Quantcast
Channel: VijayKarnataka
Viewing all articles
Browse latest Browse all 6795

ಸಂಪಾದಕೀಯ: ನೀಟ್‌ ಪ್ರಶ್ನೆಗಳು

$
0
0

ಇನ್ನು ಮುಂದೆ ಎಂಬಿಬಿಎಸ್‌ ಮತ್ತು ಬಿಡಿಎಸ್‌ಗೆ ಪ್ರವೇಶ ಪಡೆಯಲು ರಾಷ್ಟ್ರಮಟ್ಟದ ಏಕರೂಪ ಪರೀಕ್ಷೆಯನ್ನು ವಿದ್ಯಾರ್ಥಿಗಳು ಎದುರಿಸಬೇಕು. ಸುಪ್ರೀಂಕೋರ್ಟ್‌ ಈ ಶೈಕ್ಷಣಿಕ ವರ್ಷದಿಂದಲೇ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೀಟ್‌)ಯನ್ನು ಕಡ್ಡಾಯಗೊಳಿಸಿದೆ. ಒಕ್ಕೂಟ ರಾಜ್ಯ ವ್ಯವಸ್ಥೆಯಲ್ಲಿ ಸಮಾನ ಮತ್ತು ಏಕರೂಪ ಎಂಬ ನೀತಿಗಳು ಎಲ್ಲರಿಗೂ ಹಿತವಾಗಿರುತ್ತವೆ ಎಂದು ಹೇಳಲಾಗುವುದಿಲ್ಲ. ಕರ್ನಾಟಕದಲ್ಲಿ ನಡೆಯುತ್ತಿದ್ದ ಸಿಇಟಿ ಮತ್ತು ಕಾಮೆಡ್‌ ಕೆ ಪರೀಕ್ಷೆ ಹಾಗೂ ಇತರೆ ರಾಜ್ಯಗಳ ಇಂಥದ್ದೇ ಪರೀಕ್ಷೆ ಮತ್ತು ಪ್ರವೇಶಾವಕಾಶಗಳಲ್ಲಿ ದೋಷಗಳಿದ್ದರೂ ಅವುಗಳ ಸಾಮಾಜಿಕ ಆಶಯಗಳ ಭೂಮಿಕೆಯನ್ನು ಯಾರೂ ಪ್ರಶ್ನೆ ಮಾಡಲು ಆಗುವುದಿಲ್ಲ. ಬಡ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ವೈದ್ಯರಾಗುವ ಮಹದಾಸೆಯನ್ನು ಅವು ಈಡೇರಿಸುತ್ತಿದ್ದವು. ಕರ್ನಾಟಕದಲ್ಲಿ ಗ್ರಾಮಾಂತರ, ಕನ್ನಡ ಮಾಧ್ಯಮ ಇತ್ಯಾದಿ ಕೋಟಾಗಳಡಿ ಸೀಟುಗಳನ್ನು ದಕ್ಕಿಸಿಕೊಳ್ಳುವ ಅವಕಾಶವಿತ್ತು. ಇದೀಗ ಇಂಥ ಒಳಮೀಸಲು ದಾರಿಗಳು ಮುಚ್ಚಿ ಹೋಗುವ ಎಲ್ಲ ಸಾಧ್ಯತೆಗಳಿವೆ.

ಸುಪ್ರೀಂಕೋರ್ಟ್‌ನಲ್ಲಿ ಪ್ರತಿವಾದ ಹೂಡಿದ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಈ ಬಾರಿ ಪರೀಕ್ಷೆಯನ್ನು ಮುಂದೂಡಿ ಎಂದು ಅಹವಾಲು ಹೇಳಿಕೊಂಡವೇ ಹೊರತು, ಏಕರೂಪ ಪರೀಕ್ಷೆ ಎಂಬುದು ಒಕ್ಕೂಟ ರಾಜ್ಯ ವ್ಯವಸ್ಥೆಯ ಭೂಮಿಕೆಗೆ ವಿರುದ್ಧ ಹಾಗೂ ಸಾಮಾಜಿಕ ನ್ಯಾಯ ಕಲ್ಪನೆಗೆ ಧಕ್ಕೆಯಾಗುತ್ತದೆ ಎಂದು ಹೇಳಿಕೊಳ್ಳಲೇ ಇಲ್ಲ. ಇಲ್ಲಿ ಅಖಿಲ ಭಾರತ ಮಟ್ಟದಲ್ಲಿ ಪ್ರಭಾವಿಗಳಾಗಿರುವ ಖಾಸಗಿ ವೈದ್ಯಕೀಯ ಕಾಲೇಜುಗಳ ವಾದವೇ ಮೇಲುಗೈ ಪಡೆಯಿತು. ಪಠ್ಯಕ್ರಮ, ಬೋಧನೆ, ಶೈಕ್ಷಣಿಕ ಸೌಲಭ್ಯ, ಕಲಿಕಾ ಮಾಧ್ಯಮ, ಕಾಲೇಜುಗಳಲ್ಲಿರುವ ಸೌಲಭ್ಯ- ಹೀಗೆ ಹತ್ತು ಹಲವು ವಿಷಯಗಳಲ್ಲಿ ಅಸಮಾನತೆ ಕಣ್ಣಿಗೆ ರಾಚುವಾಗ, ಪರೀಕ್ಷೆಯಲ್ಲಿ ಮಾತ್ರ ಸಮಾನತೆ ಸಾಧಿಸಿದರೆ ಸಾಕೆ?
ಒಂದೊಂದು ರಾಜ್ಯವಿರಲಿ, ಒಂದೊಂದು ಜಿಲ್ಲೆಯಲ್ಲೂ ಶಿಕ್ಷಣಕ್ಕೆ ಸಂಬಂಧಿಸಿದ ಈ ಭಿನ್ನತೆಗಳು ವಿದ್ಯಾರ್ಥಿಗಳ ಶಕ್ತಿ ಮತ್ತು ಸಾಮರ್ಥ್ಯ‌ಗಳನ್ನು ಕುಂಠಿತಗೊಳಿಸುತ್ತಿರುತ್ತದೆ. ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಸಹಜವಾಗಿಯೇ ಈ ರಾಷ್ಟ್ರಮಟ್ಟದ ಪರೀಕ್ಷೆಗಳಲ್ಲಿ ಹಿಂದೆ ಬೀಳುತ್ತಾರೆ. ಸಮಾನ ಗುಣಮಟ್ಟದ ಶಿಕ್ಷಣ ಪಡೆದಾಗ ಮಾತ್ರ ಸಮಾನ ಪರೀಕ್ಷೆಗಳಿಗೆ ಅರ್ಥ ಬರುತ್ತದೆ.

ಇನ್ನು ನೀಟ್‌ ಪರೀಕ್ಷೆ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿದ್ದು, ಇದರ ಜತೆಗೆ ತಮಿಳು, ತೆಲುಗು, ಮರಾಠಿ, ಅಸ್ಸಾಮಿ, ಬೆಂಗಾಲಿ ಮತ್ತು ಗುಜರಾತಿ ಭಾಷೆಗಳಲ್ಲೂ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲು ಕೇಂದ್ರ ಸರಕಾರ ಸುಪ್ರೀಂ ಕೋರ್ಟಿಗೆ ಮನವಿ ಮಾಡಿಕೊಂಡಿದೆ. ಆರು ಭಾಷೆಗಳ ಪಟ್ಟಿಯಲ್ಲಿ ಕನ್ನಡ ಭಾಷೆ ಇಲ್ಲ. ಇಂಥ ಒತ್ತಾಯಗಳು ನಮ್ಮ ನಾಡಿನಿಂದ ಮೂಡಿರುವ ಅವಕಾಶವೂ ಇಲ್ಲ. ನಮ್ಮಲ್ಲಿ ಇಂಥ ಒತ್ತಾಯಗಳು ತಾನೇ ತಾನಾಗಿ ಒಡಮೂಡುವುದಿಲ್ಲ. ಬೇರೆಯವರಿಗೆ ನೀಡುವ ಅವಕಾಶಗಳನ್ನು ನೋಡಿಕೊಂಡು ನಮ್ಮ ಆದ್ಯತೆ, ಅಗತ್ಯಗಳನ್ನು ನಾವು ಗುರುತಿಸಿಕೊಳ್ಳುತ್ತೇವೆ.

ಬಹು ಹಿಂದೆಯೇ ಕನ್ನಡ ವಿಶ್ವವಿದ್ಯಾಲಯ ಪಿಯುಸಿ ವಿಜ್ಞಾನ ಪಠ್ಯಗಳನ್ನು ಕನ್ನಡದಲ್ಲಿ ರೂಪಿಸಿತ್ತು. ಇವು ಇಂಗ್ಲಿಷ್‌ನಲ್ಲಿ ವಿಜ್ಞಾನ ಗೊತ್ತಾಗದ ಶಿಕ್ಷಕರಿಗೆ 'ಅಮೂಲ್ಯ' ಎಂದೆನಿಸಿದವೇ ಹೊರತು ಅವುಗಳನ್ನು ಯಾರೂ ವಿದ್ಯಾರ್ಥಿಗಳಿಗೆ ದಾಟಿಸಲಿಲ್ಲ. ಭಾಷೆ ಗೊತ್ತಿಲ್ಲದಿದ್ದರೂ ಇಂಗ್ಲಿಷ್‌ನಲ್ಲಿ ಪಾಠ ಮಾಡುವುದು ಬಹುತೇಕ ಶಿಕ್ಷಕರಿಗೆ ತಮ್ಮ ಹಿರಿಮೆ, ಗರಿಮೆಯ ವಿಷಯವಾಗಿತ್ತು. ಹೀಗಾಗಿ ಕನ್ನಡಕ್ಕೆ ಅವರು ನೀರೆರೆಯಲೇ ಇಲ್ಲ. ಹೀಗಾಗಿ ಸಿಇಟಿ, ಕಾಮೆಡ್‌ಕೆ ಕನ್ನಡದಲ್ಲಿರಬೇಕು ಎಂದು ಯಾರೂ ಕೂಡ ಒತ್ತಾಯಿಸಲೇ ಇಲ್ಲ. ಈಗ ನೀಟ್‌ನಲ್ಲಿ ಇಂಥ ಆಗ್ರಹವನ್ನು ಮಂಡಿಸುವುದು ಅಲಂಕಾರಿಕ, ಭಾವನಾತ್ಮಕ ಎಂದೆನಿಸುತ್ತದೆಯೇ ಹೊರತು ನಿಜ ಕಾಳಜಿ ಎಂದೆನಿಸುವುದಿಲ್ಲ. ಬೋಧನೆ ಮತ್ತು ಕಲಿಕೆ ಹಂತದಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಸಬಲಗೊಳಿಸಿದಾಗ ಮಾತ್ರ ಪರೀಕ್ಷೆಗಳಲ್ಲಿ ಅಂಥ ಆಗ್ರಹಗಳಿಗೆ ಅರ್ಥ ಬರುತ್ತದೆ. ಒಟ್ಟಾರೆ ನೀಟ್‌ನ ರಾಜಕೀಯ ಮತ್ತು ಸಾಮಾಜಿಕ ಪರಿಣಾಮಗಳ ಕುರಿತು ದೊಡ್ಡ ವಾಗ್ವಾದಗಳು ನಡೆಯಬೇಕಾಗಿದೆ.


Viewing all articles
Browse latest Browse all 6795