ಶ್ರೀ ಶಾಂತ್ ಅವರಿಗೆ ತ್ರಿಪುಣಿತ್ತರ ಇಲ್ಲವೇ ಎರ್ನಾಕುಲಂನಿಂದ ಟಿಕೆಟ್ ನೀಡುವ ವಿಚಾರದಲ್ಲಿ ರಾಜ್ಯ ಬಿಜೆಪಿ ನಾಯಕತ್ವ ಯಾವುದೇ ಸಲಹೆ, ಸೂಚನೆಯನ್ನು ಬಿಜೆಪಿಯ ಕೇಂದ್ರ ನಾಯಕತ್ವಕ್ಕೆ ನೀಡಿಲ್ಲ. ಶ್ರೀ ಶಾಂತ್ ಅವರು ಕೂಡ ಪಕ್ಷದ ರಾಜ್ಯಘಟಕದ ನಾಯಕತ್ವವನ್ನು ಭೇಟಿ ಮಾಡಿಲ್ಲ, ಯಾವುದೇ ಮಾತುಕತೆ ನಡೆಸಿಲ್ಲ. ಅವರಿಗೆ ಪಕ್ಷದಿಂದ ಟಿಕೆಟ್ ನೀಡಲಾಗುವ ಬಗ್ಗೆ ನಡೆದಿರುವ ಯಾವುದೇ ಬೆಳವಣಿಗೆ ಕುರಿತು ಪಕ್ಷದ ಕೇಂದ್ರ ನಾಯಕತ್ವ ಬಿಜೆಪಿಯ ರಾಜ್ಯ ನಾಯಕತ್ವಕ್ಕೆ ತಿಳಿಸಿಲ್ಲ ಎಂದು ಎಂದು ರಾಜ್ಯ ಬಿಜೆಪಿಯ ಮಾಜಿ ಅಧ್ಯಕ್ಷರು ಹೇಳಿದ್ದಾರೆ.
ತಾನು ಎರ್ನಾಕುಲಂ ಇಲ್ಲವೇ ತ್ರಿಪುಣಿತ್ತರದಿಂದ ಬಿಜೆಪಿ ಅಭ್ಯರ್ಥಿಯಾಗಿ ರಾಜಕೀಯ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿರುವುದಾಗಿ ಶ್ರೀಶಾಂತ್ ಮಂಗಳವಾರ ಹೇಳಿಕೊಂಡಿದ್ದಾರೆ. ಆದರೆ ತ್ರಿಪುಣಿತ್ತರರದಿಂದ ತೌರವೂರ್ ವಿಶ್ವಂಭರಣ್ ಅವರು ಬಿಜೆಪಿ ಅಭ್ಯರ್ಥಿ ಎಂಬುದಾಗಿ ಬಹುತೇಕ ನಿರ್ಧಾರಗೊಂಡಿದೆ.
ಚಿತ್ರ ನಿರ್ದೇಶಕ ರಾಜೇಶನ್ ಮತ್ತು ನಟರಾದ ಕೊಲ್ಲಂ ತುಳಸಿ ಅವರು ಕ್ರಮವಾಗಿ ತಿರುವನಂತಪುರ, ಕೊಲ್ಲಂನ ಪತನ್ಪುರ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಪಕ್ಷ ಬಹುತೇಕ ಖಚಿತಪಡಿಸಿಕೊಂಡಿದೆ ಎಂದು ರಾಜ್ಯ ಘಟಕದ ಕೆಲವು ಹಿರಿಯ ನಾಯಕರು ಹೇಳಿದ್ದಾರೆ.
ಒಟ್ಟಿನಲ್ಲಿ ರಾಜ್ಯ ಬಿಜೆಪಿ ಘಟಕ ಮತ್ತು ಕೇಂದ್ರ ನಾಯಕತ್ವದಲ್ಲಿ ಎಲ್ಲವೂ ಸರಿಯಾಗಿಲ್ಲ, ಅಸಮಾಧಾನ ಹೊಗೆಯಾಡುತ್ತಿದೆ ಎಂಬುದು ಸ್ಪಷ್ಟವಾಗಿದೆ.
ತಿರುವನಂತಪುರ: ಮುಂಬರುವ ಕೇರಳ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಬಿಜೆಪಿ ಕೇಂದ್ರ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದಾಗಿ ಕ್ರಿಕೆಟ್ ಪಟು ಎಸ್.ಶ್ರೀಶಾಂತ್ ಅವರು ಹೇಳಿರುವುದು ಅಚ್ಚರಿ ಹುಟ್ಟಿಸಿದೆ ಎಂದು ರಾಜ್ಯ ಬಿಜೆಪಿ ನಾಯಕತ್ವ ಹೇಳಿದೆ.