Quantcast
Channel: VijayKarnataka
Viewing all articles
Browse latest Browse all 6795

ಇಂಡಸ್ಟ್ರಿಗೆ ಹೊಸ ರಕ್ತದ ಭರವಸೆ: ಸಿನಿಮಾ ಮೈ ಡಾರ್ಲಿಂಗ್‌

$
0
0

* ಅವಿನಾಶ್‌ ಬೈಪಾಡಿತ್ತಾಯ

ಚಿತ್ರ: ಸಿನಿಮಾ ಮೈ ಡಾರ್ಲಿಂಗ್‌ (ಕನ್ನಡ)
ನಿರ್ದೇಶನ: ಗೌರೀಶ್‌ ಅಕ್ಕಿ
ಸಂಗೀತ: ಅಜನೀಶ್‌ ಲೋಕನಾಥ್‌
ಕ್ಯಾಮೆರಾ: ಎಸ್‌.ಕೆ.ರಾವ್‌. ಕ್ಯಾಮೆರಾ, ಸಂಕಲನ: ಚಂದನ್‌

ಸಿನಿಮಾ ಎಂಬುದೇ ಥಳುಕು ಬಳುಕಿನ ಮಾಯಾಪುರಿ. ಅದರ ಮೋಡಿಗೆ ಒಳಗಾಗುವ ಯುವ ಜನರ ತುಡಿತ, ಬಿಟ್ಟರೂ ಬಿಡಲಾಗದ ಬಂಧ, ಸಿನಿಮಾ ಮಾಡಲು ಎದುರಾಗುವ ಕಷ್ಟಗಳು, ಈ ಕ್ಷೇತ್ರದ ಆಂತರಿಕ ಕಾಲೆಳೆಯುವಿಕೆ, ಬದುಕಿನ ತಾಕಲಾಟಗಳು ಮತ್ತು ಕೂಡಿಕೊಳ್ಳುವ-ಮುರಿಯುವ ಸಂಬಂಧಗಳು, ಅನ್ಯಾಯಗಳು , ಹತಾಶೆಗಳು ಇಂಥ ರಸಾಭಿವ್ಯಕ್ತಿಯ ಪರಿಣಾಮ ರೂಪುಗೊಂಡಿದೆ ಒಂದು ಸದಭಿರುಚಿಯ ಚಿತ್ರ ಸಿನಿಮಾ ಮೈ ಡಾರ್ಲಿಂಗ್‌.

ವಾರ್ತಾವಾಹಿನಿಯಲ್ಲಿ ಕಾರ್ಯಕ್ರಮ ನಿರೂಪಕರಾಗಿದ್ದುಕೊಂಡು ಉಳಿದವರಂತಲ್ಲದೆ ಸದ್ದುಗದ್ದಲವಿಲ್ಲದ ಮತ್ತು ಉತ್ಪ್ರೇಕ್ಷೆಯಿಲ್ಲದ ಶೈಲಿಯೊಂದಿಗೆ ಮನೆ ಮಾತಾದವರು ಗೌರೀಶ್‌ ಅಕ್ಕಿ. ಸಿನಿಮಾ ರಂಗದ ಶ್ರೇಷ್ಠರನ್ನು, ಹಿರಿ-ಕಿರಿಯರನ್ನು ಮಾತನಾಡಿಸುತ್ತಲೇ ಈ ರಂಗದ ಒಳತುಡಿತಗಳನ್ನೆಲ್ಲಾ ಹೊರಗೆಳೆದು, ಆ ತಲ್ಲಣಗಳನ್ನೆಲ್ಲ ಕಲೆ ಹಾಕಿ ಇದೀಗ ಚೊಚ್ಚಲ ನಿರ್ದೇಶನದ ಚಿತ್ರವೊಂದನ್ನು ಕಟ್ಟಿಕೊಡುವಲ್ಲಿ ಯಶಸ್ಸು ಸಾಧಿಸಿದ್ದಾರೆ ಅಕ್ಕಿ. ಅವರ ಕ್ರಿಯೇಟಿವಿಟಿ ಚಿತ್ರದ ಪ್ರತಿ ಹಂತದಲ್ಲೂ ಎದ್ದು ಕಾಣುತ್ತದೆ. ಚಿಕ್ಕದಾಗಿದ್ದರೂ ಚೊಕ್ಕ ಸಂದೇಶ ನೀಡುವ ಅವರ ಡೈಲಾಗ್‌ಗಳು ಕೂಡ ಆಪ್ತವಾಗುತ್ತವೆ. ಚಿತ್ರವಂತೂ ವಾಸ್ತವಕ್ಕೆ ಹತ್ತಿರವಾಗಿದೆ.

ಸಿನಿಮಾ ಕನಸು ಕಂಡ ನಾಲ್ವರು ಯುವಕರು, ಒಬ್ಬೊಬ್ಬರ ಕುಟುಂಬದ್ದು ಒಂದೊಂದು ಕಥೆ. ಬೇರೆ ಬೇರೆ ಊರಿನಿಂದ ಬಂದು, ಬೆಂಗಳೂರಿನ ಒಡಲು ಸೇರಿ, ಸಿನಿಮಾ ಎಂದರೆ ತಪಸ್ಸು ಎಂಬುದನ್ನು ಪ್ರತೀ ಹಂತದಲ್ಲಿಯೂ ವ್ಯಕ್ತಪಡಿಸುತ್ತಾರೆ. ಎಲ್ಲರೊಳಗೂ ಒಬ್ಬೊಬ್ಬ ಕಲಾವಿದನಿರುತ್ತಾನೆ. ಸ್ಟಾರ್‌ ಆಗಬೇಕೆಂಬ ತುಡಿತವುಳ್ಳ ನಾಯಕ ವಿಶ್ವ (ವಿಹಾನ್‌ ಗೌಡ), ನಿರ್ದೇಶಕನಾಗುವ ಕನಸು ಹೊತ್ತು, ಕುಟುಂಬವನ್ನೂಘಿ, ಪ್ರೀತಿಯನ್ನೂ ಕಳೆದುಕೊಂಡು ಆತ್ಮಹತ್ಯೆಗೂ ಮುಂದಾಗುವ ಸತ್ಯ (ಮನೋಜವ ಗಲಗಲಿ), ಸಂಗೀತ ನಿರ್ದೇಶನದ ಕನಸಿನ ಬಸವ (ಶಶಿ ದೇಶಪಾಂಡೆ) ಹಾಗೂ ಛಾಯಾಗ್ರಹಣದ ಕನಸು ಹೊತ್ತ ಆದೇಶ (ಶ್ರೇಯಸ್‌), ನಾಯಕಿಯಾಗುವ ಆಸೆಯೊಂದಿಗೆ ಐಟಂ ಸಾಂಗ್‌ ಮೂಲಕ ಚಿತ್ರಕ್ಕೆ ಗ್ಲ್ಯಾಮರ್‌ ಟಚ್‌ ನೀಡಿದ ದೇವಯಾನಿ (ಸಂಜನಾ), ಸ್ನೇಹಿತರಿಗೆ ಆಶ್ರಯ ನೀಡುವ ಮನೆ ಮಾಲೀಕ ರಂಗಣ್ಣ (ರಾಜು ತಾಳಿಕೋಟೆ), ಸಿನಿಮಾ ಕನಸಿಗೆ ಪ್ರತಿ ಹೆಜ್ಜೆಗೂ ಕರೆಗಳ ಮೂಲಕ ಅಡ್ಡಿಯಾಗುವ ಮಂಟೇಸ್ವಾಮಿ (ಸಂಪತ್‌ ಕುಮಾರ್‌), ಮಧ್ಯೆ ಮಧ್ಯೆ ಧುತ್ತನೇ ಬಂದು ನೆನಪಿನಲ್ಲಿ ನಿಲ್ಲುವ ಚಿತ್ರ ನಿರ್ಮಾಪಕನ ಕನಸು ಕಾಣುವ ಯಾಮಾರೇಶ (ಮಿತ್ರ) ಇವರೊಂದಿಗೆ ಮಾನಸ, ಪಾಂಚಾಲಿ, ಮಂಜುಳಾ ಇವರು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನ್ಯಾಯಾೕಶರಂತೂ (ಸುಚೇಂದ್ರ ಪ್ರಸಾದ್‌) ಗಂಭೀರವಾಗಿಯೇ ನಗಿಸುತ್ತಾರೆ. ಸಿನಿಮಾದೊಳಗೆ ನಿರ್ಮಾಣಗೊಳ್ಳುವ ಸಿನಿಮಾ, ಅದಕ್ಕಾಗಿ ಪಡುವ ಪಾಡು, ಸಿನಿಮಾ ಹೇಗೆ ಮಾಡಿದ್ರು, ಆ ಸಿನಿಮಾ ಗೆದ್ದಿತೇ? ಪರಿಣಾಮ ಏನಾಯಿತು ಎಂಬುದು ಈ ಚಿತ್ರದ ಕಥಾ ವಸ್ತು.

'...ಮೈ ಡಾರ್ಲಿಂಗ್‌' ಗಮನ ಸೆಳೆಯುವುದು ಮುಖ್ಯವಾಗಿ ನಾಲ್ಕು ಕಾರಣಗಳಿಗೆ. ಒಂದನೆಯದು ಪಕ್ಕಾ ಕನ್ನಡದ ಸ್ವಮೇಕ್‌ ಚಿತ್ರ. ಎರಡನೆಯದು ಸದ್ದು-ಗದ್ದಲವಿಲ್ಲದೆ ಡೀಸೆಂಟ್‌ ಆದ ಚಿತ್ರವೆಂಬ ಕಾರಣಕ್ಕೆ. ಕಿವಿಗಡಚಿಕ್ಕುವ ಕರ್ಣಕಠೋರ ಸಂಗೀತದೊಂದಿಗೆ ಕೆಟ್ಟದ್ದನ್ನೇ ವೈಭವೀಕರಿಸುವ ಪಕ್ಕಾ ಕಮರ್ಷಿಯಲ್‌ ಚಿತ್ರ ಇದಲ್ಲ; ಆದರೆ, ಚೂರು ಗ್ಲ್ಯಾಮರ್‌, ಸಹಜತೆಗೆ ಹತ್ತಿರವಿರುವ ಫೈಟಿಂಗ್‌ - ಎಷ್ಟು ಬೇಕೋ ಅಷ್ಟೇ ಮಸಾಲೆಯಿಂದಾಗಿ ಗಮನ ಸೆಳೆಯುತ್ತದೆ. ನಾಲ್ಕನೇ ಮತ್ತು ಅತಿಮುಖ್ಯ ಅಂಶವೆಂದರೆ, ಇಂಥ ಒಪ್ಪವಾದ ಚಿತ್ರವನ್ನು ಕಟ್ಟಿಕೊಟ್ಟವರೆಲ್ಲರೂ ಹೊಸಬರು. ಇಲ್ಲೇ ಇರುವುದು ಚಿತ್ರರಂಗಕ್ಕೆ ಹೊಸ ರಕ್ತದ ಛಾಪು.

ಸಿನಿಮಾ ರಂಗದ ಹುಳುಕುಗಳು, ಚಿತ್ರರಂಗದವರ ಕಷ್ಟ, 'ಮಸಾಲೆ' ಜಾಸ್ತಿ ಬೇಕೆಂಬ ನಿರ್ಮಾಪಕರ ಹಠದ ನಡುವೆ ಚಿತ್ರವೊಂದು ಜನಮಾನಸಕ್ಕೆ ಸಂದೇಶ ನೀಡುವಂತಿರಬೇಕೆಂಬ ಛಲ, ವಾಸ್ತವಕ್ಕೆ ಹತ್ತಿರವಾದ ದೃಶ್ಯಗಳು - ಸಮರ್ಥವಾಗಿ ಬಿಂಬಿತವಾಗಿದೆ.

ನಾಯಕಿ ಸಂಜನಾ ಸಿಕ್ಕಿದ ಅವಕಾಶವನ್ನು ಯಶಸ್ವಿಯಾಗಿ ನಿಭಾಯಿಸಿದ್ದರೆ, ನಾಯಕ ವಿಹಾನ್‌ ನಟನೆ ಭರವಸೆ ಮೂಡಿಸಿದ್ದಾರೆ. ರಂಗಣ್ಣನಾಗಿ ರಾಜು ತಾಳಿಕೋಟೆಯವರ ಪಾತ್ರ ಪೋಷಣೆ ಅತ್ಯುತ್ತಮ. ಹೊಸಬರನ್ನು ಕಟ್ಟಿಕೊಂಡು ಚಿತ್ರ ನಿರ್ಮಿಸಿ ಕೈಸುಟ್ಟುಕೊಂಡ ಆತ, ಈ ಹುಡುಗರ ಪ್ರಾಮಾಣಿಕತೆ ಕಂಡು ಮತ್ತೆ ಚಿತ್ರ ನಿರ್ಮಾಣಕ್ಕೆ ಮನ ಮಾಡುತ್ತಾ, ನಗಿಸುತ್ತಲೇ ಹೂಡಿದ ತಂತ್ರಗಾರಿಕೆ, ಆ ಉತ್ತರ ಕರ್ನಾಟಕದ ಭಾಷೆಯ ಮೋಡಿ - ಇದು ಗಮನದಲ್ಲುಳಿಯುವ ಅಂಶ. ಚಿತ್ರ ನಿರ್ದೇಶಿಸುವ ಕನಸು ಕಂಡು, ತನ್ನನ್ನು ಬಯಸಿ ಬಂದವಳು ಬೇರೆಯವನ ಜತೆ ಹಸೆಮಣೆಯೇರಬೇಕಾದಾಗ ವಿಚಲಿತನಾಗಿ, ಅವಳ ಬದುಕಾದರೂ ಹಸನಾಗಿರಲಿ ಎನ್ನುತ್ತಾ ಸತ್ಯ ಮಾಡುವ ಪ್ರೇಮತ್ಯಾಗ, ಆತ್ಮಹತ್ಯೆ ಯತ್ನ ಬಳಿಕ ಸ್ನೇಹಿತರ ಉಪಚಾರದಿಂದ ಮರಳಿ ಚಿಗಿತುಕೊಂಡು, ಉದ್ದೇಶ ಸಫಲವಾದ ಬಳಿಕ ಭಗ್ನ ಪ್ರೇಮಿಗಳಿಬ್ಬರ ನಡುವೆ ಮೌನವೇ ಮಾತಾಗುವ ಅಭಿನಯ ಮನ ತಟ್ಟುತ್ತದೆ. ಮತ್ತೊಂದೆಡೆ, ಸಮಾಜಕ್ಕೆ ಕೆಟ್ಟ ಸಂದೇಶ ನೀಡುವ ಚಿತ್ರರಂಗವನ್ನು ಅದರೊಳಗೆ ಹೊಕ್ಕೇ ಮುಗಿಸಬೇಕೆಂಬ ದರ್ಪ ತೋರುವ ಮಂಟೇಸ್ವಾಮಿ ಖಳ ಎನ್ನುವುದಕ್ಕಿಂತಲೂ ಪ್ರತಿನಾಯಕನಾಗಿ ಮಿಂಚುತ್ತಾರೆ.

ಮದ್ಯ ಪಾನದ ಎಚ್ಚರಿಕೆ ಡಿಸ್‌ಪ್ಲೇಯಲ್ಲಿ 'ಮಧ್ಯ'ಪಾನವಾಗಿದ್ದು, ಮಂಗಳೂರು ಕನ್ನಡದ ಬಳಕೆಯಲ್ಲಿ ಅಸಹಜತೆ ಕಾಡಿತು. ಅದು ಹೊರತುಪಡಿಸಿ, ಅಜಿನೇಶ್‌ ಅವರ ಸಂಗೀತ, ನಾಲ್ಕು ಹಾಡುಗಳಿಗೆ ವಿ.ನಾಗೇಂದ್ರ ಪ್ರಸಾದ್‌, ಜಯಂತ ಕಾಯ್ಕಿಣಿ, ಗೋಪಾಲ ವಾಜಪೇಯಿ ಅವರ ಸಾಹಿತ್ಯವಿದ್ದು, ನಿರ್ದೇಶನ ಜತೆ ಸಂಭಾಷಣೆ ಹಾಗೂ ಸ್ಕ್ರೀನ್‌ ಪ್ಲೇ ನಿರ್ವಹಿಸಿದವರು ಗೌರೀಶ್‌. ಛಾಯಾಗ್ರಹಣದಲ್ಲಿ ಕಿರಣ್‌ ಭರವಸೆ ಮೂಡಿಸಿದ್ದಾರೆ.

'...ಮೈ ಡಾರ್ಲಿಂಗ್‌' ಚಿತ್ರದಲ್ಲಿ ಬದುಕಿನ ಅನಿವಾರ್ಯತೆಯಿದೆ, ಯುವಜನರ ನಿರೀಕ್ಷೆ ಇದೆ, ಒಡಲಲ್ಲಿ ಧುತ್ತನೇ ಮೇಲೆದ್ದು ಬರುವ ವಯೋಸಹಜ ಪ್ರೀತಿಯನ್ನು ಅದುಮಿಟ್ಟುಕೊಳ್ಳಬೇಕಾದ ಅನಿವಾರ್ಯತೆಯಿದೆ, ಪರಸ್ಪರರ ಕಷ್ಟಕ್ಕೆ ಸ್ಪಂದಿಸುವ ಸ್ನೇಹವಿದೆ, ಸ್ನೇಹದ ಪರಾಕಾಷ್ಠೆಯಾದ ಜಗಳವೂ ಇದೆ, ಒಂದಿಷ್ಟು ನಗುವಿನ ಕಚಗುಳಿ, ಅಲ್ಲಲ್ಲಿ ಕಾಡುವ ಎಮೋಶನ್‌ಗಳು, ಎಲ್ಲೂ ಅತಿ ಎನಿಸದಂಥ ಗ್ಲ್ಯಾಮರ್‌, ಫೈಟುಗಳ ಮಸಾಲೆ, ಗದ್ದಲವೆನಿಸದ ಸಂಗೀತ, ಸೈ ಅನ್ನಿಸುವ ಛಾಯಾಗ್ರಹಣ ಜತೆಗೆ ಗೌರೀಶ್‌ ಅವರ ವ್ಯಕ್ತಿತ್ವವನ್ನೇ ಬಿಂಬಿಸುವಂತಹಾ ಶಿಸ್ತು ಇದೆ. ಹೊಸಬರ ಚಿತ್ರವೆಂದು ಮೂಗು ಮುರಿಯದೆ, ಅಬ್ಬರವಿಲ್ಲದೆ ನೀಟಾಗಿಯೇ ಒಂದು ಉತ್ತಮ ಸಂದೇಶವನ್ನು ಸಮಾಜಕ್ಕೆ ಕೊಡಬಹುದೆಂದು ತೋರಿಸಿಕೊಟ್ಟಿದೆ ಈ ತಂಡ. ಕನ್ನಡ ಚಿತ್ರರಂಗಕ್ಕೆ ಹೊಸ ರಕ್ತ ಬೇಕೆಂಬ ಭಾವನೆ ಮೂಡಿಸಲು ಇಷ್ಟು ಸಾಕು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


 ಕೌಟುಂಬಿಕ ಕಲಹ ಹಿನ್ನೆಲೆ; ಬುದ್ದಿವಾದ ಹೇಳಿದ ತಂಗಿಯನ್ನೇ ಕೊಂದ ಅಣ್ಣ…


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


‘ಒಡಕು ಮೂಡಿಸಿದ ಸಿದ್ಧರಾಮಯ್ಯ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>