* ಎಚ್.ಮಹೇಶ್
ಸಲ್ಮಾನ್ ಖಾನ್ ಚಿತ್ರಗಳ ಆಯ್ಕೆಯಲ್ಲಿ ಎಚ್ಚರಿಕೆ ವಹಿಸಿದ್ದಾರೆ ಎಂಬುವುದಕ್ಕೆ ಅವರ ಭಜರಂಗಿ ಬಾಯ್ ಜಾನ್ ಹಾಗೂ ಪ್ರೇಮ್ ರತನ್ ಧನ್ ಪಾಯೋ ಚಿತ್ರಗಳೇ ಸಾಕ್ಷಿ. ಚಿತ್ರದಲ್ಲಿ ಕೌಟುಂಬಿಕ ಮೌಲ್ಯಗಳು ಎಷ್ಟು ಮುಖ್ಯ ಎಂಬುದನ್ನು ಪ್ರೇಮ್, ವಿಜಯ್ ಪಾತ್ರಗಳಲ್ಲಿ ತೋರಿಸಿದ್ದಾರೆ ಸಲ್ಮಾನ್ ಖಾನ್. ಪ್ರೇಮ್ ದಿಲ್ವಾಲಾ ( ಸಲ್ಮಾನ್ ಖಾನ್ ) ಅಯೋಧ್ಯೆಯಲ್ಲಿ ರಾಮ್ಲೀಲಾ ಶೋಗಳನ್ನು ನಡೆಸಿ ಹಣ ಮಾಡುತ್ತಿರುತ್ತಾನೆ. ಪ್ರಿನ್ಸ್ ಮೈಥಿಲಿ ( ಸೋನಂ ಕಪೂರ್) ಎನ್ಜಿಓ ಕಟ್ಟಿ ಪ್ರವಾಹ ಪೀಡಿತ ಜನರಿಗೆ ಸಹಾಯ ಮಾಡುತ್ತಿರುತ್ತಾಳೆ. ಆ ಸಂಸ್ಥೆಗೆ ಪ್ರೇಮ್ ತಾನು ದುಡಿದ ಎಲ್ಲಾ ಹಣವನ್ನು ಕೊಡುತ್ತಾನೆ. ಆದರೆ ಪ್ರೇಮ್ಗೆ ಮೈಥಿಲಿಯನ್ನು ಭೇಟಿಯಾಗುವ ಆಸೆ. ಸಾಮಾನ್ಯ ಮನುಷ್ಯ ರಾಣಿಯನ್ನು ಮೀಟ್ ಮಾಡುವುದಕ್ಕೆ ಸಾಧ್ಯವೇ? ಅದನ್ನು ನಿರ್ದೇಶಕ ಸೂರಜ್ ಸಾಧ್ಯವಾಗಿಸಿದ್ದಾರೆ.
ಆದರೆ ಚಿತ್ರಕ್ಕೆ ಇಲ್ಲೊಂದು ಟ್ವಿಸ್ಟ್ ಇದೆ. ಅದು ಏನು ಎಂದರೆ, ಅರಮನೆಯಲ್ಲಿ ಥೇಟು ಸಲ್ಮಾನ್ ಖಾನ್ ಥರದ ವಿಜಯ್ ಇರುತ್ತಾನೆ. ಅಲ್ಲಿ ನಡೆಯುವ ಪಿತೂರಿಯಿಂದ ವಿಜಯ್ ಮೇಲೆ ಅಟ್ಯಾಕ್ ಆಗುತ್ತದೆ. ಆಗ ವಿಜಯ್ ಜಾಗಕ್ಕೆ ಪ್ರೇಮ್ ಬರುತ್ತಾನೆ. ಅಲ್ಲಿಂದ ಮೈಥಿಲಿ ಹಾಗೂ ಪ್ರೇಮ್ ನಡುವೆ ಪ್ರೇಮ್ ಕಹಾನಿ ಶುರುವಾಗುತ್ತದೆ.
ಕಥೆ ನಿರಾಯಸವಾಗಿ ಸಾಗುತ್ತದೆ. ನಿರ್ದೇಶಕರು ತುಂಬಾ ಗ್ರ್ಯಾಂಡ್ ಆಗಿ ಅರಮನೆ ತೋರಿಸುತ್ತಾರೆ. ರಾಜಕುಮಾರಿ ಹೇಗಿರಬೇಕು ಆಕೆಯ ಆಳುಕಾಳುಗಳು ಹೇಗಿರಬೇಕು, ಅರಮನೆ ಹೇಗಿರಬೇಕು ಎಂಬ ಬಗ್ಗೆ ತಿಳಿದುಕೊಂಡು ಚೆನ್ನಾಗಿ ಕೆಲಸ ಮಾಡಿದ್ದಾರೆ.
ಸಲ್ಮಾನ್, ಭಜರಂಗಿ ಬಾಯ್ ಜಾನ್ ನಂತರ ಮತ್ತೊಂದು ಮಾನವೀಯ ಮೌಲ್ಯಗಳನ್ನು ಹೇಳುವ ಚಿತ್ರದಲ್ಲಿ ನಟಿಸುವ ಮೂಲಕ ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಿದ್ದಾರೆ. ಇಲ್ಲಿ ಅವರು ಸೂಪರ್ಮ್ಯಾನ್ ಥರ ಫೈಟ್ ಮಾಡುವುದಿಲ್ಲ. ಸೂಪರ್ ಸ್ಟಾರ್ ಥರ ಚಪ್ಪಾಳೆ ಗಿಟ್ಟಿಸಿಕೊಳ್ಳುವುದಿಲ್ಲ. ಸಿಂಪಲ್ ಆಗಿ ಕಾಣಿಸಿಕೊಂಡು ಅವರ ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ಟ್ ಕೊಟ್ಟಿದ್ದಾರೆ. ಸೋನಂ ಕಪೂರ್ ರಾಜಕುಮಾರಿ ಪಾತ್ರಕ್ಕೆ ನಿಜಕ್ಕೂ ತುಂಬಾ ಹೊಂದಿಕೊಂಡಿದ್ದಾರೆ. ಸಲ್ಮಾನ್ , ಸೋನಂ ಲವ್ ಸೀನ್ಗಳು ಕ್ಲಾಸ್ ಆಗಿ ಮೂಡಿ ಬಂದಿದೆ. ಚಿತ್ರದ ಹಾಡುಗಳು ಮಾಧುರ್ಯದಿಂದ ಕೂಡಿವೆ. ಕ್ಯಾಮೆರಾ ಕೆಲಸದ ಬಗ್ಗೆ ಕಾಮೆಂಟ್ ಮಾಡುವಂತಿಲ್ಲ. ನೀಲ್ ನಿತಿನ್ ಮುಕೇಶ್ ತಮ್ಮ ಪಾತ್ರಕ್ಕೆ ನ್ಯಾಯ ಕೊಟ್ಟಿದ್ದಾರೆ. ಅರಮನೆಗೆ ಲಾಯಲ್ ಆಗಿ ಕೆಲಸ ಮಾಡುವ ಪಾತ್ರದಲ್ಲಿ ಅನುಪಮ್ ಖೇರ್ ನಟಿಸಿದ್ದಾರೆ. ಅವರ ಪಾತ್ರ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಎನ್ನಬಹುದು. ಫ್ಯಾಮಿಲಿ ಸಮೇತ ಹೋಗಿ ದೀಪಾವಳಿಗೆ ಒಂದೊಳ್ಳೆ ಸಿನಿಮಾ ನೋಡಬೇಕು ಎಂದು ಕನವರಿಸುವ ಪ್ರೇಕ್ಷಕನಿಗೆ ಈ ಚಿತ್ರ ಉತ್ತಮ ಆಯ್ಕೆ ಎನ್ನಬಹುದು.
ಹಿಂದಿ ಚಿತ್ರ