* ಶರಣು ಹುಲ್ಲೂರು
ಕನ್ನಡದಲ್ಲಿ ಸದ್ಯ ಹಾರರ್ ಸಿನಿಮಾ ಸುಗ್ಗಿ. ಹೆದರಿಸುವ ಇಂಥ ಚಿತ್ರಗಳು ವಾರಕ್ಕೊಂದು ತೆರೆ ಕಾಣುತ್ತಿವೆ. ಈ ಸಾಲಲ್ಲಿ ಹೊಸದಾಗಿ ಸೇರಿದ್ದು ಊಜಾ ಸಿನಿಮಾ. ಮರ ಸುತ್ತುವ ಪ್ರೇಮಿಗಳ ಕತೆಗಿಂತ ಹೆದರಿಸುವ ಮತ್ತು ನಗಿಸುವ ಚಿತ್ರ ಮಾಡುವುದು ತೀರಾ ಕಷ್ಟ. ಆದರೂ, ನಿರ್ದೇಶಕರು ಕಷ್ಟದ ಹಾದಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಕಾರಣ ಮಾತ್ರ ಸಸ್ಪೆನ್ಸ್.
ಕಡಿಮೆ ಬಜೆಟ್ ಅಂತಲೋ ಅಥವಾ ಶೂಟಿಂಗ್ ಮಾಡುವುದು ಸುಲಭ ಅಂತಲೋ ಹಾರರ್ ಚಿತ್ರಗಳನ್ನು ನಿರ್ಮಾಣ ಮಾಡಿದ್ದುಂಟು. ಊಜಾ ಸಿನಿಮಾ ಈ ಕೆಟಗರಿಗೆ ಸೇರುವುದಿಲ್ಲ. ದೃಶ್ಯಗಳನ್ನು ಶ್ರೀಮಂತವಾಗಿ ಚಿತ್ರೀಕರಿಸಿದ್ದರೂ, ಹಾರರ್ ಥ್ರಿಲ್ ನೀಡುವುದರಲ್ಲಿ ಸಿನಿಮಾ ಸೋಲುತ್ತದೆ. ಇಡೀ ಸಿನಿಮಾ ಗ್ಲಾಮರ್ನಲ್ಲೇ ಕಳೆದು ಹೋಗುತ್ತದೆ.
ಸಿನಿಮಾದಲ್ಲಿ ಹೊಸತು ಅಂದರೆ ಕತೆ. ಆತ್ಮಗಳನ್ನು ಆಹ್ವಾನ ಮಾಡಿಕೊಳ್ಳುವ ಊಜಾ ಆಟವೇ ಕನ್ನಡಕ್ಕೆ ಹೊಸದು. ಕತೆಯಿಂದಾಗಿ ಸಿನಿಮಾ ಕುತೂಹಲ ಮೂಡಿಸಿದರೂ, ನಿರೂಪಣೆಯಲ್ಲಿ ಎಡುವುತ್ತದೆ. ಭಯ ಪಡಿಸುವಲ್ಲಿ ತೆವಳುತ್ತದೆ. ಹಿನ್ನೆಲೆ ಸಂಗೀತದ ಮೂಲಕ ಹೆದರಿಸಲು ಹೊರಟಿರುವ ನಿರ್ದೇಶಕ ರಾಜ್ಕುಮಾರ್ ರೆಡ್ಡಿಯ ಪ್ರಯತ್ನ ಭಯ ಪಡಿಸುವ ಬದಲು, ನಗೆ ತರಿಸುತ್ತದೆ.
ಊಜಾ ಆಟ ಆಡುವುದು ಹೇಗೆ ಎಂಬುದನ್ನು ಕಲಿಸುವ ಈ ಸಿನಿಮಾ, ಹಾಡುಗಳಿಂದ ಪ್ರೇಕ್ಷಕರ ಸಹನೆ ಪರೀಕ್ಷೆ ಮಾಡುತ್ತದೆ. ಬರುವ ನಾಲ್ಕು ಹಾಡುಗಳನ್ನು ಕೇಳಿಸಿಕೊಳ್ಳುವುದಕ್ಕಿಂತ ನೋಡುವುದೇ ಚೆಂದ (ಕ್ಷಮಿಸಿ, ನೃತ್ಯವನ್ನು ಪರಿಗಣಿಸುವಂತಿಲ್ಲ). ಹಾರರ್ ಮತ್ತು ಸಸ್ಪೆನ್ಸ್ ಚಿತ್ರಕ್ಕೆ ಬೇಕಿರುವ ಕುತೂಹಲದ ತಿರುವುಗಳು ತೀರಾ ಕಡಿಮೆ. ನಾಯಕ ಬಾಲು (ಭರತ್), ನಾಯಕಿಯರಾದ ಕೃಷ್ಣಾಯನಿ (ಮಾಧುರಿ ಇಟಗಿ), ಚೈತ್ರಾ (ಗಾಯತ್ರಿ) ಮತ್ತು ನಿಹಾರಿಕಾ (ಕಾದಂಬರಿ) ಕೇವಲ ಕುಣಿತಕ್ಕೆ ಸೀಮಿತ ಆಗಿದ್ದಾರೆ. ಇರುವುದರಲ್ಲೇ ಗಾಯತ್ರಿ ಗಮನ ಸೆಳೆಯುತ್ತಾರೆ. ಮಾಧುರಿ ಮತ್ತು ಅವಿನಾಶ್ರನ್ನು ಹೊರತು ಪಡಿಸಿದರೆ, ಉಳಿದವರಿಗೆ ಕನ್ನಡ ಬಾರದು. ಹೀಗಾಗಿ ತುಟಿ ಚಲನೆಗೂ ಭಾವಕ್ಕೂ ಭಾರೀ ವ್ಯತ್ಯಾಸ ಕಾಣುತ್ತದೆ. ನೋಡುವುದಕ್ಕೆ ಅದು ಕಿರಿಕಿರಿಯೂ ಅನಿಸುತ್ತದೆ. ಡಬ್ಬಿಂಗ್ ಸಿನಿಮಾನಾ ಅನ್ನುವ ಅನುಮಾನವನ್ನೂ ಬಿತ್ತುತ್ತದೆ.
ಕನ್ನಡ ಚಿತ್ರ