* ಪದ್ಮಾ ಶಿವಮೊಗ್ಗ
ನವೀನ್ ರೆಡ್ಡಿ ನಿರ್ದೇಶನದ 'ಅಕಿರ' ಚಿತ್ರ ಹೊಸಬರ ಚಿತ್ರವೇ ಆಗಿದ್ದರೂ ರಿಲೀಸ್ಗೂ ಮೊದಲೇ ಹವಾ ಹುಟ್ಟು ಹಾಕಿತ್ತು. ಕಾಲೇಜು ಹುಡುಗರಲ್ಲೂ ನಿರೀಕ್ಷೆ ಹುಟ್ಟಿಸಿತ್ತು. ಅನೀಶ್ ಅಭಿನಯದ ಚಿತ್ರ ಅವರಿಗಾಗಿಯೇ ಮಾಡಿದಂತಿದೆ. ಹೊಸ ಜಮಾನಾದ ಪ್ರೀತಿಯ ತೀವ್ರತೆ, ಪೊಸೆಸಿವ್ನೆಸ್, ಇಂದಿನ ಹುಡುಗರ ಲೈಫ್ ಸ್ಟೈಲ್ ನೋಡುಗರಿಗೆ ನಿರಾಶೆ ಮಾಡುವುದಿಲ್ಲ.
ಶ್ರೀಮಂತ ಹುಡುಗ ಅಕಿಲ್ ರಾಜ್ ಜೀವನವನ್ನು ಸೀರಿಯಸ್ಸಾಗಿ ತೆಗೆದುಕೊಂಡವನಲ್ಲ. ಕಂಪನಿ ನಡೆಸು ಎಂದು ಅಪ್ಪ ಹೇಳಿದರೂ ಸ್ನೇಹಿತರ ಜತೆ ಜಾಲಿಯಾಗಿರುತ್ತಾನೆ. ಹೀಗಿದ್ದರೂ ಚಿತ್ರ ಪ್ರಾರಂಭ ಆಗೋದೇ ಲವ್ ಬ್ರೇಕಪ್ನಿಂದ! ಆತನಿಂದ ಸಾಹಿತಿ (ಅದಿತಿ ರಾವ್) ಅನಿರೀಕ್ಷಿತವಾಗಿ ದೂರವಾಗುತ್ತಾಳೆ. ಆಗ ಅವನಲ್ಲಿ ಭರವಸೆ ತುಂಬಿದವಳು ಲಾವಣ್ಯ(ಕೃಷಿ ತಾಪಂದ). ಸಿನಿಮಾ ನಿರ್ದೇಶಿಸಿ ದೊಡ್ಡ ಕನಸು ಕಾಣುವ ಲಾವಣ್ಯ ಒಂಟಿಯಾಗಿ, ಸ್ವತಂತ್ರವಾಗಿ ಇರುತ್ತಾಳೆ. ವೃದ್ಧಾಶ್ರಮವನ್ನೂ ನಡೆಸುತ್ತಿರುತ್ತಾಳೆ. ಅವಳಿಂದ ತಿರಸ್ಕೃತನಾದ ಅಕಿಲ್ ಹಿಂತಿರುಗಿದಾಗ ಅವರಪ್ಪ (ಅವಿನಾಶ್) ಮನೆಗೆ ಸೇರಿಸುವುದಿಲ್ಲ.
ಆಮೇಲೆ ಡೈನಮಿಕ್ ಹುಡುಗಿ ಲಾವಣ್ಯ, ಅಕಿಲ್ನ ಬೇಕು ಬೇಡಗಳನ್ನು ನೋಡಿಕೊಳ್ಳುವ ನಿಷ್ಕಲ್ಮಶ ಮನಸ್ಸಿನವಳು. ಇವರ ಪರಿಶುದ್ಧ ಸ್ನೇಹಕ್ಕೆ ಪ್ರೀತಿ ಬೆರೆತು ಒಬ್ಬರಿಗೊಬ್ಬರು ಹೇಳಬೇಕೆಂದಿರುವಾಗಲೇ ಕತೆ ತಿರುವು ಪಡೆದುಕೊಳ್ಳುತ್ತದೆ. ಕೊನೆಗೆ ಅಕಿಲ್ ಯಾರನ್ನು ಮದುವೆಯಾಗುತ್ತಾನೆ? ಅಪ್ಪ ಬಯಸಿದಂತೆ ಉದ್ಯಮದಲ್ಲಿ ಯಶಸ್ಸು ಕಾಣುತ್ತಾನಾ? ಅಕಿಲ್ ಮುಂದೆ ಅಕಿರ (ಸ್ಟ್ರಾಂಗ್ ಪರ್ಸನ್) ಆಗುತ್ತಾನೆ. ಅದು ಹೇಗೆ ಎಂಬುದನ್ನು ನೀವು ಚಿತ್ರ ನೋಡಿಯೇ ತಿಳಿಯಬೇಕು.
ಎಲ್ಲರ ಜೀವನದಲ್ಲಿ ನಡೆದಿರಬಹುದಾದ ಕತೆ ಇದು. ಪ್ರೀತಿಯಷ್ಟೇ ಬದುಕು ಎಂಬ ಭ್ರಮೆಯಲ್ಲಿ ಜೀವನ ಹಾಳುಮಾಡಿಕೊಂಡವರ ಜೆತೆಗೆ, ಅದು ಬದುಕಿನ ಒಂದು ಭಾಗವಷ್ಟೇ ಎಂದು ಭಾವಿಸಿ ಮುಂದೆ ಸಾಗಿದವರೂ ಇದ್ದಾರೆ. ಚಿತ್ರದಲ್ಲಿ ಇದೇ ಮುಖ್ಯವಾದ ಅಂಶ. ಚಿತ್ರದ ನಾಯಕ ತಾನು ಯಾವುದಕ್ಕೆ ಪ್ರಾಮುಖ್ಯತೆ ನೀಡಬೇಕು ಎಂಬ ವಾಸ್ತವವನ್ನು ಅರಿಯುತ್ತಾನೆ.
ಉಳಿದಂತೆ ಚಿತ್ರದಲ್ಲಿ ತೀವ್ರ ಪ್ರೀತಿಯೂ ಇದೆ. ಅಷ್ಟೇ ಬೇಗ ಇನ್ನೊಂದು ಬದುಕನ್ನು ಆಯ್ದುಕೊಳ್ಳುವ ಪರಿಯೂ ಹಿತವಾಗಿದೆ. ಅತಿಯಾದ ಪೊಸೆಸಿವ್ನೆಸ್ನಿಂದ ಪ್ರೀತಿಸಿದವರನ್ನು ಕಳೆದುಕೊಳ್ಳಬೇಕಾಗುತ್ತೆ, ಸ್ನೇಹ ಮತ್ತು ಪ್ರೀತಿಯ ನಡುವೆ ಮೇಲ್ನೋಟಕ್ಕೆ ತೆಳುವಾದ ಗೆರೆ ಇದೆ, ನಿಜವಾದ ಸ್ನೇಹ ಹೇಗಿರುತ್ತೆ ಎನ್ನುವುದೂ ಇದೆ. ಇವೆಲ್ಲಾ ಕನ್ನಡದ ಪ್ರೇಕ್ಷಕನಿಗೆ ಸ್ವಲ್ಪ ಹೊಸದು ಎನ್ನಬಹುದು. ಕೊನೆಗೊಮ್ಮೆ ಸುದೀಪ್ ಅಭಿನಯದ 'ಮೈ ಆಟೋಗ್ರಾಫ್' ನೆನಪಾದರೆ ಆಶ್ಚರ್ಯವಿಲ್ಲ. ಪ್ರತಿಯೊಬ್ಬರ ಜೀವನದಲ್ಲಿ ಕಾಲದ ಮಹತ್ವ, ವಾಸ್ತವ ಏನು? ಎನ್ನುವುದನ್ನು ನಿರ್ದೇಶಕ ಹೇಳಲು ಪ್ರಯತ್ನಿಸಿದ್ದಾರೆ.
ಮೊದಲ ಪ್ರಯತ್ನದಲ್ಲೇ ಭರವಸೆಯನ್ನು ಮೂಡಿಸಿದ್ದಾರೆ ನವೀನ್ ರೆಡ್ಡಿ. ಅನೀಶ್ ಎನರ್ಜಿಟಿಕ್ ಆಗಿದ್ದಾರೆ. ಅವರ ಡಾನ್ಸ್ , ಫೈಟ್ ಚೆನ್ನಾಗಿದೆ. ಅದಿತಿಯದು ಪಾತ್ರಕ್ಕೆ ಪೂರಕ ಅಭಿನಯ. ಕೃಷಿ ತಾಪಂದ ಪುಟಿಯುವ ಹುಡುಗಿ. ಚೆನ್ನಾಗಿ ನಟಿಸಿದ್ದಾರೆ. ಒಂದೆರಡು ದೃಶ್ಯಗಳಲ್ಲಿ ಬರುವ ರಂಗಾಯಣ ರಘು, ಅವಿನಾಶ್ ಮನಸ್ಸಿನಲ್ಲಿ ಉಳಿಯುತ್ತಾರೆ. ಯೋಗಿ ಛಾಯಾಗ್ರಹಣ ಕಣ್ಣಿಗೆ ರಂಜನೆ ನೀಡುತ್ತೆ. ಅಜನೀಶ್ ಲೋಕ್ನಾಥ್ ಸಂಗೀತ ಪ್ಲಸ್ ಪಾಯಿಂಟ್. ಕೆಟ್ಟ ಸಿನಿಮಾಗಳ ನಡುವೆ ತಪ್ಪದೇ ನೋಡಬಹುದಾದ ಚಿತ್ರ ಅಕಿರ.
ಕನ್ನಡ ಚಿತ್ರ