* ಶಶಿಧರ ಚಿತ್ರದುರ್ಗ
ನನ್ನನ್ನು ನೀನು ಪೂರ್ತಿ ನೋಡಿಲ್ಲ, ಈಗ ನೋಡ್ತೀಯಾ? ಹೀಗಂತ ಚಿತ್ರದ ಹೀರೋ ಪುನೀತ್ ಖಳನಿಗೆ ಹೇಳುತ್ತಾರೆ. ಇದು ಚಿತ್ರದಲ್ಲಿನ ಅವರ ಆ್ಯಕ್ಷನ್ ಸನ್ನಿವೇಶಗಳಿಗೂ ಅನ್ವಯವಾಗುವ ಡೈಲಾಗ್. ಪವರ್ಪ್ಯಾಕ್ಡ್ ಆ್ಯಕ್ಷನ್ ಸಿನಿಮಾಗಳಿಂದ ಕೊಂಚ ದೂರವಿದ್ದ ಅವರು 'ಚಕ್ರವ್ಯೂಹ'ದಲ್ಲಿ ಸಾಹಸಕ್ಕೆ ಮರಳಿದ್ದಾರೆ. ವೇಗದ ಚಿತ್ರಕಥೆ, ಆಕರ್ಷಕ ಛಾಯಾಗ್ರಹಣ, ಹದವರಿತ ಹಿನ್ನೆಲೆ ಸಂಗೀತ ಆ್ಯಕ್ಷನ್ಗೆ ಬೇಕಾದ ಭೂಮಿಕೆ ಒದಗಿಸಿದೆ. ಒಟ್ಟಾರೆ ತಮ್ಮ ಹೀರೋ ಆ್ಯಕ್ಷನ್ ನೋಡಬೇಕೆಂದಿದ್ದ ಅಭಿಮಾನಿಗಳಿಗೆ ಭರ್ಜರಿ ಸಿನಿಮಾ ನೀಡಿದ್ದಾರೆ ಪುನೀತ್.
ಪುನೀತ್ಗೆ ಇಲ್ಲಿ ವ್ಯವಸ್ಥೆಯನ್ನು ಪ್ರಶ್ನಿಸುವ ಸಾಮಾನ್ಯ ಯುವಕನ ಪಾತ್ರವಿದೆ. ದುಷ್ಟರ ವಿರುದ್ಧ ಸೆಣಸಾಟಕ್ಕೆ ಲವ್ಸ್ಟೋರಿಯನ್ನು ಬೆಸೆಯಲು ನಿರ್ದೇಶಕರು ಯತ್ನಿಸಿದ್ದಾರೆ. ಹುಡುಗಾಟದ ನಾಯಕಿ, ಪ್ರೀತಿ ಮತ್ತು ನ್ಯಾಯದ ಹುಡುಕಾಟದ ನಾಯಕನ ಕತೆಯಲ್ಲಿ ಅನಗತ್ಯ ಸೆಂಟಿಮೆಂಟ್, ಅತಿಯಾದ ಹಿಂಸೆ ಇಲ್ಲ ಎನ್ನುವುದೇ ಸಮಾಧಾನ. ಸಮಾಜ ಸುಧಾರಣೆಯಲ್ಲಿ ಪ್ರತಿಯೊಬ್ಬ ನಾಗರಿಕನ ಪಾತ್ರವೂ ಇರಲಿ ಎನ್ನುವ ಸಂದೇಶದೊಂದಿಗೆ ಚಿತ್ರ ಮುಕ್ತಾಯವಾಗುತ್ತದೆ. ಚಿತ್ರವಿಡೀ 'ಹೀರೋ ಪುನೀತ್' ಆವರಿಸಿಕೊಂಡಿರುವುದರಿಂದ ಹೇಳಬೇಕಾದ ಸಂದೇಶಕ್ಕೆ ಹಿನ್ನೆಡೆಯಾಯ್ತೇನೋ ಎನಿಸುವುದಿದೆ.
ಚಕಚಕನೆ ಓಡುವ ಚಿತ್ರಕಥೆ, ಬೈಕ್- ಕಾರುಗಳ ಚೇಸಿಂಗ್ ಸೀನ್ಗಳೊಂದಿಗೆ ಯುವ ನಿರ್ದೇಶಕ ಶರವಣನ್ ಕಸುಬುದಾರಿಕೆ ಮೆರೆದಿದ್ದಾರೆ. ಮೂರು ವರ್ಷಗಳ ಹಿಂದೆ ತೆರೆಕಂಡಿದ್ದ ಅವರೇ ನಿರ್ದೇಶಿಸಿದ್ದ ತಮಿಳು ಚಿತ್ರವೊಂದರ ಪ್ರೇರಣೆಯಿಂದ ತಯಾರಾಗಿರುವ ಸಿನಿಮಾ 'ಚಕ್ರವ್ಯೂಹ'. ಬಹುಶಃ ಇದೇ ಕಾರಣಕ್ಕೆ ಇಲ್ಲಿಯೂ ಅವರು ಹಿಡಿತ ಸಾಧಿಸಿದ್ದಾರೆ. ಇನ್ನು ಹೀರೋ ಪುನೀತ್ ರಾಜಕುಮಾರ್ ಕತೆಯ ಆಯ್ಕೆಯಲ್ಲಿ ಹೆಚ್ಚು ರಿಸ್ಕ್ ತೆಗೆದುಕೊಳ್ಳಲು ಹೋಗಿಲ್ಲ. ಸರಳ ಕತೆಯಲ್ಲಿ ಎಂದಿನಂತೆ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡು ಚಪ್ಪಾಳೆ ಗಿಟ್ಟಿಸುತ್ತಾರೆ. ದುಷ್ಟತನವನ್ನೇ ಆವರಿಸಿಕೊಂಡಂತೆ ನಟಿಸಿರುವ ತಮಿಳು ನಟ ಅರುಣ್ ವಿಜಯ್ಗೂ ಹೆಚ್ಚು ಅಂಕಗಳು ಸಲ್ಲಬೇಕು. ಹುಡುಗಾಟದ ಹುಡುಗಿಯಾಗಿ ನಾಯಕಿ ರಚಿತಾ ರಾಮ್ ಇಷ್ಟವಾಗುತ್ತಾರೆ.
ಅತಿ ಹೆಚ್ಚು ಮಾತಿನ ಪಾತ್ರಗಳಲ್ಲೇ ಕಾಣಿಸಿಕೊಳ್ಳುತ್ತಿದ್ದ ರಂಗಾಯಣ ರಘು ಅವರಿಗಿಲ್ಲಿ ರಿಲೀಫ್ ಸಿಕ್ಕಿದೆ. ಚಿತ್ರದ ಖಳರನ್ನು ಕೊನೆಗಾಣಿಸುವ ಪ್ರಾಮಾಣಿಕ ಪೊಲೀಸ್ ಅಧಿಕಾರಿಯಾಗಿ ಅವರದು ವಿಶಿಷ್ಟ ಪಾತ್ರ. ತಮ್ಮ ಎಂದಿನ ಮ್ಯಾನರಿಸಂ ಇಟ್ಕೊಂಡೇ ಅವರು ಪಾತ್ರವನ್ನು ಅಂಡರ್ಪ್ಲೇ ಮಾಡಿದ್ದಾರೆ. ಥಮನ್ ಸಂಗೀತದ ಎರಡು ಹಾಡುಗಳು ಮೆಲುಕು ಹಾಕುವಂತಿವೆ. ಅದರಲ್ಲೂ ತೆಲುಗು ನಟ ಜ್ಯೂನಿಯರ್ ಎನ್ಟಿಆರ್ ಹಾಡಿರುವ 'ಗೆಳೆಯ ಗೆಳೆಯ' ಪಿಕ್ಚರೈಸೇಷನ್ ಆಕಷರ್ಕವಾಗಿದೆ. ತಮಿಳು ಸಿನಿಮಾದಿಂದ ಎರವಲು ಪಡೆದಂತಿರುವ ಹಾಸ್ಯ ಸನ್ನಿವೇಶವೊಂದು, ಪುನೀತ್ ಪ್ರಜ್ಞಾಪೂರ್ವಕವಾಗಿ ಆಯ್ಕೆ ಮಾಡಿಕೊಳ್ಳುವ ಸದಭಿರುಚಿಯ ಕತೆಗೆ ಹುಳಿ ಹಿಂಡುತ್ತದೆ. ಇಂತಹ ಕೆಲವೇ ಮಿತಿಗಳ ಹೊರತಾಗಿ ನೋಡುವುದಾದರೆ, 'ಚಕ್ರವ್ಯೂಹ' ಬೇಸಿಗೆಯ ರಜೆಯಲ್ಲಿ ಕುಟುಂಬದೊಂದಿಗೆ ಎಂಜಾಯ್ ಮಾಡಬಹುದಾದ ಸಿನಿಮಾ.
ಕನ್ನಡ ಚಿತ್ರ