಡಿದೆ. ಸೋಮವಾರದವರೆಗೂ ಮುಂದುವರಿಯುತ್ತಲೇ ಇದ್ದ ರಜೆ ಪರ್ವ ಮಂಗಳವಾರದ ಹೊತ್ತಿಗೆ ಯು-ಟರ್ನ್ ಆಗತೊಡಗಿತ್ತು.

ಸಂಘಕ್ಕೆ ಗೃಹ ಸಚಿವರ ಭರವಸೆ

ಸಿಬ್ಬಂದಿಯ 31 ಬೇಡಿಕೆಗಳನ್ನು ಪಟ್ಟಿ ಮಾಡಿದ್ದ ಕರ್ನಾಟಕ ಪೊಲೀಸ್ ಸಂಘ ತಮ್ಮ ಮನವಿಯನ್ನು ಮಂಗಳವಾರ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಅವರಿಗೆ ನೀಡಿತ್ತು. ಅವುಗಳಲ್ಲಿ 10 ಬೇಡಿಕೆಗಳ ಬಗ್ಗೆ ಸದ್ಯದಲ್ಲೇ ತೀರ್ಮಾನಿಸಲಾಗುವುದು ಎಂದು ಗೃಹ ಸಚಿವ ಪರಮೇಶ್ವರ್ ಪೊಲೀಸ್ ಸಂಘದ ಪದಾಧಿಕಾರಿಗಳಿಗೆ ಭರವಸೆ ನೀಡಿದ್ದಾರೆ.

ಮುಂದುವರೆದ ಮನವಿ ಪರ್ವ:

ಸಿಬ್ಬಂದಿ ರಜೆ ಹಾಕದಂತೆ ಕೆಲವು ಅಧಿಕಾರಿಗಳು ಟ್ವೀಟರ್ ಮತ್ತು ಫೇಸ್‌ಬುಕ್ ಮೂಲಕವೂ ಮನವಿ ಮಾಡಿಕೊಳ್ಳುತ್ತಿದ್ದಾರೆ. ಸಿಐಡಿ ಡಿಐಜಿ ಹೇಮಂತ್ ನಿಂಬಾಳ್ಕರ್ ಅವರು ಚುಟುಕು ಕವನಗಳ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದಾರೆ. ಬೆಂಗಳೂರು ಸಿಟಿ ಪೊಲೀಸ್‌ನ ಫೇಸ್‌ಬುಕ್ ಪೇಜ್‌ಗಳಲ್ಲಿ ಮತ್ತು ನಗರ ಕಮಿಷನರ್ ಎನ್.ಎಸ್.ಮೇಘರಿಕ್ ಅವರ ಫೇಸ್‌ಬುಕ್ ಮೂಲಕವೂ ಮನವಿ ಮಾಡಿಕೊಳ್ಳಲಾಗುತ್ತಿದೆ.

ಗೃಹ ಸಚಿವರಿಗೆ ಕೆಂಪಯ್ಯ ಮನವರಿಕೆ

ಹಿರಿಯ ಅಧಿಕಾರಿಗಳು ಕೆಳ ಹಂತದ ಸಿಬ್ಬಂದಿಯ ಮನವಿಯನ್ನು ಕಡೆಗಣಿಸಿದ ಕಾರಣಕ್ಕೆ ಸಣ್ಣ ಸಣ್ಣ ಸಮಸ್ಯೆಗಳು ದೊಡ್ಡ ಮಟ್ಟಕ್ಕೆ ಬೆಳೆದು ಸರಕಾರದವರೆಗೂ ಬರುವಂತಾಗಿದೆ ಎಂದು ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಗೃಹ ಸಚಿವರಿಗೆ ಮತ್ತು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.



ಪರ್ಯಾಯ ವ್ಯವಸ್ಥೆ 'ವಿಶೇಷ ಪೊಲೀಸ್ ಅಧಿಕಾರ'
ಒಂದು ವೇಳೆ ಪೊಲೀಸರು ಸಾಮೂಹಿಕ ರಜೆ ಹಾಕಿದರೆ ಸರಕಾರ ಒಂದು ದಿನದ ಮಟ್ಟಿಗೆ ಪರ್ಯಾಯ ವ್ಯವಸ್ಥೆ ಮಾಡಲು ನಿರ್ಧರಿಸಿದೆ. ಅವುಗಳಲ್ಲಿ ಮುಖ್ಯವಾಗಿ ಠಾಣಾ ವ್ಯಾಪ್ತಿಯ ನಿರ್ದಿಷ್ಟ ವ್ಯಾಪ್ತಿಗಳಲ್ಲಿ ಪ್ರಮುಖ ವ್ಯಕ್ತಿಗಳನ್ನು ಗುರುತಿಸಿ ಒಂದು ದಿನದ ಮಟ್ಟಿಗೆ ಅವರಿಗೆ 'ವಿಶೇಷ ಪೊಲೀಸ್ ಅಧಿಕಾರ' ನೀಡಲು ನಿರ್ಧರಿಸಿದೆ. ಇದು ಮಾತ್ರವಲ್ಲದೆ ಹೋಂಗಾರ್ಡ್, ಸಿಆರ್‌ಪಿಎಫ್ ಸೇವೆ ಬಳಸಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
-----

ದ.ಕ. ಜಿಲ್ಲೆಯ ಬಹುತೇಕ ಎಲ್ಲ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ಮಾತುಕತೆ ನಡೆಸಿ ಮನವೊಲಿಸಲಾಗಿದ್ದು, ಪೊಲೀಸರಿಂದಲೂ ಪೂರಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಿಲ್ಲೆಯಲ್ಲಿ ಈ ಸಾಮೂಹಿಕ ರಜೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಕಡಿಮೆ.

-ಭೂಷಣ್ ಗುಲಾಬ್‌ರಾವ್ ಬೊರಸೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಸಿಬ್ಬಂದಿಯ ಸಮಸ್ಯೆ ಬಗೆಹರಿಸಲು ಇಲಾಖೆಯಲ್ಲಿ ಹಲವು ಮಾರ್ಗಗಳಿವೆ. ಆ ಮಾರ್ಗಗಳನ್ನು ಬಿಟ್ಟು ಸಿಬ್ಬಂದಿ ಅನ್ಯ ಮಾರ್ಗ ಅನುಸರಿಸಬಾರದು. ಸಮಾಜ ಘಾತುಕ ಶಕ್ತಿಗಳು ಮತ್ತು ಹೊರಗಿನವರ ಪ್ರಚೋದನೆಗೆ ಸಿಬ್ಬಂದಿ ಒಳಗಾಗಬಾರದು. ಇಲಾಖೆಯ ಘನತೆಗೆ ಕೆಟ್ಟ ಹೆಸರು ತರುವ ಪ್ರಯತ್ನವನ್ನು ಸಹಿಸುವುದಿಲ್ಲ. ಸಾಮಾಜಿಕ ತಾಣಗಳ ಮೇಲೆ ನಿಗಾ ಇಡಲಾಗಿದೆ.

-ಓಂ ಪ್ರಕಾಶ್, ರಾಜ್ಯ ಪೊಲೀಸ್ ಮಹಾನಿರ್ದೇಶಕರು.

ಪೊಲೀಸ್ ಬೇಡಿಕೆ ಈಡೇರಿಸಲಿ: ಬಿಎಸ್‌ವೈ

''ಪೊಲೀಸರು ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಹೋರಾಟ ಮಾಡುವಂಥ ಪರಿಸ್ಥಿತಿ ಹಿಂದೆ ಎಂದೂ ನಿರ್ಮಾಣವಾಗಿರಲಿಲ್ಲ. ಈ ಹಂತಕ್ಕೆ ಹೋಗುವವರೆಗೂ ಸರಕಾರ ಬಿಡಬಾರದಿತ್ತು. ಸಿಎಂ ಹಾಗೂ ಗೃಹ ಸಚಿವರು ಬೆದರಿಕೆ ಹಾಕುವುದನ್ನು ಬಿಟ್ಟು ಬೇಡಿಕೆ ಈಡೇರಿಸಲಿ''

-ಯಡಿಯೂರಪ್ಪ,ಬಿಜೆಪಿ ರಾಜ್ಯಾಧ್ಯಕ್ಷ (ಮೈಸೂರಿನಲ್ಲಿ)
**

ಸಿಐಡಿ ಡಿಐಜಿ ಹೇಮಂತ್ ನಿಂಬಾಳ್ಕರ್ ಅವರ ಚುಟುಕುಗಳು

ದೇಗುಲಕ್ಕೊಂದು ದೇವರು
ಸಮವಸ್ತ್ರಕ್ಕೆ ಶಿಸ್ತೇ ಉಸಿರು
ಶಿಸ್ತಿಗೆ ಮತ್ತೊಂದು ಹೆಸರೇ ಪೊಲೀಸರು
ಅದರ ಒಗ್ಗಟ್ಟು ಒಡೆದು ಕೆಡಿಸದಿರು ಹೆಸರು
ಶಿಸ್ತೇ ನಮ್ಮ ಉಸಿರು
----------------

ಪೊಲೀಸ ಬಂಧುಗಳೇ
ಪೊಲೀಸರ ಮುಷ್ಕರ
ಗಂಭೀರವಾಗಿ ಪರಿಗಣಿಸಿದೆ ಸರಕಾರ
ಮೊದಲು ಶಿಸ್ತು ಪಾಲನೆ
ನಂತರವಷ್ಟೆ ನಿವೇದನೆ
-------------------
ಪೊಲೀಸರೇ
ಶಿಸ್ತಿಗೆ ತೋರದಿರಿ ಅಸಹಾಕಾರ
ಕಳೆದುಕೊಳ್ಳುತ್ತೀರಿ ಸಾರ್ವಜನಿಕ ಮಮಕಾರ
**



'ಪೊಲೀಸರ ಬೇಡಿಕೆ ಇತ್ಯರ್ಥಕ್ಕೆ ಸರಕಾರ ಬದ್ಧ'
ಹಾವೇರಿ: ಪೊಲೀಸ್ ಇಲಾಖೆ ಸಿಬ್ಬಂದಿಗೆ ತಮ್ಮ ಬೇಡಿಕೆಗಳ ಈಡೇರಿಕೆಗೆ ಮುಷ್ಕರ ಹಾಗೂ ಪ್ರತಿಭಟನೆ ಹಾದಿ ತುಳಿಯಲು ಕಾನೂನಿನಲ್ಲಿ ಅವಕಾಶ ಇಲ್ಲ. ಬೇಡಿಕೆ ಈಡೇರಿಸಲು ಸರಕಾರ ಬದ್ಧ ಎಂದು ರಾಜ್ಯ ಕಾನೂನು ಹಾಗೂ ಉನ್ನತ ಶಿಕ್ಷಣ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.

ಜಿಲ್ಲೆಯ ಶಿಗ್ಗಾವಿ ತಾಲೂಕು ಗೊಟಗೋಡಿ ಜಾನಪದ ವಿಶ್ವ ವಿದ್ಯಾಲಯದ 2ನೇ ಘಟಿಕೋತ್ಸವದಲ್ಲಿ ನಂತರ ಸುದ್ದಿಗಾರರ ಜತೆ ಬುಧವಾರ ಮಾತನಾಡಿ,''ಸಂವಿಧಾನದಲ್ಲಿ ಬೇಡಿಕೆ ಈಡೇರಿಸುವಂತೆ ಇಲಾಖೆ ಮೇಲಧಿಕಾರಿಗಳ ಗಮನ ಸೆಳೆಯಬೇಕೇ ಹೊರತು ಮುಷ್ಕರ ನಡೆಸುವಂತಿಲ್ಲ,''ಎಂದರು.
**

ರಜೆ ಪತ್ರ ಹಿಂಪಡೆದ 35 ಪೊಲೀಸರು

ದಾವಣಗೆರೆ: ಜಿಲ್ಲೆಯಲ್ಲಿ ಮಂಗಳವಾರದವರೆಗೆ 120 ಸಿಬ್ಬಂದಿ ರಜೆ ಕೋರಿ ಹಿರಿಯ ಅಧಿಕಾರಿಗಳಿಗೆ ಪತ್ರ ನೀಡಿದ್ದು, ಬುಧವಾರ ಸಂಜೆ ಹೊತ್ತಿಗೆ 35 ಮಂದಿ ರಜೆ ಪತ್ರ ಹಿಂಪಡೆದಿದ್ದು, 'ನಾವು ಶಿಸ್ತಿನ ಇಲಾಖೆಯಲ್ಲಿದ್ದು, ಜೂ.4ರಂದು ಕರ್ತವ್ಯ ನಿರ್ವಹಿಸುತ್ತೇವೆ. ನಮ್ಮ ಕುಂದುಕೊರತೆ ಬಗ್ಗೆ ಎಸ್‌ಪಿ, ಡಿಜಿಪಿ ಗಮನಕ್ಕೆ ತಂದು ಪರಿಹರಿಸಲು ಕೋರುತ್ತೇವೆ' ಎಂದು ಮುಚ್ಚಳಿಕೆ ಬರೆದು ಕೊಟ್ಟಿದ್ದಾರೆ.

-----

ಜಿಲ್ಲೆಯಾದ್ಯಂತ 35 ಸಿಬ್ಬಂದಿ ತಮ್ಮ ರಜೆ ಪತ್ರ ಹಿಂಪಡೆದಿದ್ದಾರೆ. ಇನ್ನೂ ಕಾಲಾವಕಾಶವಿದ್ದು, ಉಳಿದ 85 ಸಿಬ್ಬಂದಿ ಕೂಡ ಹಿಂಪಡೆಯುವ ನಂಬಿಕೆ ಇದೆ.

-ಡಾ.ಭೀಮಾಶಂಕರ್ ಗುಳೇದ್, ಎಸ್‌ಪಿ
**

ಪೊಲೀಸ್ ಮುಷ್ಕರ ರಾಜಕೀಯಕ್ಕೆ ಬಳಕೆ: ವಿ.ಎಸ್.ಉಗ್ರಪ್ಪ ಟೀಕೆ
ಕೊಪ್ಪಳ: ಪೊಲೀಸರ ಪ್ರತಿಭಟನೆಯ ವಿಚಾರವನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಮುಖಂಡ, ಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಆರೋಪಿಸಿದ್ದಾರೆ.

ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ,''ಪೊಲೀಸ್ ಇಲಾಖೆ ಅಷ್ಟೇ ಅಲ್ಲದೆ ಬೇರೆ ಇಲಾಖೆಗಳಲ್ಲೂ ಸಮಸ್ಯೆಗಳಿವೆ. ಪೊಲೀಸ್ ಸಿಬ್ಬಂದಿ ಮುಷ್ಕರ ನಡೆಸಬಾರದು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ. ಸರಕಾರ ಸಮಸ್ಯೆಗಳನ್ನು ಪರಿಹರಿಸಲಿದೆ. ಹೀಗಾಗಿ ಪ್ರತಿಭಟನೆ ವಾಪಸು ಪಡೆಯಬೇಕು,'' ಎಂದು ಮನವಿ ಮಾಡಿದರು.
**

ಪೊಲೀಸರ ಮುಷ್ಕರಕ್ಕೆ ಪಕ್ಷಾತೀತ ಬೆಂಬಲ !

ಮೈಸೂರು: ಜೂನ್ 4 ರ ಪೊಲೀಸರ ಪ್ರತಿಭಟನೆಗೆ ದಕ್ಷಿಣ ಪದವೀಧರರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿರುವ ಪಕ್ಷೇತರ ಸೇರಿದಂತೆ ಎಲ್ಲಾ ಪಕ್ಷದ ಅಭ್ಯರ್ಥಿಗಳು ಬೆಂಬಲ ಸೂಚಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಬುಧವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಜೆಪಿಯ ಮೈ.ವಿ.ರವಿಶಂಕರ್, ಜೆಡಿಎಸ್‌ನ ಕೆ.ಟಿ.ಶ್ರೀಕಂಠೇಗೌಡ, ಪಕ್ಷೇತರ ಅಭ್ಯರ್ಥಿ ಕೆ.ಎಸ್.ಭಗವಾನ್ ಅವರು ಪೊಲೀಸ್ ಸಿಬ್ಬಂದಿ ಸಾಮೂಹಿಕ ರಜೆ ಹಾಕಿ ಪ್ರತಿಭಟಿಸುವುದಕ್ಕೆ ಬೆಂಬಲ ಸೂಚಿಸಿದರೆ, ಕಾಂಗ್ರೆಸ್ ಅಭ್ಯರ್ಥಿ ಡಾ.ರವೀಂದ್ರ ''ನನ್ನ ಬೆಂಬಲವಿದೆ, ಆದರೆ ಇದು ಪ್ರತಿಭಟನೆಗೆ ಸಕಾಲವಲ್ಲ,'' ಎಂದರು.
**

ಪೊಲೀಸರ ಬೇಡಿಕೆ ಈಡೇರಿಸಿ : ಪೂಜಾರಿ
ಹಸಿದ ಹೊಟ್ಟೆಗೆ ಉಪದೇಶ ಹಿಡಿಸುವುದಿಲ್ಲ /ಸಬೂಬು ಕೊಡುವುದನ್ನು ನಿಲ್ಲಿಸಿ

-ಸರಕಾರಕ್ಕೆ ಕಾಂಗ್ರೆಸ್ ಮುಖಂಡ ಪೂಜಾರಿ ತಾಕೀತು-
ಮಂಗಳೂರು: ಸಿಎಂರವರೇ.. ಪೊಲೀಸರು ಮನುಷ್ಯರೇ, ಅವರಿಗೂ ಸಂಸಾರವಿದ್ದು, ಹಸಿದ ಹೊಟ್ಟೆಗೆ ಉಪದೇಶ ಹಿಡಿಸುವುದಿಲ್ಲ. ಸಬೂಬು ಕೊಡುವುದನ್ನು ನಿಲ್ಲಿಸಿ, ಅವರ ಬೇಡಿಕೆಗೆ ಸ್ಪಂದಿಸಿ ಎಂದು ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಸರಕಾರಕ್ಕೆ ತಾಕೀತು ಮಾಡಿದರು.

ಬುಧವಾರ ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,''ಬೇಡಿಕೆ ವಿಚಾರದಲ್ಲಿ ಕಡೂರಿನ ಪೊಲೀಸರು ಕುಟುಂಬ ಆತ್ಮಹತ್ಯೆಯ ಎಚ್ಚರಿಕೆ ನೀಡಿದೆ. ಅದೇನಾದರೂ ರಾಜ್ಯದ ಚರಿತ್ರೆಯಲ್ಲಿ ನಿಮ್ಮ ಹೆಸರು ಕಪ್ಪು ಚುಕ್ಕೆಯಾಗಲಿದೆ. ನೆರೆಯ ರಾಜ್ಯಗಳ ಮಾದರಿ ಅನುಸರಿಸಲು ಏಕೆ ಸಾಧ್ಯವಿಲ್ಲ,'' ಎಂದು ಪ್ರಶ್ನಿಸಿದರು.

ಸಾಮಾನ್ಯ ಪೊಲೀಸರ ಜತೆ ಮಾತಾಡಿ: ಸಿಎಂರವರೇ ರಾಜ್ಯ ಹಾಗೂ ನಿಮ್ಮ ಹಿತದೃಷ್ಟಿಯಿಂದ ನಿಷ್ಠುರವಾಗಿ ಮಾತನಾಡುತ್ತಿದ್ದೇನೆ. ಉನ್ನತ ಅಧಿಕಾರಿಗಳ ಜತೆ ಮಾತನಾಡಿ ಪ್ರಯೋಜನವಿಲ್ಲ. ಪೇದೆಗಳ ನೋವು ಆಲಿಸಿ. ಅವರ ಅರೆಸ್ಟ್ ಮಾತು ಬಿಡಿ, ಸಂವಿಧಾನದಲ್ಲಿ ಎಲ್ಲರಿಗೂ ಕಾನೂನು ಒಂದೇ, ಪೊಲೀಸರಿಗೂ ಪ್ರತಿಭಟನೆಗೆ ಹಕ್ಕಿದೆ. ಅವರನ್ನು ಮಾತ್ರ ಜೀತದಾಳುಗಳಂತೆ ದುಡಿಸುತ್ತಿದ್ದಾರೆ,'' ಎಂದರು.
**

ಹುಷಾರ್ 18 ಮಂದಿಯ ಕೆಲಸ ಹೋಗಿತ್ತು
ಮೈಸೂರು: ''35 ವರ್ಷಗಳ ಹಿಂದೆ ಪೊಲೀಸರು ಇದೇ ರೀತಿ ಪ್ರತಿಭಟನೆ ನಡೆಸಿದ್ದರಿಂದ 18 ಪೊಲೀಸರು ಕೆಲಸ ಕಳೆದುಕೊಂಡು ಬೀದಿ ಪಾಲಾದರು. ಇದೇ ಪರಿಸ್ಥಿತಿ ಮರುಕಳಿಸಬಾರದು. ಆದ್ದರಿಂದ ಸೌಹಾರ್ದಯುತವಾಗಿ ಹಿರಿಯ ಪೊಲೀಸ್ ಅಧಿಕಾರಿಗಳ ಮೂಲಕ ಸರಕಾರದೊಂದಿಗೆ ಮಾತುಕತೆ ನಡೆಸಿ, ಸಮಸ್ಯೆ ಬಗೆಹರಿಸಿಕೊಳ್ಳಿ'' ಎಂದು ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘ ಅಧ್ಯಕ್ಷ ಎಂ.ಸಿ.ಮರಿಸ್ವಾಮಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

''ಈಗ ಇರುವ ಕರ್ನಾಟಕ ರಾಜ್ಯ ಪೊಲೀಸ್ ಮಹಾ ಸಂಘ ಅಸ್ತಿತ್ವದಲ್ಲೇ ಇಲ್ಲ. ಅಸ್ತಿತ್ವದಲ್ಲಿ ಇರದ ಸಂಘಟನೆಗಳು ವೈಯಕ್ತಿಕ ಲಾಭಕ್ಕಾಗಿ ಸೇವೆಯಲ್ಲಿರುವವರನ್ನು ಬಲಿಪಶು ಮಾಡುತ್ತವೆೆ'' ಎಂದು ಎಚ್ಚರಿಸಿದರು.

ಸಾಮೂಹಿಕ ರಜೆಗೆ ಅರ್ಜಿ ಸಲ್ಲಿಸಿಲ್ಲ: ಪೊಲೀಸ್ ಆಯುಕ್ತ

ಪತ್ರಿಕೆಗಳಲ್ಲಿ ಪ್ರಕಟವಾಗಿರುವಂತೆ ಮೈಸೂರಿನಲ್ಲಿ ಯಾವುದೇ ಪೊಲೀಸ್ ಅಧಿಕಾರಿ/ಸಿಬ್ಬಂದಿ ಸಾಮೂಹಿಕ ರಜೆಗೆ ಅರ್ಜಿ ಸಲ್ಲಿಸಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಸ್ಪಷ್ಟಪಡಿಸಿದ್ದಾರೆ.

''ಪೊಲೀಸರಿಗೆ ಮುಷ್ಕರ/ಧರಣಿ ನಡೆಸುವ ಅಧಿಕಾರ ಕಾನೂನಿನಲ್ಲಿ ಇಲ್ಲದಿರುವ ಬಗ್ಗೆ ಮೈಸೂರು ನಗರದ ಎಲ್ಲಾ ಪೊಲೀಸರಿಗೂ ಮನವರಿಕೆ ಮಾಡಿಕೊಡಲಾಗಿದೆ,'' ಎಂದು ಆಯುಕ್ತರು ತಿಳಿಸಿದ್ದಾರೆ.

**

'1963ರ ನಂತರ ಕಾಯಿದೆ ತಿದ್ದುಪಡಿ ಮಾಡದ ಕಾರಣ ಅನ್ಯಾಯ'
ಬೆಂಗಳೂರು: ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಜೂ.4 ರಂದು ಪೊಲೀಸ್ ಸಿಬ್ಬಂದಿ ಹಮ್ಮಿಕೊಂಡಿರುವ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸುವುದಾಗಿ ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಮಾನವ ಹಕ್ಕುಗಳ ರಕ್ಷಣಾ ಸಮಿತಿ ತಿಳಿಸಿದೆ.

ಪೊಲೀಸ್ ಕಾಯಿದೆಯಲ್ಲಿ 1963ರ ನಂತರ ಯಾವುದೇ ತಿದ್ದುಪಡಿಯಾಗಿಲ್ಲ. ಹೀಗಾಗಿ ನೌಕರರಿಗೆ ಸೇವೆಯಲ್ಲಿ ತೀವ್ರ ಅನಾನುಕೂಲಗಳಿವೆ. ವೇತನ ತಾರತಮ್ಯ, ರಜೆ ಸಮಸ್ಯೆ, ಅಭದ್ರತೆ ಸೇರಿದಂತೆ ಅಗಾಧ ಸಮಸ್ಯೆಗಳು ಕಾಡುತ್ತಿವೆ. ಸಮಾಜವನ್ನು ರಕ್ಷಿಸುವ ಪೊಲೀಸರಿಗೆ ರಕ್ಷಣೆ ಇಲ್ಲದಂತಾಗಿದೆ. ಸಮಾಜದ ಭದ್ರತೆಯ ಜವಾಬ್ದಾರಿ ಹೊತ್ತಿರುವ ಪೊಲೀಸರ ಬೇಡಿಕೆಗಳನ್ನು ಈಡೇರಿಸುವುದು ಸರಕಾರದ ಆದ್ಯ ಕರ್ತವ್ಯ ಎಂದು ವೇದಿಕೆ ಅಧ್ಯಕ್ಷ ಕೆ. ದಶರಥ್ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಒತ್ತಾಯಿಸಿದರು.

ಇತ್ತೀಚಿಗೆ ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿಯ ಹಂಪಿ ಪೊಲೀಸ್ ಠಾಣೆಯಲ್ಲಿನ ಕಾನ್‌ಸ್ಟೇಬಲ್ ನಾಮದೇವ ನಾಯಕ ಎಂಬುವವರು ಎಂಟು ಪುಟಗಳ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆಯನ್ನು ಗಮನಿಸಿದರೆ ಸಾಮಾನ್ಯ ಪೇದೆಗಳಿಗೆ ನೀಡುವ ಕಿರುಕುಳ ಅರ್ಥವಾಗುತ್ತದೆ. ಹೀಗಾಗಿ ಪೊಲೀಸ್ ಸಿಬ್ಬಂದಿಗೆ ಆಗುತ್ತಿರುವ ಕಿರುಕುಳವನ್ನು ತಡೆಗಟ್ಟಬೇಕು ಹಾಗೂ ಅವರ ನ್ಯಾಯಯುತವಾದ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು. ಈ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಪೊಲೀಸ್ ಮಹಾ ಸಂಘ ಜೂ.4ರಂದು ಸಾಮೂಹಿಕ ರಜೆಯೊಂದಿಗೆ ನಡೆಸಲಿರುವ ಪ್ರತಿಭಟನೆಗೆ ನಾವೂ ಬೆಂಬಲ ವ್ಯಕ್ತಪಡಿಸುತ್ತೇವೆ ಎಂದು ತಿಳಿಸಿದರು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಶಿವಸೇನೆ ಬಿಗಿಪಟ್ಟು: ದೇಶ ಗೆದ್ದ ಬಿಜೆಪಿ ವಿಲವಿಲ


ಶುಭ ಫಲಕ್ಕಾಗಿ ಮನೆಯಲ್ಲಿ ಗಾಳಿ ಗಂಟೆ ಹಾಕುವ ಮುನ್ನ ಈ ವಿಚಾರ ತಿಳಿಯಿರಿ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>