ಬಾಗಲಕೋಟ: ದೂರು ಕೊಟ್ಟರೂ ಪೊಲೀಸರು ಆರೋಪಿಗಳನ್ನು ಬಂಧಿಸುತ್ತಿಲ್ಲ ಎಂದು ಹುನಗುಂದ ತಾಲೂಕಿನ ಚಿಕ್ಕ ಓತಗೇರಿ ಗ್ರಾಮದ ಸಿಆರ್ಪಿಎಫ್ ಯೋಧ ಉದಯಕುಮಾರ ಮಡಿವಾಳರ ಆರೋಪಿಸಿದ್ದಾರೆ. ನಗರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಕಸ ಚೆಲ್ಲಿರುವುದನ್ನೇ ನೆಪವಾಗಿಸಿಕೊಂಡು ಮಾಜಿ ಶಾಸಕರ ಆಪ್ತ ಕಾರ್ಯದರ್ಶಿ ಸಂಗನಗೌಡ ಮರಿಗೌಡರ ಹಾಗೂ ಕುಟುಂಬದವರು ತಮ್ಮ ತಂದೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ದೂರಿದರು. ಹಲ್ಲೆಗೊಳಗಾದ ತಮ್ಮ ತಂದೆ ಮಲ್ಲಪ್ಪ ಮಡಿವಾಳರ ಸದ್ಯ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ. ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರ ಕೊಟ್ಟರೂ ಆರೋಪಿಗಳನ್ನು ಬಂಧಿಸುತ್ತಿಲ್ಲ. ವಿಷಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ ಎಂದರು. ಆರೋಪಿಗಳು ಪ್ರಭಾವಿ ವ್ಯಕ್ತಿಯಾಗಿರುವುದರಿಂದ ಪೊಲೀಸರು ಅವರನ್ನು ರಕ್ಷಣೆ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಇನ್ನಾದರೂ ಪೊಲೀಸರು ಆರೋಪಿಗಳನ್ನು ಬಂಧಿಸಿ ತಮ್ಮ ತಂದೆಯವರಿಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಕಲ್ಪಿಸಿಕೊಡಿ ಎಂದು ಮನವಿ ಮಾಡಿದರು. ಈ ಹಿಂದೆಯೂ ಸರಕಾರಿ ಜಾಗೆ ವಿಷಯದಲ್ಲಿ ಜಗಳವಾದಾಗ ರಾಜಿ ಮಾಡಿಕೊಂಡು, ರಾಜಿ ಪತ್ರಕ್ಕೆ ಸಹಿ ಹಾಕಿದ್ದರೂ ಅನಗತ್ಯವಾಗಿ ಜಗಳ ತೆಗೆದು ತಮ್ಮ ತಂದೆಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅವರು ಆಪಾದಿಸಿದರು. ಮಲ್ಲು ಮಡಿವಾಳರ, ನರಸಪ್ಪ ಮಡಿವಾಳರ, ಚಂದ್ರು ಮಡಿವಾಳರ, ಬಸವರಾಜ ಮಡಿವಾಳರ ಇತರರು ಇದ್ದರು.
↧
ನ್ಯಾಯಕ್ಕಾಗಿ ಯೋಧನ ಮೊರೆ
↧