Quantcast
Channel: VijayKarnataka
Viewing all articles
Browse latest Browse all 6795

ಯಶೋಗಾಥೆ: ಮಂದಗತಿಯ ಯಶೋಗಾಥೆ

$
0
0

ಚಿತ್ರ: ಯಶೋಗಾಥೆ (ಕನ್ನಡ)
-ಪದ್ಮಾ ಶಿವಮೊಗ್ಗ

ಹಾರರ್ ಮತ್ತು ಥ್ರಿಲ್ಲರ್ ಎನ್ನಲಾಗಿದ್ದ 'ಯಶೋಗಾಥೆ' ಸ್ವಾತಂತ್ರ್ಯಕ್ಕೂ ಮೊದಲು ನಡೆದ ಘಟನೆಯನ್ನಾಧರಿಸಿದ ಸಿನಿಮಾ. ಸ್ವಾತಂತ್ರ್ಯ ಹೋರಾಟಕ್ಕೆ ತೆರಳಿದ ಸಹೋದರರಿಬ್ಬರ ಹೆಂಡತಿಯರು ಮತ್ತು ಒಬ್ಬ ಮಗಳು ದಟ್ಟವಾದ ಕಾಡಿನ ನಡುವೆ ಒಂಟಿ ಮನೆಯಲ್ಲಿ ಭಯ, ಆತಂಕದಿಂದ ಕಳೆಯುವುದನ್ನು ತೋರಿಸಲಾಗಿದೆ. ಕಮರ್ಷಿಯಲ್‌ ಅಂಶಗಳೇನೂ ಇರದ ಚಿತ್ರ ನೋಡುಗರ ತಾಳ್ಮೆಯನ್ನು ಬೇಡುತ್ತದೆ. ವಿನೋದ್‌ ಜೆ. ರಾಜ್‌ ಈ ಚಿತ್ರವನ್ನು ನಿರ್ದೇಸಿಸಿದ್ದಾರೆ.

ಪುರಾತನ ಒಂಟಿ ಮನೆಯಲ್ಲಿ ತ್ರಿವೇಣಿ (ಮಾನಸಾ ಜೋಶಿ) ತನ್ನ 6-7 ವರ್ಷದ ಮಗಳು ಮತ್ತು ಮೈದುನನ ಹೆಂಡತಿ (ಪವಿತ್ರಾ ಬೆಳ್ಳಿಯಪ್ಪ) ಜೊತೆಯಲ್ಲಿ ವಾಸವಿರುತ್ತಾಳೆ. ಸ್ವಾತಂತ್ರ್ಯ ಹೋರಾಟಕ್ಕೆ ತೆರಳಿದ ಇವರ ಗಂಡಂದಿರು ವರ್ಷಗಳಾದರೂ ಮರಳಿ ಬರುವುದಿಲ್ಲ. ದುಡಿಯುವವರಿಲ್ಲದೆ, ಬ್ರಿಟೀಷ್‌ ಅಧಿಕಾರಿಗಳ ಭಯದಿಂದ ಅಜ್ಞಾತವಾಗಿ ಬದುಕು ನಡೆಸುತ್ತಿರುತ್ತಾರೆ. ಪ್ರತಿನಿತ್ಯವೂ ತಮ್ಮ ಗಂಡಂದಿರಿಗಾಗಿ ನಿರೀಕ್ಷಿಸುತ್ತಾರೆ.

ಹೀಗಿರಬೇಕಾದರೆ, ಆ ಮನೆಯಲ್ಲಿ ಅಮೂಲ್ಯವಾದ ಹರಳೊಂದು ಇದೆ ಎನ್ನುವುದನ್ನು ತಿಳಿದ ಬ್ರಿಟಿಷ್‌ ಅಧಿಕಾರಿಯೊಬ್ಬ ಮನೆಗೆ ನುಗ್ಗುತ್ತಾನೆ. ಆದರೆ ಆತನನ್ನು ತ್ರಿವೇಣಿ ಹೆದರಿಸಿ ಓಡಿಸುತ್ತಾಳೆ. ಇವಳು ದಿಟ್ಟ ಹೆಣ್ಣು ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡಿದವಳು. ಇನ್ನೆರಡು ದಿನಗಳಲ್ಲಿ ಸೈನಿಕರೊಂದಿಗೆ ಬರುವವನಿರುತ್ತಾನೆ. ಅಷ್ಟರಲ್ಲಿ ಮನೆಗೆ ಒಬ್ಬ ಬಾಲಕನ ಪ್ರವೇಶವಾಗುತ್ತದೆ. ಸಂಗೀತ ಕಲಿಯಲು ಆ ಮನೆಗೆ ಬಂದು ನೆಲೆಸುತ್ತಾನೆ. ಇವನನ್ನೂ ಅನುಮಾನದಿಂದ ನೋಡುವಂತೆ ಮಾಡುತ್ತದೆ. ನಿರ್ಬಂಧ ಹೇರಿದ ಒಂದು ಕೋಣೆಯಲ್ಲಿ ಏನಿದೆ? ಎಂಬ ಕುತೂಹಲ ಹುಡುಗನಿಗೆ. ಬ್ರಿಟೀಷರು ಮತ್ತೆ ಬಂದರಾ? ಗಂಡನೇ ವಾಪಸ್‌ ಬಂದನಾ? ಅಷ್ಟಕ್ಕೂ ಆ ಕೋಣೆಯಲ್ಲಿ ಏನಿತ್ತು? ಕೊನೆಗೆ ಮನೆಯಲ್ಲಿದ್ದ ಮೂವರು ಏನಾದರು? ಇದೇ ಸಸ್ಪೆನ್ಸ್‌.

ಟ್ವಿಸ್ಟ್‌ ಮತ್ತು ಸ್ವಾರಸ್ಯವಿಲ್ಲದ ದೃಶ್ಯಗಳೇ ತುಂಬಿರುವ ಇಡೀ ಚಿತ್ರ ಎರಡು ಗಂಟೆಗೆ ಎಳೆದಂತಾಗಿದೆ. ಇನ್ನು ಹಾರರ್‌ ಸಿನಿಮಾ ಎಂದುಕೊಂಡು ಹೋದರೆ ನಿರಾಶೆಯಾಗುತ್ತದೆ. ಹಿನ್ನಲೆ ಸಂಗೀತ ಅನಗತ್ಯವಾಗಿ ಬೆಚ್ಚಿ ಬೀಳಿಸುತ್ತದೆ ಬಿಟ್ಟರೆ ಕತೆಗೆ ಸಿಂಕ್‌ ಆಗಲ್ಲ.

ಮೊದಲರ್ಧದಲ್ಲಿ ಕತೆ ಸಾಗುವುದೇ ಇಲ್ಲ. ಮಹಿಳೆಯರ ಒಂಟಿತನವನ್ನು ತೋರಿಸುವುದರಲ್ಲೇ ಅದು ಮುಗಿದುಹೋಗುತ್ತದೆ. ತರ್ಕಬದ್ಧವಲ್ಲದ ದೃಶ್ಯ ಜೋಡಣೆ, ಗೊಂದಲ ಸೃಷ್ಟಿಸುವ ಮಾತುಗಳು ಸಿನಿಮಾವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ತೊಡಕಾಗಿವೆ. ಬಹುತೇಕ ದೃಶ್ಯಗಳು ವಿದ್ಯುತ್‌ ಇಲ್ಲದ ಮನೆಯಲ್ಲಿ ದೀಪದ ಬೆಳಕಲ್ಲಿ ಸಾಗುವುದರಿಂದ ನೆರಳು ಬೆಳಕಿನಾಟದಲ್ಲಿ ಛಾಯಾಗ್ರಹಣ ಮೆಚ್ಚುಗೆ ಗಳಿಸಿದರೂ ಕೆಲವೆಡೆ ಎಲ್ಲವೂ ಅಸ್ಪಷ್ಟ. ಚಿತ್ರದಲ್ಲಿ ಸ್ವಾತಂತ್ರ್ಯ ಪೂರ್ವದ ಕಾಲಕ್ಕೆ ನಮ್ಮನ್ನು ಕರೆದೊಯ್ಯುವುದು ಸೆಟ್‌ ಮತ್ತು ಪ್ರಾಪರ್ಟಿ. ಕಲಾ ನಿರ್ದೇಶಕರ ಕೆಲಸ ಚೆನ್ನಾಗಿದೆ. ಮಾನಸಾ ಜೋಶಿ ಇಡೀ ಚಿತ್ರವನ್ನಾವರಿಸಿದ್ದಾರೆ. ಎಲ್ಲರ ನಟನೆ ಪಾತ್ರಕ್ಕೆ ಪೂರಕವಾಗಿದೆ. ನಿರ್ದೇಶಕ ಇನ್ನಷ್ಟು ಸಮರ್ಥವಾಗಿದ್ದಿದ್ದರೆ ಇದು ಉತ್ತಮ ಕಲಾತ್ಮಕ ಚಿತ್ರವಾಗುತ್ತಿತ್ತು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


 ಕೌಟುಂಬಿಕ ಕಲಹ ಹಿನ್ನೆಲೆ; ಬುದ್ದಿವಾದ ಹೇಳಿದ ತಂಗಿಯನ್ನೇ ಕೊಂದ ಅಣ್ಣ…


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


‘ಒಡಕು ಮೂಡಿಸಿದ ಸಿದ್ಧರಾಮಯ್ಯ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್