ಚನ್ನರಾಯಪಟ್ಟಣ: ತಾಲೂಕಿನ ಗೌಡಗೆರೆಯಲ್ಲಿರುವ ಆದಿಶಕ್ತಿ ಹುಲಿಕೆರಮ್ಮನವರ 8ನೇ ವರ್ಷದ ಕೆಂಡಕೊಂಡ ಜಾತ್ರಾ ಮಹೋತ್ಸವ ಹಾಗೂ ಅಮ್ಮನವರಿಗೆ ಬೆಳ್ಳಿರಥದ ಸಮರ್ಪಣೆ ಮತ್ತು ಲೋಕಕಲ್ಯಾಣಾರ್ಥವಾಗಿ ಚಂಡಿಕಾಹೋಮ ಸಕಲ ವಿಧಿವಿಧಾನಗಳೊಂದಿಗೆ ಮಂಗಳವಾರ ನೆರವೇರಿತು. ಮೂರು ದಿನಗಳ ಕಾಲ ನಡೆಯುವ ಈ ಸಮಾರಂಭದಲ್ಲಿ ಸೋಮವಾರ ದೇವಿಯ ಉತ್ಸವ ಮೂರ್ತಿಯನ್ನು ಗನ್ನಿಕಡದ ಹೇಮಾವತಿ ಹೊಳೆಯಲ್ಲಿ ಸಂಪ್ರೋಕ್ಷ ಣೆ ಮಾಡಿ ನೂತನ ಬೆಳ್ಳಿ ರಥದಲ್ಲಿ ಕೂರಿಸಿ ಚನ್ನರಾಯಪಟ್ಟಣ, ಶೆಟ್ಟಿಹಳ್ಳಿ ಮಾರ್ಗವಾಗಿ ಗ್ರಾಮಕ್ಕೆ ಕರೆತರಲಾಯಿತು. ಸಂಜೆ ಗಣಹೋಮ ಸೇರಿದಂತೆ ವಿವಿಧ ಹೋಮಾದಿ ಕಾರ್ಯಗಳನ್ನು ನಡೆಸಲಾಯಿತು. ಮಂಗಳವಾರ ರಂಭಾಪುರಿ ಶಾಖಾಮಠದ ನುಗ್ಗೇಹಳ್ಳಿಯ ಪುರವರ್ಗಹಿರೇಮಠದ ಮಹೇಶ್ವರಶಿವಾಚಾರ್ಯ ಸ್ವಾಮೀಜಿ ಮಾರ್ಗದರ್ಶನದಲ್ಲಿ ಚಂಡಿಕಾ ಹೋಮ ನೆರವೇರಿಸಲಾಯಿತು. ಸಂಜೆ ವೇಳೆಗೆ ಮಡೆ ಉತ್ಸವ ಹಾಗೂ ಬಾಯಿಬೀಗ ಕಾರ್ಯಕ್ರಮಗಳು ಜರುಗಿದವು. ರಾತ್ರಿ ದೇವಾಲಯದಲ್ಲಿ ಆವರಣದಲ್ಲಿ ಶನಿಪ್ರಭಾವ ನಾಟಕ ಪ್ರದರ್ಶನಗೊಂಡಿತು. ಈ ವೇಳೆ ಮಾತನಾಡಿದ ಮಹೇಶ್ವರಶಿವಾಚಾರ್ಯ ಸ್ವಾಮೀಜಿ ಮಳೆಯಿಲ್ಲದೆ ದೇಶದೆಲ್ಲೆಡೆ ಬರಗಾಲ ಎದುರಾಗಿದ್ದು ರೈತರ ಸಂಕಷ್ಟಗಳನ್ನು ನಿವಾರಿಸುವ ಸಲುವಾಗಿ ಮಳೆಯಾಗಲೆಂದು ಚಂಡಿಕಾಯಾಗವನ್ನು ಕೈಗೊಳ್ಳಲಾಗಿದೆ. ಅಲ್ಲದೆ, ಅಮ್ಮನವರಿಗೆ ಬೆಳ್ಳಿರಥದ ಸಮರ್ಪಣೆ ಮಾಡಲು ಭಕ್ತರು ಮುಂದಾಗಿರುವುದು ದೇವಿಯು ಲೋಕವನ್ನು ಸುಭಿಕ್ಷ ವಾಗಿಡಲೆಂಬ ಉದ್ದೇಶವಾಗಿದೆ. ಬುಧವಾರ ಬೆಳಗ್ಗೆ 4 ಗಂಟೆಗೆ ಕಾಳಸ್ತವ ಉತ್ಸವ, ಕೆಂಡೋತ್ಸವ ಹಾಗೂ ಮುಡಿತೆಗೆಯುವ ಕಾರ್ಯಗಳನ್ನು ನಡೆಸಲಾಗುವುದೆಂದರು. ದೇವಸ್ಥಾನದ ಧರ್ಮದರ್ಶಿ ದೊರೆಸ್ವಾಮಿ, ಭರತ್ಗೌಡ, ರಂಗೇಗೌಡ ಇದ್ದರು.
↧
ಹುಲಿಕೆರಮ್ಮನವರ ಜಾತ್ರಾ ಮಹೋತ್ಸವ
↧