* ಪದ್ಮಾ ಶಿವಮೊಗ್ಗ ತೆಲುಗಿನ ಲೌಕ್ಯಂ ಚಿತ್ರದ ರಿಮೇಕ್ ಆದ ರಾಮ್ಲೀಲಾ ಹೊಸದೇನನ್ನೂ ಹೇಳದೆ, ಚಿತ್ರದುದ್ದಕ್ಕೂ ಪ್ರೇಕ್ಷಕನನ್ನು ಗೊಂದಲದಲ್ಲಿ ಕೆಡುವುತ್ತಲೇ ಒಂದಿಷ್ಟು ನಗಿಸುತ್ತದೆ. ಹಳೇ ಕತೆ ಹೊಸ ಸಿನಿಮಾ ಎನ್ನುವಂತೆ ಚಿರಂಜೀವಿ ಸರ್ಜಾ ಮತ್ತು ಅಮೂಲ್ಯ ಅಭಿನಯದ ಚಿತ್ರದಲ್ಲಿ ನಿರ್ದೇಶಕ ವಿಜಯ್ ಕಿರಣ್ ಡೈಲಾಗ್ಗಳ ಸುರಿಮಳೆಯಲ್ಲೇ ಪ್ರೇಕ್ಷಕನನ್ನು ಮುಳುಗಿಸಿಬಿಡುತ್ತಾರೆ. ಯಾಕೆ, ಏನು ಎಂದು ಯೋಚಿಸದೆ ನಟರೆಲ್ಲರ ಪರದಾಟ, ತೆಪರಾಟಗಳನ್ನು ನೋಡಿ ನಗುವುದಾದರೆ ರಾಮ್ಲೀಲಾ ನೋಡಬಹುದು. ಎಲ್ಲಾ ಸಿನಿಮಾಗಳಲ್ಲಿ ನೋಡಿರುವ ದೃಶ್ಯಗಳನ್ನೇ ಮತ್ತೆ ಮತ್ತೆ ಬಳಸಿಕೊಳ್ಳಲಾಗಿದೆ. ನಾಯಕ ನಾಯಕಿಯನ್ನು ಎತ್ತಿಕೊಂಡು ಬೆಟ್ಟ ಹತ್ತುವುದು. ಅಷ್ಟಕ್ಕೇ ಲೇಡಿ ಡಾನ್ನಂತೆ ವರ್ತಿಸುತ್ತಿದ್ದ ನಾಯಕಿ ಸೋತು ಪ್ರೀತಿಸುವುದು. ಕೊನೆಯಲ್ಲಿ ಎಲ್ಲರೂ ಗ್ರೂಪ್ ಫೋಟೋಗೆ ಪೋಸ್ ಕೊಡುವುದು ಈ ಚಿತ್ರದಲ್ಲೂ ನೋಡಬಹುದು.
ನಾಯಕ ರಾಮ್ (ಚಿರಂಜೀವಿ ಸರ್ಜಾ) ರೌಡಿ ಅಣ್ಣಯ್ಯ (ಶೋಭ್ರಾಜ್)ನ ಪ್ರೀತಿಯ ತಂಗಿಯನ್ನು ಮದುವೆ ಮಂಟಪದಿಂದ ಹಾರಿಸಿಕೊಂಡು ಹೋಗಿ ಅವಳು ಪ್ರೀತಿಸಿದವನ ಜತೆ ಮದುವೆ ಮಾಡುತ್ತಾನೆ. ಅಣ್ಣಯ್ಯ ಇವನ ಹಿಂದೆ ಬೀಳುತ್ತಾನೆ. ರಾಮ್ ನಾಯಕಿ ಚಂದು (ಅಮೂಲ್ಯ)ಳನ್ನು ಕಂಡ ತಕ್ಷಣ ಪ್ರೀತಿಸುತ್ತಾನೆ. ಇನ್ನೊಂದೆಡೆ ಇನ್ನೊಬ್ಬ ರೌಡಿ (ಆಶಿಶ್ ವಿದ್ಯಾರ್ಥಿ) ಗ್ಯಾಂಗ್ ಅಣ್ಣಯ್ಯನ ತಂಗಿ ಕೊಲೆಗೆ ಹವಣಿಸುತ್ತಿರುತ್ತದೆ. ಇಬ್ಬರೂ ರೌಡಿಗಳು ತಮ್ಮ ತಂಗಿಯರ ಮೇಲಿನ ಅತಿಯಾದ ಅಕ್ಕರೆಯಿಂದಾಗಿಯೇ ವೈರಿಗಳಾಗಿರುತ್ತಾರೆ. ಇವರ ನಡುವೆ ಮಿಕ್ಕಿ ಮೌಸ್ ಅಂಡ್ ಕ್ಯಾಟ್ ಚೇಸಿಂಗ್ ಚಿತ್ರದ ಪ್ರಾರಂಭದಿಂದ ಕೊನೆತನಕ ಮುಂದುವರಿಯುತ್ತದೆ. ಕೊನೆಗೆ ಚಂದು ಕೊಲೆಗೂ ಪ್ರಯತ್ನ ನಡೆಯುತ್ತದೆ. ಚಂದು ಅಣ್ಣಯ್ಯನ ಇನ್ನೊಬ್ಬ ತಂಗಿ ಅನ್ನೋದು ರಾಮ್ಗೆ ಗೊತ್ತಾಗುತ್ತದೆ. ಅಣ್ಣಯ್ಯ ತನ್ನ ದೊಡ್ಡ ತಂಗಿಯನ್ನು ಮನೆಗೆ ಸೇರಿಸಿಕೊಳ್ಳುತ್ತಾನಾ? ತಾನೇ ನಿಂತು ಮದುವೆ ಮಾಡುತ್ತಾನಾ? ರಾಮ್ ಅಣ್ಣಯ್ಯನನ್ನು ಒಪ್ಪಿಸಿ ಹೇಗೆ ಚಂದುವನ್ನು ಮದುವೆಯಾಗುತ್ತಾನೆ ಅನ್ನೋದು ಸಿನಿಮಾ.
ನಿರ್ದೇಶಕ ವಿಜಯ್ ಕಿರಣ್ ತರ್ಕವಿಲ್ಲದೆ ಅಸಹಜವಾಗಿ ಪಾತ್ರ ಪೋಷಣೆ ಮಾಡಿದ್ದಾರೆ. ಗಟ್ಟಿತನವಿಲ್ಲದ, ಖಚಿತತೆ ಇರದ ಕ್ಯಾರೆಕ್ಟರ್ಗಳು ವಿಪರೀತವಾಗಿ ವರ್ತಿಸುತ್ತವೆ. ಚಿತ್ರ ಪ್ರಾರಂಭವಾದಾಗ ಶುರುವಾಗುವ ಡೈಲಾಗ್ ಎಕ್ಸ್ಪ್ರೆಸ್ ರೈಲಿನಂತೆ ವೇಗವಾಗಿ ಬ್ರೇಕ್ ಇಲ್ಲದೆ ಕೊನೆತನಕ ಸಾಗುತ್ತದೆ. ಎಲ್ಲಾ ಪಾತ್ರಗಳನ್ನೂ ಕಾಮಿಡಿ ಮಾಡಿಬಿಟ್ಟಿದ್ದಾರೆ ನಿರ್ದೇಶಕರು. ಚಿರಂಜೀವಿ ಸರ್ಜಾ, ರಂಗಾಯಣ ರಘು ಸಪ್ಪೆಯಾಗಿ ಕಾಣಿಸಿಕೊಂಡರೆ, ಸಾಧುಕೋಕಿಲಾ ಒಂದಿಷ್ಟು ನಗಿಸುತ್ತಾರೆ. ಅಮೂಲ್ಯ ಗ್ಲಾಮರಸ್ ಆಗಿ ಮಿಂಚಿದ್ದಾರೆ. ಛಾಯಾಗ್ರಹಣ ರಂಜನೆ ನೀಡುತ್ತದೆ. ಅನೂಪ್ ರೂಬೆನ್ಸ್ ಸಂಗೀತ ಕೆಲವು ಕಡೆ ಇಷ್ಟವಾಗುತ್ತದೆ. ಹಾಸ್ಯ ಚಿತ್ರಕ್ಕೆ ಸತ್ವ ನೀಡಿದೆ. ಕತೆ, ನೈಜತೆ ಯಾವುದನ್ನೂ ಹುಡುಕದೆ, ಹೆಚ್ಚು ಯೋಚಿಸದೆ ಸುಮ್ಮನೆ ಒಮ್ಮೆ ನೋಡಿಬರಬಹುದಾದ ಚಿತ್ರವಿದು.
ಕನ್ನಡ ಚಿತ್ರ